Thursday 20 March 2014


ಯಾಕೆ ಮೂಕನಾದ್ಯೋ ಗುರುವೇ ನೀ ??  ಸುದ್ದಿ ತಿಳಿದೊಡನೆಯೇ ದುಃಖದಲ್ಲಿ ಇದನ್ನು ಬರೆಯುತ್ತಿದ್ದೇನೆ. ಹೇಳಿಕೊಳ್ಳ ಬೇಕು ಎನಿಸಿದ್ದನ್ನ ಹೇಳಿಕೊಳ್ಳುತ್ತಿದ್ದೇನೆ.   ಶ್ರೀರಾಘವೇಂದ್ರ ತೀರ್ಥ ಕರುಣಾಪಾತ್ರರೆ ಶ್ರೀ ಧೀರೇಂದ್ರ ತೀರ್ಥ ಸಂಪ್ರದಾಯ ರಕ್ಷಕರೇ ಶ್ರೀ ಸುಶೀಲೆಂದ್ರ ತೀರ್ಥ ಕೃಪಾ ಪಾತ್ರರೆ.. ಶ್ರೀ ಸುಯಮೀಂದ್ರ ತೀರ್ಥ ಕೃಪಾಪೋಷಿತರೆ.. ಶ್ರೀ ಸುಶಮೀಂದ್ರ ತೀರ್ಥ ಕರಕಮಲ ಸಂಜಾತರೇ , ನವಮಂತ್ರಾಲಯದ ಶಿಲ್ಪಿಗಳೇ .. ಶ್ರೀ ಸುಬುಧೇಂದ್ರ ತೀರ್ಥ ಸ್ವರೂಪೋದ್ಧಾರಕರೇ .. ಸ್ವಾಮಿ ನಿಮ್ಮಲ್ಲಿ ಅದೆಷ್ಟು ಸದ್ಗುಣಗಳು ರಾರಾಜಿಸುವವು !! ಶ್ರೀ ಸುಶಮೀಂದ್ರ ತೀರ್ಥರಿಂದ ಆಶ್ರಮ ಪಡೆದು ಗುರುಗಳ ಸೇವೆಯನ್ನು ನಿರಂತರ ಮಾಡಿದಿರಿ .. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಚಾಚೂ ತಪ್ಪದೆ ನಡೆದಿರೀ. ಸುಶಮೀಂದ್ರ ಗುರುಗಳು ಕಾಲವಾದ ಕಠಿಣ ಪರಿಸ್ಥಿತಿಯಾ ಬೆನ್ನಲ್ಲೇ ಮಂತ್ರಾಲಯ ಪ್ರವಾಹಕ್ಕೆ ಸಿಲುಕಿಕೊಂಡಿತ್ತು.. ಆದರೆ ಪ್ರವಾಹ ನಿಂತ ಕ್ಷಣದಿಂದಲೇ ಮಂತ್ರಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ರಾಯರೆದುರು ಸಂಕಲ್ಪ ಮಾಡಿ ಧುಮುಕಿದಿರಿ.. ಯಾವುದೇ ಕ್ಷಣದಲ್ಲೂ ಎದೆ ಗುಂದಲೇ ಇಲ್ಲ . ನಿಮ್ಮ ಪೂರ್ವಾಶ್ರಮ ಪುತ್ರರಾದ ಶ್ರೀ ಸುಯಮೀಂದ್ರ ಆಚಾರ್ಯರಲ್ಲಿ ನಿಂತು ಎಲ್ಲ ಕಾರ್ಯವನ್ನು ಮಾಡಿಸಿದಿರಿ.. ಸಮಸ್ತ ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಕೊರೆದೊಯ್ದಿರಿ.. ಇಂದು ಅನೇಕ ಪೀಠಾಧಿಪತಿಗಳು , ಅನೇಕ ಸಜ್ಜನ ಭಕ್ತರು ರಾಯರ ಸನ್ನಿಧಿಯನ್ನು ಇಂದ್ರನ ಅಮರಾವತಿಗೆ ಹೊಲಿಸುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ತಾವಲ್ಲದೆ ಇನ್ನಾರು ಸ್ವಾಮಿ ? ಸುಶಮೀಂದ್ರ ತೀರ್ಥರ ಪ್ರಥಮ ಮಹಾಸಾಮಾರಧನೆ ಬರುವಷ್ಟರಲ್ಲೇ ಅನೇಕ ಯೋಜನೆಗಳು ಸಿದ್ಧಗೊಂದಿದ್ದವು. ಶ್ರೀಮಠವನ್ನ ನಂಬಲೂ ಅಸಾಧ್ಯ ಎಂಬ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಮೂಲರಾಮನ ಕೃಪೆ , ರಾಯರ ಕೃಪೆ ನಿಮ್ಮ ಮೇಲೆ ಎಷ್ಟಿತ್ತು ಅನ್ನೋದನ್ನ ತೋರಿಸುತ್ತದೆ.. ಸ್ವಾಮಿ ಈ ಸಾಧನೆ ಮಾಡಲು , ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಒಯ್ಯಲು ತಾವು ನೆಚ್ಚಿಕೊಂಡಿದ್ದ ತಪಸ್ಸು ಅಸಾಧಾರಣವೇ !! ದಿನಕ್ಕೆ ಹತ್ತಾರು ಘಂಟೆ ಕೇವಲ ಜಪ-ತಪದಲ್ಲೇ ಇದ್ದು ಯಾವಾಗಲೂ ರಾಯರನ್ನೇ ನೆನೆದ ನಿಮ್ಮ ಕರೆಗೆ ಓ ಕೊಟ್ಟೇ ರಾಯರು ಅಷ್ಟು ಭರದಲ್ಲಿ , ಸುಸಜ್ಜಿತವಾಗಿ ತಮ್ಮ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡಿಸಿಕೊಂಡಿದ್ದಾರೆ.
                         ಶ್ರೀ ಧೀರಸಿಂಹರ ಸನ್ನಿಧಿಯಲ್ಲಿ ದೇವೇಂದ್ರನನ್ನೇ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮೆರೆಸಿದಿರಿ. ನಿಮ್ಮ ಆ  ಸುಧಾಮಂಗಳವನ್ನು ಪೇಜಾವರ ಶ್ರೀಗಳು ಸಹ ಬಹಳವಾಗಿ ಮೆಚ್ಚಿಕೊಂಡಿದ್ದರು. ಅದಲ್ಲದೆ ತಾವು ಮಂತ್ರಾಲಯ ಕ್ಷೇತ್ರದಲ್ಲಿ ನಡೆಸಿದ ಮತ್ತೊಂದು ಸುಧಾಮಂಗಲವೂ ಅದ್ಭುತ ರೀತಿಯಲ್ಲಿ ನಡೆದದ್ದು ಇತಿಹಾಸ. ಶ್ರೀ ರಾಯರ ಸೇವೆ ಮಾಡ ರಾಯರ ಪೀಠ ಏರಿದ ನಿಮ್ಮ ಜೀವನ ಸಾರ್ಥಕ ಪ್ರಭು..
                         ಇನ್ನು ಸುಂಕಾಪುರದಲ್ಲಿ ಶ್ರೀಮಠದ ಅಂಗಸಂಸ್ಥೆಯಾದ ಪ್ರಹ್ಲಾದ ಯುವಕ ಮಂಡಳದ ನೇತೃತ್ವದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮ ಸಂದರ್ಭದಲ್ಲಿ ತೊಂದರೆ ತಂದೊಡ್ಡಲು ತಯಾರಾಗಿ ನಿಂತಿದ್ದ ಮಳೆರಾಯನನ್ನು ಕೇವಲ ತಮ್ಮ ಮಂತ್ರ ಬಲದಿಂದ ನಿಲ್ಲಿಸಿದ್ದು.. ಕೇವಲ ಸುಂಕಾಪುರ ಗ್ರಾಮ ಬಿಟ್ಟು ಉಳಿದ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಜೋರಾಗಿ ಮಳೆಯಾಗಿ ಅಲ್ಲಿ ಮಾತ್ರ ಆಗದೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದಿರಿ.. ಹೀಗೆ ಬೇಕೆಂದಾಗ ಮಳೆಯನ್ನೂ ಬರೆಸಿ , ಬೇಡವಾದಾಗ ಮಳೆಯನ್ನು ನಿಲ್ಲಿಸಿ  ಪವಾಡಗಳನ್ನೂ ತೋರಿಸಿದಿರಿ..
                           ಬಳ್ಳಾರಿಯ  ದಿಗ್ವಿಜಯ ಸಂದರ್ಭದಲ್ಲಿ ಅಲ್ಲಿನ ಭಕ್ತರು ಬರಗಾಲದ ಬಗ್ಗೆ ನಿವೆದಿಸಿದಾಗ ನೀವು  ಶ್ರೀ ರಾಯರಲ್ಲಿ ನಿವೆದಿಸುತ್ತೇವೆ ಎಂದಾಗ ಯಾರಿಗೂ ಏನೂ ತಿಳಿಯದಾಯಿತು. ಆಮೇಲೆ ನೀವು ರಾಯರನ್ನು  ಸಂಪರ್ಕಿಸಿ " ರಾಯರು ಅಭಯ ನೀಡಿದ್ದಾರೆ " ಎಂದು ಘಂಟಾಘೋಷವಾಗಿ ಹೇಳಿ , ಅದರಂತೆ ಆಗಿ ಎಲ್ಲರನ್ನು ಸಂತೋಷ ಗೊಳಿಸಿ.. ನಿಮ್ಮ ವಿನಂತಿಯ ಪ್ರಕಾರ ರಾಯರು ತೋರಿದ ಅದ್ಭುತ ಪವಾಡ.
                        ನೀವು ಪೀಠಾಧಿಪತ್ಯ ವಹಿಸಿಕೊಂಡ ನಂತರದಲ್ಲೇ ನಡೆದ ಜ್ಞಾನಕಾರ್ಯ ನಿಮ್ಮ ಗುರುಗಳನ್ನು ನೆನೆಸುತ್ತವೆ. ವರ್ಷಕ್ಕೆ ಎರೆಡು  ಬಾರೆ ಸಮೀರ ಸಮಯ ಸಂವರ್ಧಿನಿ ಸಭೆಯನ್ನು ತಪ್ಪದೆ ನಡೆಸಿದಿರಿ.. ವಿದ್ವಜ್ಜನರ ಪೋಷಣೆಯಲ್ಲಿ ಸದಾ ರಾಯರ ಮಠ ಸನ್ನದ್ಧ ಎಂದು ತೋರಿಸಿದಿರಿ. ಶ್ರೀರಂಗಂ , ಉಡುಪಿ ಹೀಗೆ ಅನೇಕ ಕಡೆ ನಡೆಸಿದಿರಿ. ಶ್ರೀ ರಾಯರ ಮಠಕ್ಕೆ ಇದ್ದ ವಿದ್ಯಾ ಮಠ ಎಂಬ ಬಿರುದನ್ನು ಸಾರ್ಥಕ ಗೊಳಿಸಿದಿರಿ.. 
                        ಇನ್ನು ನಿಮ್ಮ ಕಾಲದಲ್ಲೇ ಆದ ಸೋದೆ ಮಠದ ಶ್ರೀಗಳಾದ ಪರಮಪುಜ್ಯ ಶ್ರೀ ವಿಶ್ವವಲ್ಲಭ ತೀರ್ಥರ ಸಹಯೋಗದೊಂದಿಗೆ ತಾವೇ ಆಚಾರ್ಯ ಮಧ್ವರ ಕಾರ್ಯಕ್ಷೇತ್ರ ಉಡುಪಿಯಲ್ಲಿ ಏರ್ಪಡಿಸಿದ ಸಮೀರ ಸಮಯ ಸಂವರ್ಧಿನಿ ಸಭೆಯಂತೂ ಎಲ್ಲರ ಮನೆಮಾತಾಗಿದೆ. ನೀವು ನಡೆಸಿದ ಈ ಸಭೆ ಪದ್ಮನಾಭ ತೀರ್ಥರು ಹಾಗು ವಿಷ್ಣು ತೀರ್ಥರ ಕಾಲದಿಂದಲೂ ಇದ್ದ ಉಭಯ ಮಠಗಳ ಸ್ನೇಹಯಾತ್ರೆಯನ್ನು ಮುಂದುವರೆಸಿ ಇನ್ನು ಹೆಚ್ಚಾಗುವಂತೆ ಮಾಡಿ ಶ್ರೀ ವಾದಿರಾಜ-ವಿಜಯೀಂದ್ರ-ರಾಘವೇಂದ್ರ ರಾಯರ ಸೇವೆಯನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ.
                        ಇದರ ಜೊತೆ ಜೊತೆಗೇನೆ ಅನಾರೋಗ್ಯ ವಿದ್ದರೂ ಅನೇಕ ಕಡೆ ಸಂಚರಿಸಿ , ಸಂಪರ್ಕಿಸಲು ಆಗದೇ ಇದ್ದ ಕ್ಷೇತ್ರಗಳ ಶಿಷ್ಯರು ಶ್ರೀಮಠಕ್ಕೆ ಬಂದಾಗ ಅತೀ ಪ್ರೀತಿ ಇಂದ ಅನುಗ್ರಹಿಸಿ ಸನ್ಮಾರ್ಗ ಪ್ರೇರಕರಾಗಿದ್ದಿರಿ..

