Sunday 17 August 2014

ಶ್ರೀ ವ್ಯಾಸತತ್ವಜ್ಞ ತೀರ್ಥರು

 ಶ್ರೀ ವ್ಯಾಸತತ್ವಜ್ಞ ತೀರ್ಥ ಗುರುಭ್ಯೋ ನಮಃ
ಪ್ರಕಟೀಕೃತಟೀಕೋಕ್ತಿರ್ಮರ್ಕಟೀಕೃತಮಾಯಿರಾಟ್|
ಚಕೃತಾವ್ಯಾಸತತ್ವಜ್ಞಮಸ್ಕರೀಂದ್ರಕೃಪಾಮಯಿ||
ಪೂರ್ವಾಶ್ರಮ ನಾಮ -
 ಐಜಿ ವೆಂಕಟರಾಮಾಚಾರ್ಯರು .
 ಗುರುಗಳು -
  ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಶ್ರೀ ಭುವನೇಂದ್ರ ತೀರ್ಥರು
ಶಿಷ್ಯರು -
ಶ್ರೀ ಜಯತೀರ್ಥಚಾರ್ಯರೇ( ಇವರೇ ಮುಂದೆ ಶ್ರೀ ವಿಷ್ಣುತೀರ್ಥರೆಂದು ಖ್ಯಾತರಾಗಿ , ಮಾದಿನೂರಿನಲ್ಲಿ ನೆಲೆಸಿರುವರು. ) ಮೊದಲಾದ ೩೦೦ ಕ್ಕೂ ಹೆಚ್ಚು ಜನ ಶಿಷ್ಯರು.
ಗ್ರಂಥಗಳು -
* ಮಾನಸಸ್ಮ್ರುತಿ ( ಉಪಾಸನಾಭಾಗ )
* ಸಪ್ತಮಸ್ಕಂದ ಭಾಗವತಕ್ಕೆ ಮಂದನಂದಿನಿ  ಎಂಬ ವ್ಯಾಖ್ಯಾನ 
*  ಗಾಯತ್ರಿ ಸಾರ ಸಂಗ್ರಹ
* ಶ್ರೀಮನ್ಯಾಯಸುಧಾ ವ್ಯಾಖ್ಯಾನ
* ಉಭಯಾನೌಚಿತಿ
* ಸುಧಾದ್ಯುಕ್ತಿರಹಸ್ಯ
* ನ್ಯಾಯಮೃತ ಮಕ್ಷಿಕಾವ್ಯಜನ
* ತಾತ್ಪರ್ಯಚಂದ್ರಿಕಾ ಶರದಾಗಮ
*ಅದ್ವೈತ ಕುಟ್ಟನ
* ನ್ಯಾಯದಮನ
* ಕುಲಿಶ
*ಶ್ರೀಮದ್ಬಿಷ್ಣುತತ್ವನಿರ್ಣಯಕ್ಕೆ "ಲಘುಪ್ರಭಾ" ಮತ್ತು " ಗುರುಪ್ರಭಾ" ಎಂಬ ಎರಡು ವ್ಯಾಖ್ಯಾನಗಳು.
*  ಯತಿಪ್ರಣವಕಲ್ಪ ವ್ಯಾಖ್ಯಾನ

ವೃಂದಾವನ ಸ್ಥಳ _ ಮಂತ್ರಾಲಯದ ಹತ್ತಿರದಲ್ಲೆ ಇದೆ . ಗದ್ವಾಲಿ ಪ್ರಾಂತ್ಯದ , ಅಯಿಜ ( ಐಜಿ ) ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿರುವ ವೇಣಿಸೋಮಪುರ  ಗ್ರಾಮ.

 ವಿಶೇಷತೆಗಳು -
* ಮಧ್ವ ವಾಂಗ್ಮಯದಲ್ಲೇ ಶ್ರೇಷ್ಠ ವ್ಯಾಖ್ಯಾನಕಾರರ ಸಾಲಿನಲ್ಲಿ ನಿಲ್ಲುವವರು.
* ಶ್ರೀ ವಿಷ್ಣುತೀರ್ಥರಂತಹ ಮಹಾಮತಿಗಳನ್ನೂ ಕೊಟ್ಟಿದ್ದು. ಅಲ್ಲದೆ ೩೦೦ ಕ್ಕೂ ಹೆಹ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ , ತಿರುಪತಿಯಲ್ಲಿ ಅನೇಕ ಬಾರೆ ಶ್ರೀಮನ್ಯಾಯಸುಧಾ ಮಂಗಳ ಮಾಡಿದ್ದು.
* ವ್ಯಾಸಸಾಹಿತ್ಯದಲ್ಲಿ ಅನೇಕ ಗ್ರಂಥಗಳನ್ನು ಕೊಟ್ಟದ್ದಲ್ಲದೆ , ಶ್ರೀ ಗೋಪಾಲದಾಸರಿಂದ ಅಂಕಿತ ಹಾಕಿಸಿಕೊಂಡು 'ವಾಸುದೇವವಿಠಲ" ಎಂಬ ಅಂಕಿತದಿಂದ ಹರಿದಾಸ ಕೀರ್ತನೆಗಳನ್ನೂ ರಚನೆ ಮಾಡಿ ಹರಿದಾಸಧುರೀಣರೆನಿಸಿಕೊಂಡದ್ದು.
*  ವಿದ್ವದ್ಗದ್ವಾಲ್ ಎಂದೇ ಖ್ಯಾತವಾದ ಗದ್ವಾಲಿಯಾ ಅರಸನಿಗೆ ರಾಜಗುರುಗಳಾಗಿ ಇದ್ದದ್ದು. ಅನೇಕ ವಾದಿಗಳನ್ನು ಜಯಿಸಿದ್ದು.
* ಶ್ರೀಸುಧಾಪಾಠ ನಿರತರಾಗಿದ್ದಾಗ ರಾಜನ ಆಸ್ಥಾನಕ್ಕೆ ಬಂದಿದ್ದ ದುರ್ವಾದಿಯನ್ನು ಅಡುಗೆಯವನಿಗೆ ಅನುಗ್ರಹಿಸಿ ಅವನು ಆ ವಾದಿಯನ್ನು ಗೆಲ್ಲುವಂತೆ ಮಾಡಿಸಿದ್ದು.
* ಶ್ರೀವಿಷ್ಣುತೀರ್ಥರಿಗೆ ಅನೇಕ ಜನರು ಶಿಷ್ಯರು ದೊರಕುವಂತೆ ಮಾಡಿ ಅನುಗ್ರಹಿಸಿದ್ದು.