ಯಾಕೋ ಮೂಕನಾದ್ಯೋ ಗುರುವೇ ನೀ ?? ಸುಯತೀಂದ್ರ ತೀರ್ಥ ಎಂಬ ಯತಿಗಳಲ್ಲಿ ಒಳ್ಳೆಯವರಾದ " ಸುಯತಿ" ಎಂಬ "ಅನರ್ಘ್ಯ ರತ್ನ " ಒಂದು ನಮ್ಮನ್ನಗಿದೆ.. ಶ್ರೀ ಸುಶಮೀಂದ್ರರು ದಯಪಾಲಿಸಿದ ಕಣ್ಣು ನಮಗೆ ಕಾಣದಾಗಿದೆ. ಶ್ರೀ ಸುಭುಧೇಂದ್ರ ತೀರ್ಥರಲ್ಲಿ ಸದಾ ಇದ್ದು ಅವರಿಗ್ಗೋ ಪ್ರೆರಕರಾಗಿ ಶ್ರೀ ಮಠದ ಭವ್ಯ ಪರಂಪರೆಯನ್ನು ಮುಂದೇ " ಪೀಠಾಧಿಪತಿಗಳಾಗಿ" ಬೆಳಗುವಂತೆ ಆಶೀರ್ವದಿಸಿ , ನಮ್ಮನ್ನು ಉದ್ಧರಿಸಬೇಕು ಪ್ರಭು ಅಂತ ಪ್ರಾರ್ಥಿಸುವೆ..                       


Thursday 13 March 2014

ಶ್ರೀ ಧೀರೇಂದ್ರ ತೀರ್ಥರ ಸಂಕ್ಷಿಪ್ತ ಚರಿತ್ರೆ - ಸಂಗ್ರಹ- ಶ್ರೀಪಾದಸೇವಕ ಸಮೀರ ಜೋಷಿ



ಶ್ರೀಮನ್ಮೂಲರಾಮೋ ವಿಜಯತೆ                                                                  ಶ್ರೀಗುರುರಾಜೋ ವಿಜಯತೆ


ಪೂರ್ವಾಶ್ರಮ-
                 ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್ ಶ್ರೀಮದಾಚಾರ್ಯರ  ಪೀಠವನ್ನು  ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ  ವಿದ್ಯಾಭ್ಯಾಸ ಮಾಡುವ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ " 'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' , ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ    ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ  ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀ ರಾಯರ ಮೂಲಬೃಂದಾವನವು ರಾಯರ ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಈ ಘಟನೆ ತಿಳಿದು ಶ್ರೀ ಜಯರಾಮಚಾರ್ಯರು ಉತ್ಸುಕರಾಗಿ ಅದನ್ನು ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) .  ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅಂತ ಅಂದುಕೊಂಡು ಆಚರ್ಯರಿಗೆ ಸೂಕ್ಷ್ಮವಾಗಿ "  ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.



              ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ ಮತ್ತೆ ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಈ ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯ ವೃದ್ದಿಗೆ ಇದು ಕಾರಣವಾಯಿತು .
              ಶ್ರೀ ವಾದೀಂದ್ರ ತೀರ್ಥರ ಹೃದ್ಗತ ವಿಷಯವನ್ನು ಅರಿತಿದ್ದ ಶ್ರೀ ವಸುಧೇಂದ್ರ ತೀರ್ಥರು , ಶ್ರೀ ಜಯರಾಮಚಾರ್ಯರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದರು . ಶ್ರೀಹರಿಯ ಸಂಕಲ್ಪ ಬೇರೆಯೇ ಇತ್ತು . ಶ್ರೀ ವಸುಧೇಂದ್ರ ತೀರ್ಥರು ಕೆಂಚನಗುಡ್ಡ ದ ಪ್ರದೇಶದಲ್ಲಿ ಸಂಚಾರದಲ್ಲಿ ಇದ್ದಾಗ ದೇಹಾಲಸ್ಯವಾಗಿ ಶ್ರೀ ವರದೇಂದ್ರ ತೀರ್ಥರಿಗೆ ತುರ್ತಾಗಿ ಆಶ್ರಮ ಪ್ರದಾನ ಮಾಡಿಸಿ ಅಲ್ಲಿಯೇ ವೃಂದಾವನಸ್ಥರಾದರು. ಮಹಾ ತಪಸ್ವಿಗಳಾಗಿದ್ದ ಶ್ರೀಗಳು ಇಂದಿಗೂ ಅಲ್ಲಿಯೇ ಸನ್ನಿಹಿತರಾಗಿ ಭಕ್ತರ ಅಭೀಷ್ಟ ಪೂರೈಸುತ್ತಿದ್ದಾರೆ. ಅಲ್ಲಿ ಯಾರಾದರೋ ದೇಹ ಶುದ್ಧಿ ಇಲ್ಲದೆ ಹೋದಲ್ಲಿ ಶಿಕ್ಷೆ ಮಾತ್ರ ಖಂಡಿತ . ಅಷ್ಟು ಜಾಗ್ರತ ಶ್ರೀ ವಸುಧೇಂದ್ರರ ಪುಣ್ಯ ಕ್ಷೇತ್ರ.
              ಇತ್ತ ಶ್ರೀ ವಸುಧೇಂದ್ರ ತೀರ್ಥರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಶ್ರೀ ವರದೇಂದ್ರ ತೀರ್ಥರು ಮಹಾ ತಪಸ್ವಿಗಳು , ದಾಸಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರಿಗೆ ವಿದ್ಯೆ ಕೊಟ್ಟು ಸಲುಹಿದ ಮಹಾ ಗುರುಗಳು. ಶ್ರೀ ಜಯರಾಮಾಚಾರ್ಯರು ನೂತನ ಯತಿಗಳನ್ನು ಸಂಧಿಸಲು ಆಗಮಿಸಿದರು . ಒಮ್ಮೆ ಪುಣ್ಯನಗರಿ ( ಈಗಿನ ಪುಣೆಯಲ್ಲಿ) ಯಲ್ಲಿ ಪೇಶ್ವೆಗಳ ಪ್ರಧಾನ ನ್ಯಾಯಾಧೀಶನಾಗಿದ್ದ ಅದ್ವೈತಿ ಪಂಡಿತನೊಬ್ಬ ಶ್ರೀ ವರದೇಂದ್ರ ತೀರ್ಥರಿಗೆ ಬಹಿರಂಗವಾಗಿ ವಾದಿ ದಿಗ್ವಿಜಯಕ್ಕೆ ಆಹ್ವಾನ ನೀಡಿದ . ವಾದಕ್ಕೆ ವೇದಿಕೆ ಸಜ್ಜಾಯಿತು. ಶ್ರೀಯವರು ಗಾಂಭೀರ್ಯದಿಂದ ವಿರಾಜಮಾನರಾಗಿ ಪೇಶ್ವೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಿದ್ದ ಮರ್ಯಾದೆಗಳನ್ನೆಲ್ಲ ಸ್ವೀಕರಿಸಿದರು. ಆಮೇಲೆ ಪಣ ನಿರ್ಧಾರದ ಸಮಯ. ಆಗ ಪೆಶ್ವೆಯಾ ನ್ಯಾಯಾಧೀಶ ಗೆದ್ದೇ ಗೆಲ್ಲುವೆ ಎಂಬ ಅಹಂಕಾರದಿಂದ " ಶ್ರೀಗಳವರ ಬಣ ವಾದದಲ್ಲಿ ಸೋತರೆ ಸಂಸ್ಥಾನವನ್ನು ಬಿಟ್ಟು ಬಿಡಿ ಸನ್ಯಾಸಿಗಳಂತೆ ಅಡ್ದಾಡಬೇಕು" ಎಂದು ಹೇಳಿದ. ಅದಕ್ಕೆ ಶ್ರೀಯವರು ಮಂದಹಾಸ ಬೀರಿ " ಆಗಲಿ , ನೀವೇನಾದರೂ ಸೋತರೆ ಈ ಭವ್ಯವಾದ ಮನೆಯನ್ನು ನಮಗೆ ಬಿಟ್ಟುಕೊಟ್ಟು, ಗಡಿಪಾರು ಹೊಂದಬೇಕು " ಎಂದು ಹೇಳಿದರು . ಆಗ ಇಬ್ಬರ ಬಣಗಳೂ ಇದನ್ನೋಪ್ಪಿ ವಾದ ಪ್ರಾರಂಭಕ್ಕೆ ಚಾಲನೆ ದೊರಕಿತು. ಬಹು ಕ್ಲಿಷ್ಟಕರ ವಾದ ವಿಷಯ ಎತ್ತಿಕೊಂಡು ಮಹಾ ಮೇಧಾವಿಯಾದ ಪಂಡಿತನು ತನ್ನ ವಾದ ಹೂಡಿದನು. ಆಗ ಅದಕ್ಕೆ ಶ್ರೀಯವರ ಬಣದಿಂದ ಶ್ರೀ ಜಯರಾಮಾಚಾರ್ಯರು ಎದ್ದು ನಿಂತು " ಇದಕ್ಕೆ ಶ್ರೀಗಳವರ  ಅವಶ್ಯಕತೆ ಇಲ್ಲವೇ ಇಲ್ಲ " ಎಂದು ಹೇಳಿ ತಾವೇ ಎಲ್ಲ ಪೂರ್ವಪಕ್ಷಗಳನ್ನು ಧ್ವಂಸ ಮಾಡಿ ಪರವಾದಿಗಳಿಗೆ ಸಿಂಹಸ್ವಪ್ನರಾದರು. ಆಗ ಶಾಸ್ತ್ರಿಗೆ ತನ್ನ ಸೋಲು ಸನಿಹ ಬರುತ್ತಿದೆ ಎಂದು ತಿಳಿದು , ಶ್ರೀ ಜಯರಮಾಚಾರ್ಯರ ಮಾತನ್ನು ಎದುರಿಸಲಾಗದೆ " ಶ್ರೀಗಳವರೊಂದಿಗೆ ಮಾತ್ರ ನಾನು ವಾದ ಮಾಡುವೆ ಇತರರೊಡನೆ ಮಾಡುವದಿಲ್ಲ" ಎಂದು ನುಡಿದ. ಆಗ ಶ್ರೀಗಳವರು ನುಸು ನಕ್ಕು ತಮ್ಮದೇ ಶೈಲಿಯಲ್ಲಿ ವಾದಿಯನ್ನು ಮಣಿಸಿದರು. ಇದು ಐತಿಹ್ಯ. ಈ ಘಟನೆಯನ್ನು ಶ್ರೀ ವರದೇಶ ವಿಠಲದಾಸರು ಬಹು ಸುಂದರವಾಗಿ ವರ್ಣಿಸಿದ್ದಾರೆ. ಇಲ್ಲಿ ಆಚಾರ್ಯರ ಪಾತ್ರ ಬಹು ಮುಖ್ಯವಾಗಿತ್ತು. ಆಗ ಶ್ರೀಗಳವರು ಜಯರಾಮಚಾರ್ಯರನ್ನು ಬಹುವಾಗಿ ಪ್ರಶಂಸಿಸಿ , ಸನ್ಮಾನಾದರಾದಿಗಳನ್ನೂ ಮಾಡಿಸಿ ಆಶೀರ್ವದಿಸಿ ಕಳುಹಿಸಿದರು.