ಪವಾಡಗಳು-
* ಶ್ರೀ ಮಂತ್ರಾಲಯ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ಸನ್ಯಾಸ ಪಡೆದು ಶ್ರೀ ವ್ಯಾಸತತ್ವಜ್ಞ ತೀರ್ಥರಾದದ್ದು.
* ನೀರಿನವನಿಂದ ಶಾಸ್ತ್ರ ಹೇಳಿಸಿದ್ದು
* ಮುದುಮಾಲಿ ದೇಸಾಯಿಯ ಉದರ ಶೋಲೆ ಪರಿಹರಿಸಿದ್ದು
* ತಿರುಪತಿಯಲ್ಲಿ ರಥ ಎಳೆಯುವಾಗ ತೋರಿದ ಮಹಾ ಮಹಿಮೆ
* ತಮ್ಮ ಪಾದುಕೆಗಳನ್ನು ಸೇವಿಸಿದ ವಿಷ್ಣುತೀರ್ಥರಿಗೆ ಭವಿಷ್ಯದಲ್ಲಿ ಒಳಿತಾಗುವಂತೆ ಅನುಗ್ರಹಿಸಿದ್ದು.
*  ತಮ್ಮ ಮಠದ ಬಳಿ ನದ್ಯಭಿಮಾನಿ ದೇವತೆಯನ್ನು ಪ್ರಾರ್ಥಿಸಿ , ದಂಡದಿಂದ ಗೆರೆ ಹಾಕಿ ತುಂಗಬಧ್ರೆಯನ್ನೆ ತಮ್ಮ ಬಳಿ ಕರೆಸಿಕೊಂಡಿದ್ದು .
* ಆರಣಿ ಸಂಸ್ಥಾನದಲ್ಲಿ ತಮ್ಮ ನಾಲ್ಕು ಜನ ಶಿಷ್ಯರನ್ನು ಗೆಲ್ಲುವಂತೆ ಮಾಡಿದ್ದು.
* ಬ್ರಹ್ಮರಾಕ್ಷಸನಿಗೆ ಜನ್ಮ ನಿವಾರಣ ಮಾಡಿದ್ದು.
* ಗದ್ವಾಲ್ ರಾಜನ ಆಪತ್ತು ಪರಿಹರಿಸಿದ್ದು.
* ಐಜಿ ಹಳ್ಳವನ್ನು ಗರುಡಾ ನದಿಯನ್ನಾಗಿಸಿದ್ದು
* ಹಂಪೆಯಲ್ಲಿ ವಿರೂಪಾಕ್ಷನ ರಥಕ್ಕೆ ಹತ್ತಿದ ಬೆಂಕಿಯನ್ನು ವೇಣಿಸೋಮಪುರ ದಿಂದಲೇ ನಂದಿಸಿದ್ದು.
* ಗೋವುಗಳಸಹಿತನಾದ ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿದ್ದು.
* ಪೂನ ನಗರದ ವಿದ್ವತ್ಸಭೆಯಲ್ಲಿ ವಾದಿಗಳನ್ನು ಜಯಿಸಿದ್ದು.
* ಮಾರಿಕ ಉಪದ್ರವ ಪರಿಹರಿಸಿದ್ದು.
* ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿ ಶ್ರೀ ವಿಬುಧೇಂದ್ರ ತೀರ್ಥರಿಗೆ ಒಲಿದು ಬಂದ ಶ್ರೀ ನರಸಿಂಹದೇವರನ್ನು ಅರ್ಚಿಸಿದ್ದು.
* ವರ ರೌದ್ರಿನಾಮಸಂವತ್ಸರ ಶ್ರಾವಣ , ಪರಪಕ್ಷ  ಅಷ್ಟಮಿ  ಭೌಮವಾರ , ಭರಣೀ ನಕ್ಷತ್ರ ಪ್ರಾತಃ ಕಾಲದಲ್ಲಿ ಹರಿಧ್ಯಾನ ತತ್ಪರರಾದರು.
* ಇಂದಿಗೂ ನೆನೆದ ಭಕ್ತರನ್ನು , ಶ್ರೀ ಮಂತ್ರಾಲಯ ಪ್ರಭುಗಳಂತೆ ಜ್ಞಾನ , ಭಕ್ತಿ , ವೈರಾಗ್ಯಾದಿ ಗಳನ್ನೂ ಕೊಟ್ಟು ಅನುಗ್ರಹಿಸುತ್ತಿರುವ ಮಹಾ ಮಹಿಮರು..
ಮೂಲವೃಂದಾವನ