ಸನ್ಯಾಸ-
       
ಒಮ್ಮೆ ಶ್ರೀ ಜಯರಾಮಚಾರ್ಯರು ಶ್ರೀ ವಿಜಯೀಂದ್ರ ತೀರ್ಥ ಗುರುಸಾರ್ವಭೌಮರ ಸನ್ನಿಧಾನವಾದ ಕುಂಭಕೋಣ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಆಗ ವೃಂದಾವನದ ಎದುರಿಗೆ ಸಂಜೆ ಕುಳಿತಿದ್ದರು. ಆಗ ಶ್ರೀ ವಿಜಯೀಂದ್ರ ತೀರ್ಥರ ವೃಂದಾವನವನ್ನು ಅನುಸಂಧಾನ ಪೂರ್ವಕವಾಗಿ ನಮಸ್ಕರಿಸಿ ಅಲ್ಲಿಯೇ ಕುಳಿತಾಗ ಶ್ರೀ ಮಠದ ಗುರು ಪರಂಪರೆಯನ್ನು ಸ್ಮರಿಸುವಾಗ ತಮ್ಮ ಪೂರ್ವಾಶ್ರಮದ ಜನ್ಮದಾತರು ,  ವಿದ್ಯಾಗುರುಗಳೂ ಆದ ಶ್ರೀ ವಾದೀಂದ್ರ ಗುರುಗಳ ಸ್ಮರಣೆ ಬಂದಾಗ ಆಚರ್ಯರಿಗೆ ಮತ್ತೆ ಏನೋ ಭಾಸವಗುತ್ತಲಿತ್ತು. ಅವರು ಹೇಳಿದ ' ಇಷ್ಟಾದರೆ ಸಾಲದು ಜಯರಾಮ ! ನಿಜವಾದ ವೈರಾಗ್ಯ ಬೇಕು " ಅನ್ನೋ ಮಾತು ನಿರಂತರ ಕಿವಿಯಲ್ಲಿ ಹರಿದಾಡುತ್ತಿತ್ತು. ಸಂಜೆ ಕಳೆದು ರಾತ್ರಿಯಾಯಿತು ಆಚಾರ್ಯರು ಮಾತ್ರ ಅಲ್ಲೇ ಕುಳಿತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದರು , ಬೆಳಗಿನ ಜಾವ ಸ್ವಲ್ಪ ಜ್ಹೊಂಪು ಹತ್ತಿದಾಗ ಆಚರ್ಯರಿಗೆ ಸಾಕ್ಷಾತ್ ಶ್ರೀ ವಿಜಯೀಂದ್ರ  ತೀರ್ಥ ಗುರುಸರ್ವಭೌಮರೆ ಬಂದು ನಿಂತು ಸನ್ಯಾಸ ದೀಕ್ಷೆಗೆ ಆದೇಶ ಮಾಡಿ , ದೀಕ್ಷೆ ನೀಡಿದರು . ಮರುದಿನವೇ ಶ್ರೀ ಆಚಾರ್ಯರು ವೃಂದಾವನದ ಸಾಕ್ಷಿಯಾಗಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವರದೇಂದ್ರ ತೀರ್ಥರ ಸನ್ನಿಧಾನಕ್ಕೆ ಹೊರಟರು. ಆಗ ಅಲ್ಲಿ ಶ್ರೀ ವರದೇಂದ್ರ ತೀರ್ಥರು ದೇಹಾಲಸ್ಯವಾಗಿದ್ದರಿಂದ ಜಯರಾಮಚಾರ್ಯರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಆಚಾರ್ಯರು ಅಲ್ಲಿ ಇರದ ಕಾರಣ , ಯಾವುದೇ ಕಾರಣಕ್ಕೂ ಸಂಸ್ಥಾನದ ಉಪಾಸ್ಯಮೂರ್ತಿ ಬ್ರಹ್ಮಕರಾರ್ಚಿತ ಮೂಲರಾಮದೇವರ ಪೂಜೆಗೆ ವ್ಯತ್ಯಯ  ಬರಬಾರದೆಂದು ನಿರ್ಧರಿಸಿ ಶ್ರೀ ಜಯರಾಮಚಾರ್ಯರ ಶಿಷ್ಯರೇ ಆದ  ಶ್ರೀ ಭುವನೇಂದ್ರ ತೀರ್ಥರಿಗೆ ಸನ್ಯಾಸ ದೀಕ್ಷೆನೀಡಿ ಮೂಲರಾಮ ಪೂಜಾ ಕೈಂಕರ್ಯ ನೆರವೇರಿಸಲು ಆದೇಶಿಸಿದರು. ಶ್ರೀ ವರದೇಂದ್ರ ತೀರ್ಥರು "ಜಯರಾಮಚರ್ಯರಿಗೆ ಸಂಸ್ಥಾನ ಒಪ್ಪಿಸತಕ್ಕದ್ದು" ಎಂದು ಹೇಳಿ  ಕಾಲವಾದ ಮೇಲೆ ಶ್ರೀ ಭುವನೆಂದ್ರ ತೀರ್ಥರು ಶ್ರೀ ಧೀರೇಂದ್ರ ತೀರ್ಥರಿಗೆ ಮಹಾ ಸಂಸ್ಥಾನವನ್ನು ಒಪ್ಪಿಸಿ , ಶ್ರೀ ಮೂಲರಾಮದೇವರ ಪೆಟ್ಟಿಗೆಯನ್ನು ಒಪ್ಪಿಸಿ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಶ್ರೀ ಧೀರೇಂದ್ರ ತೀರ್ಥರು ಅನೇಕ ವರ್ಷಗಳ ಶ್ರೀ ಮೂಲರಾಮಚಂದ್ರದೇವರ ಪೂಜೆಯನ್ನು ಮಾಡಿ ಸಂಸ್ಥಾನದ ಸಕಲ ರೀತಿಯ ಜವಾಬ್ದಾರಿಯನ್ನು ಶ್ರೀ ಭುವನೇಂದ್ರ ತೀರ್ಥ ಶ್ರೀಪಾದರಿಗೆ ವಹಿಸಿಕೊಟ್ಟು , ತಾವು ಜಪ-ತಪಗಳನ್ನಾಚರಿಸಲು ಹೊಸರಿತ್ತಿ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಶ್ರೀ  ವರದೇಂದ್ರ
ತೀರ್ಥರ ಶಿಷ್ಯರಾದ ಜಗನ್ನಾಥದಾಸರು ಬಂದು "ಶ್ರೀ ಹರಿಕಥಾಮೃತ ಸರಾವನ್ನು" ಶ್ರೀ ಧೀರೇಂದ್ರ ತೀರ್ಥರ ಸನ್ನಿಧಾನದಲ್ಲೇ ಬರೆದು ಅವರಿಗೆ ಸಮರ್ಪಿಸಿದರು.

Friday 7 March 2014

"ವರ್ಧಂತಿ ಉತ್ಸವ"

                           ದುರ್ವಾದಿಧ್ವಾಂತರವಯೇ ವೈಷ್ಣವೇಂದೀ ವರೇಂದವೇ ।
                           ಶ್ರೀ ರಾಘವೇಂದ್ರ ಗುರವೇ ನಮೋsಅತ್ಯಂತ ದಯಾಲವೇ ।। 

                            ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ।
                             ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।

                            ಮೂಕೋsಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ 
                             ರಾಜ ರಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ।। 

                             ಶ್ರೀ ಸುಧೀಂದ್ರಾಬ್ಧಿ ಸಂಭೂತಾನ್ ರಾಘವೇಂದ್ರ ಕಲಾನಿಧೀನ್ ।
                             ಸೇವೇ ಸುಜ್ಞಾನ ಸೌಖ್ಯಾರ್ಥಂ ಸಂತಾಪತ್ರಯ ಶಾಂತಯೇ ।। 



            ಕಲಿಯುಗ ಕಲ್ಪವೃಕ್ಷ , ಕಾಮಧೇನು ಎಂದೇ ಜಗದ್ವಿಖ್ಯಾತರಾದವರು ಶ್ರೀ ರಾಘವೇಂದ್ರ ತೀರ್ಥರು. ಇಂತಹ ರಾಘವೇಂದ್ರ ತೀರ್ಥರ ಅಗಮ್ಯ ಮಹಿಮೆಯನ್ನು ಅನೇಕ ಮಹಾನುಭವರು , ಜ್ಞಾನಿ ವರೇಣ್ಯರು ನಿರಂತರ ತಿಳಿಸುತ್ತಾ ಬಂದಿದ್ದಾರೆ. ಶ್ರೀ ರಾಯರ ಬಗ್ಗೆ ಮಾತನಾಡಲು ನನಗಾವ ಯೋಗ್ಯತೆಯೂ ಇಲ್ಲ.. ಆದರೂ ರಾಯರಂತಹ 'ದಯಾಳು"ಗಳು ನನ್ನಂತಹವನಿಂದಲೂ ಮಾಡಲ್ಪಟ್ಟ ಅಲ್ಪ ಸೇವೆಯನ್ನು ಸ್ವೀಕಾರ ಮಾಡುತ್ತಾರೆ. ನನಗೂ ಸಜ್ಞಾನಾದಿ ಸಂಪತ್ತು ಕೊಟ್ಟು , ಮಧ್ವರಾಯರ ಕೃಪೆಗೆ ಪಾತ್ರನನ್ನಾಗಿ ಮಾಡಿಸಲಿ ಎಂದು ಪ್ರರ್ಥಿಸುತ್ತೇನೆ. 