Thursday 14 August 2014

64 ವಿದ್ಯೆಗಳಲ್ಲಿ ಪ್ರಾವೀಣ್ಯ ಘಳಿಸಿದ , 104 ಸ್ವತಂತ್ರ ಗ್ರಂಥಗಳನ್ನು ರಚಿಸಿ ಮಾಧ್ವ ವಾಂಗ್ಮಯದಲ್ಲೇ ಸುವರ್ಣ ಇತಿಹಾಸ ಬರೆದ ಶ್ರೀ ವಿಜಯೀಂದ್ರ ತೀರ್ಥರೊಡನೆ , ವಿನಾಯಕ.ರಾಮಚಂದ್ರ.ಜೋಷಿ ಎಂಬುವ ಅಭರಣ ತಯಾರಕ  "ಪದಕ ನಿರ್ಮಾಣ" ಮಾಡುವದರಲ್ಲಿ ಸ್ಪರ್ಧೆಗಿಳಿದನು. ಆಗ ಇಬ್ಬರು ಪದಕ ಮಾಡಲು ಪ್ರಾರಂಭಸಿದರು. ಶ್ರೀಗಳ ಪದಕತಯಾರಿಕಾ ಕೌಶಲ್ಯ ಕಂಡು ಶ್ರೀಗಳನ್ನು ಸೋಲಿಸಲೇ ಬೇಕು ಎಂದುಕೊಂಡು  ಬಂದವನು  ಮೊದಲನೇ ದಿನವೇ ಬೆಚ್ಚಿಬಿದ್ದ. ಅತ್ಯಂತ ಚಾಣಾಕ್ಷರಾದ ಶ್ರೀಗಳವರು ಕೇವಲ 12 ದಿನಗಳಲ್ಲಿ ಪದಕಪೂರ್ಣಗೊಳಿಸಿ ತುಂಬಿದ ಸಭೆಯಲ್ಲಿ ನಿರ್ಣಾಯಕರ ಮುಂದೆ ಇಟ್ಟಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ 64 ವಿದ್ಯೆಗಳಲ್ಲಿಯೂ ಶ್ರೀಗಳವರನ್ನು ಮೀರಿಸುವವರು ಭಾರತ ಖಂಡದಲ್ಲೇ ಬೇರೆಯವರು ಇಲ್ಲ , ಶ್ರೀಗಳವರು ವಿಜಯಿಗಳು ಎಂದು ನಿರ್ಣಾಯಕರು ಉದ್ಘಾರ ತೆಗೆದರು.  ಸಭೆಯಲ್ಲಿ ಜನ ಶ್ರೀ ಸುರೇಂದ್ರ ತೀರ್ಥರು ಇತ್ತ " ವಿಜಯೀಂದ್ರ " ರೆಂಬ  ಅಭಿದಾನ ನಿಜವಾಗಿಯೂ ಸತ್ಯ ಎಂದು ಭಾವುಕರಾದರು. ನಂತರದಲ್ಲಿ ಆ ಕುಶಲಕರ್ಮಿಯು ತನ್ನ ಪದಕವನ್ನು ಗುರುಗಳ ಮುಂದೆ ಇತ್ತು "ಸ್ವಾಮಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ , ನಾನು ಮಡಿದ ದುಸ್ಸಾಹಾಸಕ್ಕೆ ಕ್ಷಮೆ ಇರಲಿ , ನನ್ನ ಪದಕವನ್ನು ಶ್ರೀಮೂಲರಾಮನಿಗಾಗಿ ತಾವು ಸ್ವೀಕರಿಸಬೇಕು " ಎಂದನು. ಗುರುಗಳು ಅದನ್ನು ಸ್ವೀಕರಿಸಿ , ಅವನನ್ನು ಅನುಗ್ರಹಿಸಿದರು. ಆ ಕುಶಲಕರ್ಮಿಯು ಕೊಟ್ಟ ಆ ಪದಕ ಹಾಗು ತಾವೇ ಸ್ವತಃ ನಿರ್ಮಾಣಮಾಡಿದ ಪದಕ ಎರೆಡನ್ನೂ ತಮ್ಮಉಪಾಸ್ಯಮೂರ್ತಿ ಶ್ರೀಮೂಲರಾಮದೇವರಿಗೆ ಹಾಕಿ ಆನಂದದಿಂದ ಅರ್ಚಿಸಿದರು. ಆ ಶ್ರೀ ವಿಜಯೀಂದ್ರ ಗುರುಸಾರ್ವಭೌಮರು ಮಾಡಿ ಮೂಲರಾಮನಿಗೆ ಸಮರ್ಪಸಿದ ಪದಕವನ್ನು ಶ್ರೀಮನ್ಮೂಲರಾಮದೇವರು ಅಧುನಾ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಹಾಕಿಸಿಕೊಂಡು ಆ ಶ್ರೀ  ವಿಜಯೀಂದ್ರ ಗುರುಸಾರ್ವಭೌಮರ ಪರಮಶಿಷ್ಯ ಶ್ರೀ ರಾಘವೇಂದ್ರ ತೀರ್ಥರ ಆರಾಧನಾ ದಿನದಂದು ಮೆರೆದ ಅದ್ಭುತ ಕ್ಷಣಗಳು.. ನಿಜವಾಗಿಯೂ ಇದನ್ನು ಪ್ರತ್ಯಕ್ಷ ಕಂಡ ಜನರು ಪುಣ್ಯವಂತರು. __/\__  

ಶ್ರೀ ಸುಜ್ಞಾನೇಂದ್ರ ತೀರ್ಥರು

।। ಶ್ರೀಮನ್ಮೂಲರಾಮೋ ವಿಜಯತೆ ।। ।। ಶ್ರೀ ಗುರುರಾಜೋ ವಿಜಯತೆ ।।
ಶ್ರೀ ಸುಜ್ಞಾನೇಂದ್ರ ತೀರ್ಥಗುರುಭ್ಯೋ ನಮಃ

ಸುಧಾಸಾರಾರ್ಥ ತತ್ವಜ್ಞಮ್ ಸುರದ್ರುಮಸಮಂ ಸತಾಂ ।
ಸುರಾಧಿಪ ಗುರುಪ್ರಖ್ಯಂ ಸುಜ್ಞಾನೇಂದ್ರಗುರುಂ ಭಜೆ ।। 



ಶ್ರೀ ಹಂಸನಮಕ ಪರಮಾತ್ಮನಿಂದ 44 ನೇಯ ಯತಿಗಳು ,
ಜಗದ್ಗುರು ಶ್ರೀಮಧ್ವಾಚಾರ್ಯರಿಂದ 28 ನೇಯ ಯತಿಗಳು ,
ಶ್ರೀ ರಾಘವೇಂದ್ರ ಗುರುಸಾರ್ವಭೌಮರಿಂದ 12 ನೇಯ ಯತಿಗಳು  ,
 ಮಹಾತಪಸ್ವಿಗಳು  ,
ಅನೇಕ ಬರಿ ಸುಧಾಮಂಗಳವನ್ನು ಮಾಡಿ ಶ್ರೀಮಠದ ಇತಿಹಾಸದಲ್ಲಿ ಮಹತ್ತರ ಘಟ್ಟಕ್ಕೆ ಶ್ರೀಮಠವನ್ನು ಕೊಂಡೊಯ್ದವರು  , ಬ್ರಿಟೀಷರ ಉಪಟಳ ಹೆಚ್ಚಗುತ್ತಿದ್ದಂತೆಯೇ ತಮ್ಮ ಪ್ರಬಲ ತಪಶ್ಶಕ್ತಿಯನ್ನು ತೋರಿಸಿ ಪ್ರಾಚೀನ ಸಂಪ್ರದಾಯವಾದಿಗಳೆನಿಸಿದವರು  ,
 ಮಂತ್ರಾಲಯ ನಿವಾಸಿ ಶ್ರೀ ಸುಧರ್ಮೆಂದ್ರ ತೀರ್ಥರ ಗುರುಗಳು  ,
ನಂಜನಗೂಡಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಬಂದು ನೆಲೆಸುವಂತೆ ಮಾಡಿದವರು  ,
'ಸ್ಥಾನ'  ಕೇಳಿದ್ದಕ್ಕೆ ರಾಯರು ತಮ್ಮ 'ದಿನ'ವನ್ನೇ ಇವರಿಗೆ ಕೊಟ್ಟು ಕರುಣಿಸಿದರು  ,
ಆಂಗ್ಲ ಅಧಿಕಾರಿಯೊಡನೆ ತಮ್ಮ ದರ್ಶನವಾಗದ ಹಾಗೆಯೇ ವ್ಯವಹರಿಸಿದ ಮಹಾ ತಪಸ್ವಿಗಳು ,
ಅದ್ವೈತಿಗಳಿಂದ ಚಂದ್ರಿಕೆಯ ಬಗ್ಗೆ  ಆಕ್ಷೇಪ ಬಂದಾಗ "ಚಂದ್ರಿಕಾಮಂಡನ" ಎಂಬ ಗ್ರಂಥರತ್ನವನ್ನು ರಚಿಸಿ ದುರ್ವಾದಿಗಳನ್ನು ಖಂಡಿಸಿದ ಪಂಡಿತ ಚಕ್ರವರ್ತಿ.
ಮಂತ್ರಾಲಯದಲ್ಲಿ ನೆಲೆಸಲು ಇಚ್ಚಿಸಿದ ಶ್ರೀಗಳಿಗೆ ರಾಯರು ಸ್ವಪ್ನದ್ವಾರಾ ಸೂಚಿಸಿ "ನೀನಿದ್ದಲ್ಲಿಗೆ ನಾನು ಬರುವೆ " ಎಂದು ನುಡಿದು  ನಂಜನಗೂಡಿಗೆ ಬಂದು ನೆಲೆಸಿದರು. ಅಂತಹ ಮಹಾತಪಸ್ವಿ , ತೇಜೋಮೂರ್ತಿ , ವಿರಕ್ತರು,  ಶ್ರೀ ಸುಜ್ಞಾನೇಂದ್ರ ತೀರ್ಥರ  ( ನಂಜನಗೂಡು) ಆರಾಧನಾ ಮಹೋತ್ಸವದಂದು ಅವರನ್ನು ನೆನೆದು ಕೃತಾರ್ಥರಾಗೋಣ.
 