           ಇಂದಿನ ದಿನ ಸುದಿನ, ಇಂದು ಪರಮ ಮಂಗಳಕರ ದಿನ , ಶ್ರೀ ರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ . ರಾಘವೇಂದ್ರ ಗುರುಗಳ ಪೂರ್ವಾಶ್ರಮ ಹಾಗು ಯತ್ಯಶ್ರಮ ಹಾಗು ಅವರ ವತಾರಗಳ ಬಗ್ಗೆ ಸಕ್ಷಿಪ್ತವಾಗಿ ನನ್ನ ಯೋಗ್ಯತೆಗೆ ಅನುಗುಣವಾಗಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ನನ್ನ ತಪ್ಪನ್ನು ಹಿರಿಯರಾದವರು ಮನ್ನಿಸಿ ಅದು ನನ್ನದೇ ಅದ್ದರಿಂದ ಸಂಕಷ್ಟ ದಿಂದ ಪಾರು ಮಾಡಬೇಕು ಅಂತ ಪ್ರಾರ್ಥಿಸುವೆ , ಸರಿ ಇದ್ದದ್ದು ಏನಾದರೂ ಬರೆದಿದ್ದರೆ ಅದಕ್ಕೆ ನನ್ನಲ್ಲಿ ನಿಂತು ಪ್ರೇರಣೆ ನೀಡಿ ನಿರಂತರ ಅನುಗ್ರಹಿಸಿ ಕರುಣೆ ತೋರಿಸಿದ ರಾಯಾರೇ ಕಾರಣ ಎಂದು ಹೇಳುತ್ತಾ ನನ್ನ ಅಂತರಂಗ ಶುದ್ಧಿಗೋಸ್ಕರ ಹಂಚಿಕೊಳ್ಳುತ್ತೇನೆ .

 "ಗೌತಮ ಗೋತ್ರದ" , "ಅರವತ್ತೊಕ್ಕಲಿನ"  " ಷಾಷ್ಟೀಕ ವಂಶದ" , "ಬೀಗ ಮುದ್ರೆ" ಎಂಬ ಜ್ಯೇಷ್ಥ ಮನೆತನದವರು ಮೂಲತಃ ಕನ್ನಡಿಗರು.  ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ , ಪಾಂಡಿತ್ಯಾದಿ ಗುಣಗಳಿಂದ ಜಗದ್ವಿಖ್ಯಾತವಾದ ಮನೆತನ. ಈ ಮಹಾ ವಂಶದಲ್ಲಿ ಅನೇಕ ಬಹುಮುಖ ಪ್ರತಿಭೆಗಳನ್ನೂ ಕಾಣಬಹುದು. ಎಲ್ಲರೂ ಅನೇಕ ಶಾಸ್ತ್ರಗಳಲ್ಲಿ ವಿಧ್ವಾಂಸರು.  "ಗೌತಮ ಗೋತ್ರ" ಅರ್ಥಾತ್ ಗೌತಮ ಮಹರ್ಷಿಗಳೇ  ಪ್ರವರ್ತಕರಾಗಿದ್ದ ವಂಶ ಗೌತಮ ಗೊತ್ರೋದ್ಭವರದ್ದು. ಈ ವಂಶದಲ್ಲಿ ಅನೇಕರು ಮುಕ್ತಿ ಎಂಬ ಅತ್ಯುತ್ತಮ ಫಲ ಹೊಂದಿದವರು ಇದ್ದಾರೆ , ಇನ್ನು ಕೆಲವರು ಮುಕ್ತಿಗೆ ಯೋಗ್ಯರಾದವರಿದ್ದರೆ , ಇನ್ನು ಹಲವರು ಮುಕ್ತಿಗೆ ಯೋಗ್ಯರಾದರು ಅಲ್ಲಿ ಹೋಗದೆ ನಮ್ಮನ್ನುದ್ಧರಿಸಲು ಬಂದವರಿದ್ದಾರೆ. ಮುನಿ ಗೌತಮರು ಹೇಗೆ ಶ್ರೀ ವೇದವ್ಯಾಸರ ಶಾಸ್ತ್ರ ರಚನೆಗೆ ಕಾರಣರಾದರು , ಶ್ರೀಹರಿಯ ಸಂಕಲ್ಪ ಏನಿತ್ತು ? ಎಲ್ಲರಿಗೂ ತಿಳಿದ ವಿಷಯ. ಅಂತಹ ಗೌತಮ ಗೋತ್ರದಲ್ಲಿ ಜನಿಸಿದವರೇ ಶ್ರೀ ಕೃಷ್ಣಾಚಾರ್ಯರು. 
ಉದ್ಧಾಮ ಪಂಡಿತರು , ವೀಣೆಯಲ್ಲಿ ನುರಿತವರಾದ ಕಾರಣ ವೀಣಾಕೃಷ್ಣಾಚಾರ್ಯರೆಂದೇ ಖ್ಯಾತಿಯನ್ನು ಪಡೆದವರು. ಶ್ರೀಮದಾಚಾರ್ಯರ ಶಾಸ್ತ್ರದಲ್ಲಿ ಪ್ರಾವೀಣ್ಯ ಹೊಂದಿದವರು , ಶ್ರೀನ್ಯಾಯಸುಧಾದಿ ಗ್ರಂಥಗಳಲ್ಲಿ ಜೀವ ಇಟ್ಟವರು .  ಕನ್ನಡ ರಾಜ್ಯ ರಾಮಾ ರಮಣ ಶ್ರೀ ಕೃಷ್ಣದೇವರಾಯನಿಗೆ ವೀಣಾ ಪಾಠ ಹೇಳಿ ಕೊಟ್ಟವರು. ಆಸ್ಥಾನ ವಿದ್ವಾಂಸರು. ಅಂತಹ ಮಹಾ ಪಂಡಿತಶೋರೋಮಣಿಯಾ ಪುತ್ರ ರತ್ನರೇ "ಕನಕಾಚಲಭಟ್ಟರು" . ಹೆಸರಿಗೆ ತಕ್ಕಂತೆ ಅವರದೂ ಬಂಗಾರದ ಬೆಟ್ಟದಂತಹ ವ್ಯಕ್ತಿತ್ವ. ತಂದೆಯಂತೆಯೇ ವಂಶ ಗೌರವ ಉಳಿಸಿಕೊಂಡು ಬೆಳೆಸಿಕೊಂಡು ಹೋದವರು. ವಂಶ ವಿದ್ಯೆಯಾದ ವೀಣೆ ಕಲಿತು ವೀಣಾಕನಕಾಚಲ ಭಟ್ಟರು ಎಂದೇ ಖ್ಯಾತರಾದರು. ಇವರ ಪುತ್ರರೆ  ತಿಮ್ಮಣ್ಣಾಚಾರ್ಯರು . ಇವರೂ ಪೂರ್ವಿಕರಂತೆ ಆಚಾರ್ಯರ ಶಾಸ್ತ್ರದಲ್ಲಿ ಹಾಗು ಕುಲವಿದ್ಯೇ ಯಾದ ವೀಣೆಯಲ್ಲಿ ಪ್ರಾವೀಣ್ಯ ಗಳಿಸಿದರು . ಇವರ ಪುತ್ರರೇ "ಶ್ರೀ ವೆಂಕಟನಥಾಚಾರ್ಯರು" . ಇನ್ನು ಮುಂದಿನದನ್ನು ವಿಶೇಷವಾಗಿ ಏನೂ ಹೇಳಬೇಕಿಲ್ಲ ಕಾರಣ ಇವರೇ ನಮ್ಮ ಶ್ರೀ ಗುರುರಾಯರಾದವರು. ಗುರುಗಳೆಂದರೆ ಮಂಚಾಲೆ ರಾಘಪ್ಪ ಅಂತಲೇ ಖ್ಯಾತಿ ಗಳಿಸಿದ ಕೀರ್ತಿಶಾಲಿಗಳು , ಪ್ರಹ್ಲಾದರಜರು.. ಇವರ ಬಗ್ಗೆಕೆಲ್ದ ಮಾಧ್ವನೇ ಇಲ್ಲ.. ಇವರ ಋಣದಲ್ಲೇ ನಾವೆಲ್ಲ ಬದುಕುತ್ತಿದ್ದೇವೆ.  
            ರಾಯರ ಮೂಲ ರೂಪ ಶಂಕುಕರ್ಣ ಎಂಬ ಕರ್ಮಜ ದೇವತೆ. ಈತನೇ ಪ್ರಹ್ಲಾದರಾಜರಾಗಿ ದೈತ್ಯ ಕುಲದಲ್ಲಿ ಅವತರಿಸಿ ದೈತ್ಯರ ತೀರ್ಥಿಕರಣಕಾಗಿಯೇ ಅವತರಿಸಿದ ಧೀರರು ಅಂತ ನಾವೆಲ್ಲತಿಳಿದಿದ್ದೇವೆ .. ಭಾಗವತ ಮಹಾ ಪುರಾಣ ರಾಯರ ಬಗ್ಗೆ ತಿಲಿಸಲಿಕ್ಕೊಸ್ಕರವೇ ಒಂದು ಸ್ಕಂದ ಮೀಸಲಿಟ್ಟಿದೆ ಅಂದರೆ ರಾಯರು ಎಂತಹ ಅಗಮ್ಯ ಮಹಿಮಾನ್ವಿತರು ?? ನಿತ್ಯ ವಾಯ್ವಾವೇಶ ಯುಕ್ತರು .. ಇವರ ಮೇಲೆ ಶ್ರೀಮದಾಚಾರ್ಯರ , ಟೀಕಾರಾಯರ ಅನುಗ್ರಹಕ್ಕೆ ಮಿತಿ ಉಂಟೇನು  ? 

 ಅಂತಹ ರಾಘವೇಂದ್ರ ಗುರುಗಳು ಹುಟ್ಟಿದ ಪರಮಮಂಗಳಕರ ದಿನವನ್ನು ಇಂದು ನಾವು "ವರ್ಧಂತಿ ಉತ್ಸವ" ಎಂದು ಮಾಡುತ್ತಲಿದ್ದೇವೆ. ನಮ್ಮಂತಹ ಪಾಮರರಿಗೆ ಏನೂ ಗೊತ್ತಿಲ್ಲ , ಆಚಾರ್ಯರ ಶಾಸ್ತ್ರ ತಿಳಿಯಲು ನಮಗೆ ಶಕ್ತಿ ಇಲ್ಲ , ಪರಮಾತ್ಮನ ಸಾಮೀಪ್ಯ ಗಳಿಸುವ ವಿಧಾನ ಗೊತ್ತಿಲ್ಲ . ಚಿಂತೆ ಬೇಡ " ನಾವಿದ್ದೇವೆ" ಅನ್ನುತ್ತಾರೆ ರಾಯರು. ಸನ್ಮಾರ್ಗ ತೋರಿಸುತ್ತೇವೆ ಅನ್ನುತ್ತಾರೆ ರಾಯರು. ಅದಕ್ಕಾಗಿಯೇ ಬಂದಿದ್ದೇವೆ ಅನ್ನುತ್ತಾರೆ ರಾಯರು. ಮಗುವಿನಂತೆ ಮೊದಲು ಹತ್ತಿರ  ಕರೆದು ಬೇಡಿದ್ದನ್ನೆಲ್ಲ ಕೊಟ್ಟು ಆಮೇಲೆ ಶಾಸ್ತ್ರದ ಬೋಧನೆ ಮಾಡುತ್ತಾರೆ ರಾಯರು. ವಾದೀಂದ್ರ ತೀರ್ಥರು ರಾಯರನ್ನು ಕುರಿತು  " ಕಿಮ್ ವಾ ದುಸ್ಸಾಧ್ಯಮಸ್ತಿ ತ್ರಿಜಗತಿ ಮಹಾತಾಮಾತ್ಮನ ಪಾಣಿಪದ್ಮೆ"  , " ಉಕ್ತಂ ನೋ ವಕ್ತಿ ಭೂಯಃ ಕ್ವಚಿದಪಿ ಲಿಖಿತಂ ನೈವ ನಿಮ್ರ್ಮಾರ್ಷ್ಟಿ ತಸ್ಮಾತ್ " " ಅದ್ಯ ಶ್ರೀ ರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವ ಸಿದ್ಧಾಂತ ಶಾಖೀ" ಇತ್ಯಾದಿಯಾಗಿ ವರ್ಣನೆ ಮಾಡುವ ಮೂಲಕ ಅವರ ಮಹಿಮೆ ತಿಳಿಸಿದ್ದಾರೆ.. ಹೀಗೆ ರಾಯರ ಪಟ್ಟಾಭಿಷೇಕ , ವರ್ಧಂತಿ , ಆರಧನಾದಿಗಳನ್ನೂ ಮಾಡಿಯಾದರೂ ನಮಗೆ ಈ ಬ್ರಹ್ಮ ವಿದ್ಯೆಯ ಮಹತ್ವ ಅರಿಯಲು ಸಹಕಾರವಾಗಿ ನಾವು ಆಕಡೆ ಹೋಗಿ ಸಾಧನಾ ಮಾರ್ಗದತ್ತ ನಡೆಯಬೇಕು , ಶಾಸ್ತ್ರಗಳ ಮಹತ್ವ ತಿಳಿಯಬೇಕು ಅನ್ನುವುದೇ ರಾಯರ ಪರಮೊದ್ದೇಶವೇ ಹೊರತು ಎಲ್ಲ ವೈಭವಾದಿಗಳನ್ನು ಸ್ವೀಕಾರ ಮಾಡಿ ಮೆರೆಯುವ ಉದ್ದೇಶ ರಾಯರದ್ದಲ್ಲ ಅನ್ನುವದು ನನ್ನ ಭಾವನೆ.. ರಾಯರಿಗೆ ಸಮರ್ಪಿಸುವ ವೈಭವ ಎಲ್ಲವನ್ನೂ ರಾಯರು ಕ್ಷಣಮಾತ್ರದಲ್ಲಿ ಭಗವಂತನಿಗೆ ಅರ್ಪಿಸಿ ಬಿಡುತ್ತಾರೆ.. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯ ಧನ್ಯ.. ಅವರನ್ನು ಬೆಂಬತ್ತಿ ನಾವೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಸದ್ಗತಿ ಹೊಂದೋಣ. ಕೃಷ್ಣಾರ್ಪಣಮಸ್ತು.    

                            

Monday 3 March 2014

"ವಾಕ್ಸಿದ್ಧಿ" - ರಾಯರ ಪಟ್ಟಾಭಿಷೇಕ ದಿನದ ಲೇಖನ

              ಇಂದು ರಾಘವೇಂದ್ರ ತೀರ್ಥ ಗುರುಸರ್ವಭೌಮರು ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿಗಳಾದ ಸುದಿನ.. ಆಚಾರ್ಯರ , ಟೀಕಾರಾಯರ , ವಿಜಯೀಂದ್ರತೀರ್ಥರ, ತಮ್ಮ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸೇವೆಯನ್ನು ಮಾಡಲು , ನಮ್ಮಂತಹ ಅನೇಕ ಪಾಮರರನ್ನೂ ಉದ್ಧಾರ ಮಾಡಲು ನರಸಿಂಹದೇವರ ಆಶೀರ್ವಾದಗಳೊಂದಿಗೆ ಅವತರಿಸಿದ್ದ ಶ್ರೀ ಪ್ರಹ್ಲಾದರಾಜರು ಶ್ರೀ ರಾಘವೇಂದ್ರ ತೀರ್ಥರಾಗಿ ಅಭಿಶಿಕ್ತರಾದ ಮಂಗಳಕರ ದಿವಸ.. ಒಂದು ವೇಳೆ ರಾಘವೇಂದ್ರ ಗುರುಗಳು ಸನ್ಯಾಸ ತೆಗೆದುಕೊಳ್ಳದೆ ಇದ್ದರೇ ?? ಅಯ್ಯಯ್ಯೋ ಒಂದೆರೆಡು ಕ್ಷಣ ಮನಸ್ಸು ಅಲ್ಲೋಲ ಕಲ್ಲೋಲ ಆಗುತ್ತದೆ.. ಹೃದಯ ಒಡೆದು ಹೋದಂತೆ ಭಾಸವಾಗುತ್ತದೆ .. ಅನಾಥ ಪ್ರಜ್ಞೆ ಮೂಡುತ್ತದೆ.. ಸಧ್ಯ ರಾಯರು ನಮ್ಮೊಂದಿಗಿದ್ದಾರೆ...ಯಾವಾಗಲು ಇರುತ್ತಾರೆ. 