Sunday 10 August 2014

।। ಶ್ರೀರಾಘವೇಂದ್ರ ಗುರವೇ ನಮಃ ಕಾರುಣ್ಯ ಸಿಧಂವೇ ।।

ಬಂತು ಬಂತು ನಮ್ಮ ರಾಯರ ಆರಾಧನೆ.. ಪ್ರತಿ ವರುಷ ಬರುವ ಈ ಮೂರು ದಿನಗಳು ಆಸ್ತಿಕತೆಯನ್ನು ಬಡೆದೆಬ್ಬಿಸುತ್ತವೆ.. ಎ ರಾಯರ ಆರಾಧನಾ ದಿನಗಳಲ್ಲಿ ಜಗತ್ತಿನಾದ್ಯಂತ ಅವರ ಗುಣಗಾನ , ಗ್ರಂಥಗಳ ಅನುವಾದ , ಅವರ ಪವಾಡ , ಅವರ ಗ್ರಂಥ ವೈಶಿಷ್ಟ್ಯ , ಅವರ ವ್ಯಕ್ತಿತ್ವ , ಅವರ ವಾತ್ಸಲ್ಯ , ಅವರ ಚರಿತ್ರೆ  , ಅವರನ್ನು ಕುರಿತು ಇರುವ ರಾಘವೇಂದ್ರ ವಿಜಯದ ಪ್ರವಚನ , ಒಂದು ಕಡೆ ಯತಿಶ್ರೇಷ್ಠ ಶ್ರೀ ವಾದೀಂದ್ರತೀರ್ಥ ವಿರಚಿತ  ಗುರುಗುಣಸ್ತವನದ ಪ್ರವಚನ-ಪಾರಾಯಣ , ಗ್ರಹಸ್ತಾಶ್ರಮಿಗಳಾದ ಅಪ್ಪಣ್ಣಾಚಾರ್ಯರು ರಚಿಸಿದ ಶ್ರೀ ರಾಘವೇಂದ್ರ ಸ್ತೋತ್ರದ ಪರಾಯಣ ಮತ್ತೊಂದು ಕಡೆ   , ಶ್ರೀ ವಿಜಯದಾಸ-ಜಗನ್ನಾಥದಾಸ-ಗೋಪಾಲದಾಸರೇ ಮೊದಲಾದ ದಾಸಶ್ರೇಷ್ಠರ ಪದಗಳ ಪಾರಾಯಣ ,  ಇತ್ಯಾದಿ  ವೈಭವಗಳನ್ನ ನೋಡಿದರೆ , ಯಾಕೆ ಕೇಳಿದರೆ ಸಾಕು ಮೈ ರೋಮಾಂಚನಗೊಂಡು ಎಂತಹ ನಾಸ್ತಿಕನೂ ಆಸ್ತಿಕನಾಗಬಲ್ಲ.  ಅಂತಹ ಅದ್ಭುತ ಶಿಕ್ತಿಯೇ ಶ್ರೀ ರಾಘವೇಂದ್ರ ಗುರುಸರ್ವಭೌಮರು. ಹೆಸರಿನಲ್ಲಿಯೇ ದೇವರು-ವಾಯುದೇವರ ಸಂಪೂರ್ಣ ಸನ್ನಿಧಾನ. ಇನ್ನು ಮೂಲಸ್ವರೂಪವಂತೂ ಕರ್ಮಜದೇವತೆಯಾದ ಶಂಕುಕರ್ಣ. ಪ್ರಹ್ಲಾದರಾಜ-ಬಾಹ್ಲಿಕರಾಜ  ಅವತರಿಸಿ ಪ್ರತಿ ಅವತಾರದಲ್ಲೂ ಶ್ರೀಹರಿಯನ್ನೇ ಆರಾಧಿಸಿದವರು. ಶ್ರೀ ವ್ಯಾಸರಾಜರಾಗಿ ಅವತರಿಸಿ "ವ್ಯಾಸತ್ರಯ"ಗಳ ಕರ್ತೃಗಳಾಗಿ , ಮಧ್ವಸಿದ್ಧಾಂತ ಪತಾಕೆ ಹರಿಸಿದವರು , ಪುರಂದರ-ಕನಕದಾಸಾದಿಗಳಿಗೆ ಅಶ್ರಯದಾತರು , ಶ್ರೀಕೃಷ್ಣದೇವರಾಯನಿಗೆ ರಾಜಗುರುಗಳಾಗಿ ಮೆರೆದವರು.  ಸಮಾಜಕ್ಕೆ ಶ್ರೀ ವಾದಿರಾಜ-ಶ್ರೀ ವಿಜಯೀಂದ್ರ ತೀರ್ಥರಂತಹ ೨೧ ಮಹಾ ಮೇಧಾವಿ ಮೂರ್ಧನ್ಯರನ್ನು ಕೊಟ್ಟು  , ಶ್ರೀ ಮೂಲಗೋಪಾಲಕೃಷ್ಣ ದೇವರನ್ನುಬಿಡದೇ  ಅರ್ಚಿಸಿ ಕೃತಾರ್ಥರಾದವರು. ಶ್ರೀ ನರಸಿಂಹ ದೇವರ ಅನುಗ್ರಹ ಪ್ರಸಾದ ಪಡೆದು ಮುಕ್ತಿಗೆ ಕರೆ ಸಿಕ್ಕರೂ "ನನ್ನ ಭಕ್ತರನ್ನು ಬಿಟ್ಟು ಬರಲಾರೆ " ಎಂದು ಹೇಳಿ  ಭಕ್ತಾಭಿಮಾನಿಯಾದವರು. ಸಾಕ್ಷಾತ್ ನರಸಿಂಹರೂಪಿ ಪರಮಾತ್ಮನೇ ವರ ಬೇಡು ಎಂದಾಗ " ನಿನಗೆ ವರ ಬೇಡದಂತೆ ವರ ಕೊಡು " ಎಂದು  ಕೇಳಿದ ಮಹಾನುಭಾವರು. ಆ ಶ್ರೀನರಸಿಂಹರೂಪಿ ಪರಮಾತ್ಮ "ನೀನು ಬ್ರಹ್ಮಸಂಬಂಧಿಯಾದ ನನ್ನನ್ನು ಅರ್ಚಿಸುವಿ" ಎಂದು ಅನುಗ್ರಹಿಸಿದ್ದಕ್ಕಾಗಿ ಚತುರ್ಯುಗ ಮೂರ್ತಿ ಶ್ರೀ ಬ್ರಹ್ಮದೇವರ ಕರಾರ್ಚಿತ ಪ್ರತಿಮೆಯಾದ , ಶ್ರೀಸೀತಾ ಸಮೇತ ರಾಮಚಂದ್ರ ದೇವರು ಮುಟ್ಟಿ ಪೂಜಿಸಿದ ದಿವ್ಯ ಸನ್ನಿಧಾನೋಪೆತ ಪ್ರತಿಮೆಯಾದ "ಶ್ರೀಮೂಲರಾಮ"ದೇವರನ್ನು ಅರ್ಚಿಸಲು ಆ ರಾಮಚಂದ್ರನ ಹೆಸರನ್ನೇ ಇಟ್ಟುಕೊಂಡು , ಶ್ರೀ ಸುಧೀಂದ್ರ ತೀರ್ಥರಿಂದ ಅನುಗ್ರಹೀತರಾಗಿ ಹಂಸನಾಮಕನ ಪರಂಪರೆಯಲ್ಲಿ "ಶ್ರೀ ರಾಘವೇಂದ್ರ ತೀರ್ಥ" ಎಂಬ ಅಭಿದಾನದಿನ ಅವತರಿಸಿದ ಮಹಾಪುರುಷರು. ಸಜ್ಜನರ ಉದ್ಧಾರವನ್ನೇ ತಮ್ಮ ಧ್ಯೇಯವನಿಗಿಟ್ಟುಕೊಂಡು ಶ್ರೀಮನ್ಯಾಯಸುಧಾ ಪರಿಮಳವೆ ಮೊದಲಾದ ಟಿಪ್ಪಣಿ ಗ್ರಂಥಗಳು , ದಶೋಪನಿಶತ್ತುಗಳಿಗೆ ವ್ಯಾಖ್ಯಾನ ಇತ್ಯಾದಿಯಾಗಿ ಮಾಡಿ ಜಗದ್ಗುರುಗಳು ಎನ್ನಿಸಿದ ಸಿದ್ಧಪುರುಷರು." ಹನುಮನ ಮತವೆ ಹರಿಯ ಮತವು , ಹರಿಯ ಮತವೆ ಹನುಮನ ಮತವು " ಎಂಬ ಮಾತನ್ನು ಸತ್ಯಪಡಿಸಿ ತೊರಿಸಿದವರು. ನಾಡಿನಾದ್ಯಂತ ಸಂಚರಿಸಿ ಮಧ್ವಮತದ ಕೀರ್ತಿ ಪತಾಕೆ ಹಾರಿಸಿದವರು. ತಪ್ತಮುದ್ರಾದಿಧಾರಣೆಯೇ ಮೊದಲಾದ ಸದ್ವೈಷ್ಣವ ಆಚರಣೆಗಳಿಗೆ ಆಕ್ಷೇಪ ಬಂದಾಗ ಸರಿಯಾದ ಉತ್ತರ ಕೊಟ್ಟು "ದುರ್ವಾದಿಧ್ವಾಂತರವಿಃ " ಎನ್ನಿಸಿಕೊಂಡು , ಸತ್ಪರಂಪರೆ ಉಳಿಯುವಂತೆ ಮಾಡಿ ವೈಷ್ಣವವರಿಗೆ "ವೈಷ್ಣವೇಂದೀವರೆಂದುಃ"ಗಳೆನಿಸಿದವರು. ಅಶೇಷ ಸಜ್ಜನರಿಗೆಲ್ಲ ಕಲ್ಪತರು-ಕಾಮಧೇನುಗಳೆನಿಸಿ " ಅತ್ಯಂತದಯಾಲುಃ" ಎಂದೇ ಖ್ಯಾತನಾಮರಾದವರು. ಮುಕ್ತಿಗೆ ಭಕ್ತಿಯೇ ಪ್ರಧಾನಮಾರ್ಗ ಎಂದು ತಿಳಿ ಹೇಳಿ ಆ ಭಕ್ತಿಯನ್ನು ಶ್ರೀಹರಿಯಲ್ಲಿ ಬರುವಂತೆ ಮಾಡಲು "ಕರೆದಲ್ಲಿ ಬರುವಾತ"ಎಂದೇ ಸುಪ್ರಸಿದ್ಧರಾದವರು.ಶ್ರೀ ಸುಮತೀಂದ್ರ ತೀರ್ಥರ ಕೈಯ್ಯಲ್ಲಿ ಮಧ್ವರ ಸೇವೆ ಮಾಡಿಸಿ , ಶ್ರೇಷ್ಠ ಗ್ರಂಥಗಳನ್ನು ಬರೆಯಲು ಅನುಗ್ರಹಿಸಿದರು. ತಮ್ಮ ನಂತರ ಮಧ್ವರ ಸೇವೆಗೆ ಶ್ರೇಷ್ಠ ಯತಿಗಳು ಬರಲಿದ್ದಾರೆ ಎಂದು ಅಭಯವನ್ನಿತ್ತು , ಆಯಾ ಯತಿಗಳ ಕಾಲದಲ್ಲಿ ಅವರಲ್ಲಿ ನಿಂತು ಸಂಪೂರ್ಣ ಅನುಗ್ರಹ ಮಾಡಿದವರು ( ಶೇಷಚಂದ್ರಿಕಾಚಾರ್ಯರ ಬಗ್ಗೆ ವ್ಯಸರಜಾರ ಭವಿಷ್ಯ ವಾಣಿ , ಶ್ರೀ ವರದೇಂದ್ರ ತೀರ್ಥರ ಬಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಭವಿಷ್ಯವಾಣಿ) . ಇಂತಹ ಮಹಾನುಭಾವರು ಪ್ರಹ್ಲಾದಾವತಾರಿ ಶ್ರೀ ರಾಘವೇಂದ್ರ ಸ್ವಾಮಿಗಳು. ಅಂತಹ ರಾಘವೇಂದ್ರ ಗುರುಗಳು ಇಂದಿಗೂ ತಮ್ಮ ಭಕ್ತರನ್ನು ಮತಬೇಧ-ಮಠಬೇಧವಿಲ್ಲದೆ ಪೊರೆಯುತ್ತಿದ್ದಾರೆ. ಅನೇಕರು ಇವರ ಬಗ್ಗೆ ಇಲ್ಲ ಸಲ್ಲದನ್ನು ಮಾತಾಡಿದರೂ ಹಂತವರಿಗೂ ಕೂಡ ಅನುಗ್ರಹ ಮಾಡುವ ದೊಡ್ಡತನ ರಾಯರು. "ಶಾಪಾನುಗ್ರಹಶಕ್ತರು" " ಗುರುಸರ್ವಭೌಮರು" " ಯತಿಕುಲತಿಲಕರು" "ಶ್ರೀಮೂಲರಾಮನ ಉಪಾಸಕರು" "ಶ್ರೀಮೂಲಗೋಪಾಲಕೃಷ್ಣನ ಉಪಾಸಕರು" " ದಿಗ್ವಿಜಯರಾಮನ ಉಪಾಸಕರು" " ಶ್ರೀಮನ್ಯಾಯಸುಧಾಕಾರ ಜಯತೀರ್ಥ ಕರಾರ್ಚಿತ ಶ್ರೀ ಜಯರಾಮದೇವರ ಉಪಾಸಕರು". ನನ್ನ ಸ್ವರೂಪೋದ್ಧಾರಕರು. ಸ್ವಾಮಿ ! ನಿಮ್ಮಂತಹ ಭಾಗವತಶಿಖಾಮಣಿಗಳ ಬಗ್ಗೆ ಮಾತನಾಡುವದು ನಮ್ಮ ಯೋಗ್ಯತೆಯೇ ? ಸಾಧ್ಯವೇ ಇಲ್ಲ. ಇದು ನಿಮ್ಮ ಪವಾಡವೇ. ಸುಮಧ್ವವಿಜಯಕಾರರು "ಮುಕುಂದಭಕ್ತ್ಯೈ ಗುರುಭಕ್ತಿ ಜಾಯೈ " , " ಮನೋವಿಶುಧ್ಧ್ಯೈ ಚರಿತಾನುವಾದಃ" ಎಂದು  ಹೇಳಿರುವಂತೆ ನನ್ನ ಮೇಲೆ ನಿಮ್ಮಅನುಗ್ರಹವನ್ನು ಗುರುಗಳಾದಂತಹ ಶ್ರೀ ಸುಬುಧೇಂದ್ರ ತೀರ್ಥರ ಮೂಲಕ ಮಾಡಿರಿ ಎಂದು ಬೇಡಿಕೊಳ್ಳುತ್ತ ನಿಮ್ಮಯ ಪಾದಾರವಿಂದಗಳಲ್ಲಿ ನನ್ನ ಈ ಚಿಕ್ಕ ಗುರುಕಾಣಿಕೆ. 