              ಆಹಾ ಶ್ರೀ ರಾಘವೇಂದ್ರ ತೀರ್ಥ .. ಎಷ್ಟೊಂದು ಮಂಗಳಕರ ನಾಮ ? ಯೋಗಿಗಳ , ಮಹಾನುಭಾವರ , ದೈವಾಂಶ ಸಂಭೂತರ ಪ್ರತಿ ಒಂದು ನಡೆಯೂ ಹಾಗೆ.. ಎಲ್ಲವೂ " ಹೈಲಿ ಕ್ಯಾಲ್ಕ್ಯುಲೇಟೆಡ್ !!" .. ಹೌದು ನಮ್ಮ ಆಧುನಿಕ ಯುಗದ ಯಾವ ಉಪಕರಣಗಳು ನಮ್ಮ ಪ್ರಾಚೀನ ಆಚಾರ್ಯರ , ಹಾಗು ಅವರ ಅನುಯಾಯಿಗಳಾಗಿ, ಆಚಾರ್ಯರ ಮಾತಿನಂತೆ " ಹರಿ ಸರ್ವೋತ್ತಮತ್ವಮ್ ವಹ ಸರ್ವದ ಪ್ರತಿಪಾದಯ" ಎಂಬ ಮಾತನ್ನು ಶಿರಸಾವಹಿಸಿ ಜಗತ್ತಿನ ಮೂಲೆ ಮೂಲೆಗಳಲ್ಲಿ ದ್ವೈತವೇದಾಂತದ ಅಪರಿಮಿತ ಸೇವೆ ಮಾಡುತ್ತಾ ವಿರಾಜಿಸುತ್ತಿರುವ ಯತಿವರೆಣ್ಯರ ತಪಃ ಶಕ್ತಿ , ವಿಚಾರಧಾರೆ , ದೂರಾಲೋಚನೆ ಯಾವುದಕ್ಕೂ ಸರಿ ಸಾಟಿ ಇಲ್ಲವೇ ಇಲ್ಲ.. ಶ್ರೀ ಸುಧೀಂದ್ರ ತೀರ್ಥರು ಶ್ರೀ ರಾಘವೇಂದ್ರ ತೀರ್ಥರಿಗೆ ಮಾಡಿದ ಮಹಾಶಿರ್ವಾದವೇ ಇದಕ್ಕೆ ಸಾಕ್ಷಿ .. ಶ್ರೀ ಸುಧೀಂದ್ರರು ತಮ್ಮ ವಿದ್ಯಾ ಶಿಷ್ಯ , ಕರುಣೆಯ ಕಂದ ಶ್ರೀ ವೆಂಕಟನಾಥಾಚರ್ಯರನ್ನ ಉಪಸ್ಯ ಮೂರ್ತಿ ಶ್ರೀ ಮೂಲರಾಮದೇವರ , ಶ್ರೀ ಆಚಾರ್ಯರ ಆದೇಶದಂತೆ ವೇದಾಂತ ಸಾಮ್ರಾಜ್ಯದಲ್ಲಿ , ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ , ವಿದ್ಯಾ ಮಠ ವೆಂದೆ ಖ್ಯತಿವೆತ್ತಿದ್ದ ಮಹಾ ಪೀಠದಲ್ಲಿ ಮಂಡಿಸುವಾಗ ಮಾಡಿದ ಆಶೀರ್ವಾದಗಳು ಇಂದಿಗೆ ಸೂರ್ಯ ಪ್ರಕಾಶದಷ್ಟು ಸ್ಪುಟವಾಗಿ ನಮ್ಮೆದುರೇ ಪ್ರತ್ಯಕ್ಷ ಫಲವಾಗಿವೆ .. 

              ಶ್ರೀ ರಾಯರು ಆಶ್ರಮ ತೆಗೆದುಕೊಳ್ಳುವ ಸಂದರ್ಭದಲ್ಲಿ ಶ್ರೀ ಸುಧೀಂದ್ರರು 
      
     ಶ್ರೀ ಸುರೇಂದ್ರವದಯಂ ತಪಸ್ಯಯಾ ಶ್ರೀ ಜಯೀಂದ್ರ ಇವ ಕೀರ್ತಿಸಂಪದಾ । 
     ವಿಶ್ರುತೋsಹಮಿವ ವಾದ ಸಂಗರೇ ರಾಘವೇಂದ್ರ ಯತಿರಾಟ್ ಸಮೇಧತಾಂ।। 

 ಎಂದು ಶೀರ್ವದಿಸಿದರು ಎಂದು ರಾಘವೇಂದ್ರ ವಿಜಯಕಾರರು ಹೇಳಿದ್ದಾರೆ.. 
     " ಸಮಸ್ತ ಭರತಖಂಡವನ್ನು ಉಪವಾಸ ವ್ರುತದಿಂದ ಮೂರು ಬಾರಿ ಸಂಚರಿಸಿದ , ಕಠಿಣವ್ರುತಾನುಷ್ಥಾನತತ್ಪರರಾದ , ಮಾನಸಪೂಜಾ ಧುರಂಧರರಾದ ಶ್ರೀ ಸುರೇಂದ್ರ ತೀರ್ಥರಂತಹ ಮಾಹಾನುಭಾವರಂತೆ ತಪಶ್ಶಕ್ತಿ ನಿಮ್ಮಲ್ಲಿ ಬರಲಿ , ಚತುಶ್ಶಷ್ಟಿ ಕಲಾ ವಿಷೆಶರಾದ , ಶತಾಧಿಕ ಗ್ರಂಥರತ್ನ ಪ್ರಣೀತರಾಗಿ ಸಮಸ್ತ ದಕ್ಷಿಣ ಭಾರತದ ಅಧಿಪತ್ಯ ಹೊಂದಿದ್ದ ಶ್ರೀ ವಿಜಯೀಂದ್ರ ತೀರ್ಥರಂತೆ ಕೀರ್ತಿವಂತರಾಗಿ ವಿರಾಜಿಸುವಂತಾಗಲಿ.. ಶ್ರೀಮಠದ ವಿದ್ಯಾ ಮಠ ಎಂಬ ಹೆಸರನ್ನು ಸಾರ್ಥಕ ಮಾಡಿದ , "ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರ" ಎಂಬ ಬಿರುದ ಪಡೆದ ಏಕೈಕ ಯತಿ ಸಾರ್ವಭೌಮ , "ಜಗದ್ಗುರು" ಎಂದು ಪರಮತೀಯರಿಂದಲೂ ಮಾನ್ಯರಾದ , ಪರಮತೀಯರು ಸೇರಿದಂತೆ ಎಲ್ಲರೂ " ಅಲಂಕಾರ ಶಾಸ್ತ್ರನಿಪುಣಃ " ಎಂದೇ ಖ್ಯಾತರಾದ , ಪರಮತೀಯ ಕಾವ್ಯಗಳಲ್ಲಿ ಹೊಗಳಿಸಿಕೊಂಡ  , ಮಹಾನ್ ಮೇಧಾವಿ ಮೂರ್ಧನ್ಯರಾದ, ವಿಶ್ವವಿಖ್ಯತರಾದ , ಭಾಗವತದ ಎರೆಡು ಸ್ಕಂದಗಳಿಗೆ ಗಹನ,ಗಂಭೀರವಾದ,ವ್ಯಾಖ್ಯಾನವನ್ನು ರಚಿಸಿದ , ವಾದವಿದ್ಯಾ , ವೇದವಿದ್ಯಾಕುಶಲರಾದ ಶ್ರೀ ಸುಧೀಂದ್ರರು , ರಾಘವೇಂದ್ರ ತೀರ್ಥರಿಗೆ "ನಮ್ಮಂತೆ" ಸಮಸ್ತ ಮಾನವ ಜನಾಂಗದ ಹಿತಕ್ಕಾಗಿ ಸರ್ವರನ್ನೂ ಅನುಗ್ರಹಿಸುತ್ತ ಕಾಪಾಡುತ್ತಾ ಜಯಶೀಲರಾಗಿ ಅಭಿವೃದ್ಧಿ ಹೊಂದಿರಿ ಎಂದು ಹೇಳಿ ಆಶೀರ್ವದಿಸಿದರು.. ಇದಲ್ಲದೆ ಕುಬೇರನಂತೆ ಅಕ್ಷಯವಾದ ಸಂಪತ್ತಿನಿಂದಲೂ , ಜಗನ್ಮಂಗಳ ಮೂರ್ತಿ ರಾಮಚಂದ್ರ ದೇವರಂತೆ ಕೀರ್ತಿವಂತರಾಗಿರುವಂತೆಯೂ ಆಶೀರ್ವಾದ ಮಾಡಿದ್ದಾರೆ.. 
    ಹೀಗೆ ಸಿದ್ಧಪುರುಷರ ತುಂಬು ಹೃದಯದ ಆಶೀರ್ವಾದ ಬಲದೊಂದಿಗೆ ಎಲ್ಲಕ್ಕಿಂತ ಮಿಗಿಲಾಗಿ ತಮ್ಮನ್ನು ಉದ್ಧರಿಸಿದ ಶ್ರೀ ನರಸಿಮ್ಹದೆವರಿಂದ ವಿಶೇಷ ಅನುಗ್ರಹ ಪಡೆದು , ಅವರೇ ಹಿಂದೆ  " ಬ್ರಹ್ಮ ಸಂಬಂಧಿಯಾದ ನನ್ನನ್ನು ನೀನು ಮುಂದೆ ಕಲಿಯುಗದಲ್ಲಿ ಅರ್ಚಿಸುತ್ತೀ " ಎಂದು ಹೇಳಿದಂತೆ ಸಾಕ್ಷಾತ್ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲ ರಾಮ ಮೂರ್ತಿಯನ್ನು ಸದಾ ಅರ್ಚಿಸುತ್ತ ರಾಮ ಕೃಷ್ಣ ವೇದವ್ಯಾಸ ನರಹರಿ ರೂಪಗಳನ್ನು ಸದಾ ಧ್ಯಾನಿಸುತ್ತ , ಹಯಗ್ರೀವದೇವರನ್ನು ಮನಸ್ಸಿನಲ್ಲಿ ಪ್ರತಿಷ್ಟಾಪಿಸಿಕೊಂಡು ಸದಾ ನಮ್ಮೆಲ್ಲರನ್ನೂ ಇಂದಿಗೂ ಸಲಹುತ್ತಿದ್ದಾರೆ ನಮ್ಮ "ರಾಘವೇಂದ್ರ ಗುರುಗಳು" ಇವರ ಕೃಪೆ , ದಯೆ , ಕಾರುಣ್ಯಕ್ಕೆ ಮಿತಿ ಉಂಟೆ ?? ಅದಕ್ಕೆ ಇವರ ಪಟ್ಟದ ಶಿಷ್ಯರಾದ ಯೋಗೀಂದ್ರ ತೀರ್ಥ ಶ್ರೀಪಾದಂಗಳವರು ಇವರನ್ನು " ದಯಾಲವೇ " " ಕಾರುಣ್ಯಸಿಂಧವೇ" ಎಂದು ಮನತುಂಬಿ ಕೊಂಡಾಡಿದ್ದಾರೆ. ಯೋಗೀಂದ್ರ ತೀರ್ಥರು ರಾಯರನ್ನು ಕುರಿತು " ಸ್ವಾಮಿ ತಮ್ಮ ಮಹೋನ್ನತ ಸಾಧನೆ ಇಂದ ಈ ಮೂಲ ಮಹಾ ಸಂಸ್ಥಾನವನ್ನು ನಡೆಸಿಕೊಂಡು ಹೋಗುತ್ತಿದ್ದೀರಿ , ತಮ್ಮನ್ನೇ ಸರ್ವವಿಧದಿಂದಲೂ ಆಶ್ರಯಿಸಿರುವ ನಾವು , ನೀವಿಲ್ಲದೇ ( ಪ್ರತ್ಯಕ್ಷವಾಗಿ ) ಸಂಸ್ಥಾನವನ್ನು ಹೇಗೆ ಮುಂದುವರೆಸಿಕೊಂಡು ಹೋಗುವದು ?? " ಎಂದು ಭಾವುಕರಾಗಿ ಕೇಳಿದಾಗ , ಹೇಗೆ ಭರತ ಶ್ರೀರಾಮದೇವರು ವನವಾಸಕ್ಕೆ ಹೋದಾಗ ತಮ್ಮ ಪಾದುಕೆಗಳನ್ನೇ ಭರತನ ಕೈಗಿತ್ತರೋ ಹಾಗೆ ,ಶ್ರೀ ರಾಘವೇಂದ್ರ ಗುರುಗಳು ತಾವು ಧರಿಸಿದ್ಧ ಪಾದುಕಾದ್ವಾಯಗಳನ್ನೂ ಯೋಗೀಂದ್ರ ತೀರ್ಥರ ಕೈಗಿತ್ತು ,  "ಈ ಪಾದುಕೆಗಳು ಎಲ್ಲಿ ಇರುತ್ತವೆಯೋ ಅಲ್ಲಿ ನಮ್ಮ ಸಂಪೂರ್ಣ ಸನ್ನಿಧಾನವಿರುತ್ತಾದೇ , ಈ ರೂಪದಲ್ಲಿ ಸ್ವತಃ ನವೆ ಇದ್ದು ಸಂಸ್ಥಾನಕ್ಕೆ ಯಾವುದೇ ಕುಂದು ಕೊರತೆ ಬರದಂತೆ  ನೋಡಿಕೊಳ್ಳುತ್ತೇವೆ , ಈ ಪಾದುಕಾ ಬಲದಿಂದ ಎಲ್ಲ ಇಷ್ಟಾರ್ಥಗಳು ನೆರವೆರುವವು " ಎಂದು ಅಭಯವಿತ್ತಿದ್ದಾರೆ ಮಹಾನುಭಾವರು.. ಈ ಪಾದುಕೆಗಳನ್ನೂ ಇಂದಿಗೂ ನಾವು ಶ್ರೀ ರಾಯರ ಸಂಸ್ಥಾನದಲ್ಲಿ ಕಾಣಬಹುದು.. ಪರಮಪೂಜ್ಯರಾದ ರಾಯರ ಮಠದ ಪೀಠಾಧಿಪತಿಗಳು ಅದನ್ನು ಶ್ರೀ ಮೂಲರಾಮ ಪೂಜಾ ನಂತರ ಸಕಲ ಭಕ್ತರಿಗೂ ತೋರಿಸಿ ಎಲ್ಲರನ್ನು ಉದ್ಧಾರ ಮಾಡುತ್ತಾರೆ.. 
    ಈ ರೀತಿಯಾಗಿ ರಾಯರ ಮೇಲೆ ಸುಧೀಂದ್ರರು ಏನೆಲ್ಲಾ ಆಶೀರ್ವಾದ ಮಾಡಿದ್ದಾರೆಯೋ , ರಾಘವೇಂದ್ರ ಪ್ರಭುಗಳು ಏನೆಲ್ಲಾ ಅಶೀರ್ವದ ಮಾಡಿದ್ದಾರೆಯೋ ? ಅದೆಲ್ಲ ಇಂದಿಗ್ಗೂ ಸೂರ್ಯಪ್ರಕಾಶದಷ್ಟು ಸತ್ಯ ಎಂಬುದನ್ನು ಎಲ್ಲ ಸಜ್ಜನರೂ ಮನಗಾಣಬಹುದು.. ಇದೆ ದೊಡ್ಡವರ , ಮಹಾನುಭಾವರ , ದೈವಾಂಶಸಂಭೂತರ ಮಾತಿನ ಮಹಿಮೆ.. "ಗುರುರಾಜರೇ ತಮ್ಮ ಜೀವನದ ಪ್ರತಿಯೊಂದು ಘಟನೆಯೂ , ತಮ್ಮ ಪ್ರತಿಯೊಂದು ಮಾತು , ತಮ್ಮ ಪ್ರತಿಯೊಂದೂ ಕಾರ್ಯ , ತಾವು ನೀ ಮಾಡಿದರೂ ಅದರಿಂದ ವೇದಗಳ ಸಾರ , ಶಾಸ್ತ್ರವಿಚಾರವನ್ನೇ ಬೋಧಿಸುತ್ತೀರಿ.. ಇಂಥಾ ಪ್ರಭುವ ಕಾಣೆನೋ ಈ ಜಗದೊಳು , ಹಿಂತಾ ಪ್ರಭುವ ಕಾಣೆನೋ ... ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿ ಮಾಮ್ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ .. ನಿಮ್ಮ ಮಹಿಮೆ ವರ್ಣಿಸಲಸಾಧ್ಯ ಎಂದು ವಾದೀಂದ್ರ ತೀರ್ಥ ಗುರುಸಾರ್ವಭೌಮರೆ ಉದ್ಗಾರ ತೆಗೆದಿರುವಾಗ ಇನ್ನು ನನ್ನಂತಹ ಕ್ರಿಮಿ ಇಂದೇನು ಸಾಧ್ಯ ಸ್ವಾಮೀ ?? ನೀವೇ ನಿಂತು ಬರೆಸಿದ್ದೀರಿ .. ಅದು ನಿಮಗೆ ಸಮರ್ಪಿತ .. ಏನೂ ಬೇಡ ಸ್ವಾಮೇ ನಿಮ್ಮ ದಯೆ ಒಂದಿದ್ದರೆ ಸಾಕು ದೊರೆಯೇ .. ಮೂಲರಾಮನ ಪೂಜಿಪ ಯತಿಯೇ.!! 
                                         
ಅಸ್ಮದ್ ಗುರ್ವಂತರ್ಗತ ರಾಘವೇಂದ್ರ  ಗುರ್ವಂತರ್ಗತ ಭಾರತೀರಾಮನ ಮುಖ್ಯಪ್ರಾಣಾಂತರ್ಗತ ಮಧ್ವವಲ್ಲಭ ಸೀತಾಪತೆ ಶ್ರೀಮನ್ಮೂಲರಾಮ ಅಭಿನ್ನ ಶ್ರೀ ಕೃಷ್ಣಾರ್ಪಣಮಸ್ತು..
                          ಭೂ ಇಷ್ಟಾಂ ತೆ ನಮ ಉಕ್ತಿಂ ವಿಧೇಮ      

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...