                                       ।।  ಶ್ರೀರಾಘವೇಂದ್ರ ಗುರವೇ ನಮಃ  ಕಾರುಣ್ಯ ಸಿಧಂವೇ ।।  
ತಪ್ಪುಗಳಿದ್ದರೆ ಕ್ಷಮೆ ಇರಲಿ. ಬಾಲನ ಮಾತುಗಳು. 

Wednesday 16 July 2014


ಪುಣ್ಯ ಸಂಪಾದನೆಗೆ ದಿವ್ಯ ಅವಕಾಶ - ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮ ಕರುಣೆಗೆ ಪಾತ್ರರಾದ , "ಧರಣಿ ಮಂಡಲದಲ್ಲಿ ಖ್ಯಾತರಾದ " ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರು ಹಾಗು "ಸುಧಾದಿ ಅಮಲ ಗ್ರಂಥಗಳ ಸದ್ಭೋಧಕರಾದ" , "ಸಮೀರಸಮಯಸಂವರ್ಧಿನಿ ಸಭಾ ಪ್ರವರ್ತಕರಾದ" ಶ್ರೀ ಸುಶೀಲೆಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸನ್ನಿಧಿ , ವರದಾ ತೀರ ಹೊಸರಿತ್ತಿ ಗ್ರಾಮದಲ್ಲಿ ಶ್ರೀ ಸುಬುಧೆಂದ್ರ ತೀರ್ಥ ಶ್ರೀಪಾದಂಗಳವರ ಆದೇಶ  ಬಲದಿಂದ ನೆರವೆರಿಸುತ್ತಿರುವ "ಜ್ಞಾನಸತ್ರ" ಕಾರ್ಯಕ್ರಮ ದಿನಾಂಕ. 18 , 19 , 20 ನೆ ಜುಲೈ ನಲ್ಲಿ ಜರುಗಲಿದೆ. ಎಲ್ಲ ಸದ್ಭಕ್ತರು ಭಾಗವಹಿಸಿ ಅನುಗ್ರಹ ಪಡೆಯಬೇಕು. ವಿವರಗಳಿಗಾಗಿ ಸಂಪರ್ಕಿಸಿ - 
ಧಾರವಾಡ - 0836-2796613 (Dharwad)
ಬೆಂಗಳೂರು - ವಿದ್ವಾನ್ ವಾಸುದೇವಾಚಾರ್ಯ ಆದೋನಿ- 9342062105 ( Vidvan Vasudevacharya Adoni )   
  

Monday 14 July 2014

|| ಶ್ರೀ ಜಯತೀರ್ಥರು [ಶ್ರೀ ಟೀಕಾಕೃತ್ಪಾದರು] ||
                                                  Sri Jayateertharu
 ಆಶ್ರಮ ಗುರುಗಳು - ಶ್ರೀ ಅಕ್ಷೋಭ್ಯ ತೀರ್ಥರು
 ಆಶ್ರಮ ಶಿಷ್ಯರು - ಶ್ರೀ  ವಿದ್ಯಾಧಿರಾಜ ತೀರ್ಥರು
  ಕಾಲ - 1365 - 1388
 ಪೂರ್ವಾಶ್ರಮದ ಹೆಸರು - ರಘುನಾಥ ನಾಯಕ 
 ಚರಮ ಶ್ಲೋಕ -
 यस्य वाक्कामधेनुर्नः कामितार्थान् प्रयच्छति ।
सेवे तं जययोगीन्द्रं कामबाणाच्छिदं सदा ॥

ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
ಸೇವೇ ತಂ ಜಯ ಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||

 ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ  , ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಿಕ ಗುರುಗಳಾದ ಶ್ರೀ ಮಜ್ಜಯತೀರ್ಥರು ದ್ವೈತ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ಮಹಾನ್ ಗುರುಗಳು . ಇವರ ಪೂರ್ವಾಶ್ರಮದ ಹೆಸರು ದು0ಡೋಪಂಥ( ರಘುನಾಥ ನಾಯಕ?? ಎಂಬ ಉಲ್ಲೇಖವೂ ಕೆಲವೆಡೆ ಉಂಟು  ) , ಇವರ ತಂದೆಯ ಹೆಸರು ದು0ಡಿರಾಜ . ರಾಜರಿಗೆ ರಘುನಾಥ ನಾಯಕ ಒಬ್ಬನೇ ಒಬ್ಬ ಮಗ . ತಂದೆಯ ನಂತರ ರಘುನಥನಾಯಕ ತಮ್ಮ ಸ್ವಾಯತ್ತತೆಯಲ್ಲಿದ್ದ ಪ್ರಾಂತಗಳಿಗೆ ಒಡೆಯನಾದ . 1352 ರಲ್ಲಿ ಬಹಮನಿ ರಾಜ್ಯದ ಅಲ್ಲವುದ್ದೀನನು ಯಾದವರ ಮೇಲೆ ಧಾಳಿ ಮಾಡಿದ , ಯಾದವರ ಸೈನ್ಯವನ್ನು ಹಿಮ್ಮೆಟ್ಟಿಸಿದ . ಅನೇಕ ಸಾವು-ನೋವುಗಳು ಸಂಭವಿಸಿದವು . ಇದನ್ನು ಕಂಡ ನಾಯಕನಿಗೆ ಬಹಳ  ಬೇಸರವಾಯಿತು . ಮನಸ್ಸು ವೈರಗ್ಯದೆಡೆ  ಸೆಳೆಯಿತು . ಹೀಗೆ ಒಂದು ದಿನ ತನ್ನ ಪರಿವಾರದೊಡನೆ ಬೇಟೆಗಾಗಿ ಹೊರಟಾಗ ನೀರು ಕುಡಿಯಲೆಂದು ಭೀಮಾನದಿ ತೀರದಲ್ಲಿ ತಂಗಿದ್ದಾಗ , ಅದೇ ದಾರಿಯಲ್ಲಿ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ಮದಕ್ಶೋಭ್ಯ ತೀರ್ಥರು ಸಂಚಾರ ಹೊರಟಿದ್ದರು . ಮಹಾರಾಜನನ್ನು ನೋಡಿ ಅವನ ಅಪಾರ ತೇಜಸ್ಸನ್ನು ನೋಡಿ , ಮುಂದಿನ ಘಟನಾವಳಿಗಳ ಅರಿವಾಗಿ , ಅವನ ಅವತಾರ ಕಾರ್ಯ ಸನ್ನಿಹಿತ ಎಂದು ತಿಳಿದು ರಾಜನನ್ನು ಕುರಿತು  " ರಘುನಾಥ , ಇದೇನಪ್ಪ ? ಈ ರಾಜ್ಯ ಕೋಶಾದಿಗಳು ನಿನಗೆ ಶಾಶ್ವತವೇ ? ನಿನ್ನ ಉದ್ಧಾರ ಇದರಿಂದ ಸಾಧ್ಯವಿಲ್ಲಪ್ಪಾ " ಎಂದು ಸೂಕ್ಷ್ಮವಾಗಿ ಹೇಳಿದರು. ನಾಯಕನ ಮನಸ್ಸು ವೈರಾಗ್ಯದೆಡೆ  ಮೊದಲೇ ಜಾರಿದ್ದರಿಂದ ಶ್ರೀ ಗಳವರ ಮಾತು ಬಹಳವಾಗಿ ಮನಸ್ಸಿಗೆ ನಾಟಿದವು . ತನ್ನ ಪರಿವಾರ , ರಾಜ್ಯ ,ಸಂಪತ್ತು , ಅಧಿಕಾರ ಎಲ್ಲವನ್ನು ಬದಿಗೊತ್ತಿ ಶ್ರೀ ಗಳವರಲ್ಲಿಗೆ ಬಂದು " ಸ್ವಾಮಿ ನೀವು ನನ್ನ ಕಣ್ಣು ತೆರೆಸಿದಿರಿ ಇಂದಿನಿಂದ  ನೀವು ನನ್ನ ಗುರುಗಳು , ನಾನು ನಿಮ್ಮ ಶಿಷ್ಯ . ನನಗೆ ಸನ್ಯಾಸ ಕೊಟ್ಟುಬಿಡಿ ಸ್ವಾಮಿ, ಇದೆಲ್ಲ ಸಾವು-ನೋವು ಯಾತಕ್ಕಾಗಿ ? ಈ ಸಂಪತ್ತು ಮಡದಿ-ಮಕ್ಕಳು ಯಾರಿಗಾಗಿ ?? ಸನ್ಯಾಸ ಸ್ವೀಕಾರ ಮಾಡಿದರೆ ಸಾಧನೆಗೆ ನೆರವಾದೀತು ದಯಮಾಡಿ ಸನ್ಯಾಸ  ಭೀಕ್ಷೆ ನೀಡಿ ಸ್ವಾಮೀ " ಎಂದು ಮನವಿ ಮಾಡಿಕೊಂಡ . ತ್ರಿಕಾಲ ಜ್ಞಾನಿಗಳಾದ ಶ್ರೀಗಳಿಗೆ ಎಲ್ಲವು ಗೊತ್ತಿದ್ದರು ಏನು ಗೊತ್ತಿಲ್ಲವೇನೋ ಎಂಬಂತೆ " ರಘುನಾಥ ನಿನ್ನ ವೈರಗ್ಯಕ್ಕೆ ನಾನು ಮೆಚ್ಚಿದೆ . ಆದರೆ ನೀನು ವಿವಾಹಿತ ಯುವಕ . ನಿನ್ನ ಸಂಸಾರದ ಗತಿ ? ನಿನ್ನ ಅಶ್ರಿತರ ಗತಿ ? ನೀನು ಮನೆಗೆ ತೆರಳು  ನಾವು ನಿನಗೆ ಆಚಾರ್ಯರ ಗ್ರಂಥಗಳನ್ನು ಬೋಧಿಸುತ್ತೇವೆ . ಸನ್ಯಾಸದ ಬಗ್ಗೆ ಈಗ ವಿಚಾರ ಬೇಡ ." ಎಂದು ಹೇಳಿದರು. ಆಗ ನಾಯಕ " ಇಲ್ಲ ಸ್ವಾಮಿ ಶಾಶ್ವತ ಸುಖದ ದಾರಿ ತೋರಿ ನೀವು ನನಗೆ ಅನುಗ್ರಹಿಸಬೇಕು . ಈ ಸಂಸಾರ ಅಸಾರ . ಇದು ಅಶಾಶ್ವತ . ಈ ಲೌಕಿಕ ಜೀವನಕ್ಕೆ ಕೊನೆಯೇ ಇಲ್ಲ , ದಯವಿಟ್ಟು ನನಗೆ ಸನ್ಯಾಸ ಕೊಡಿರಿ" ಎಂದು ನಿಜವಾದ ವೈರಾಗ್ಯದಿಂದ ನುಡಿದ. ಆಗ ಶ್ರೀಗಳು ತಥಾಸ್ತು ಎಂದು ನಾಯಕನಿಗೆ ಸನ್ಯಾಸ ನೀಡಿ ಶ್ರೀ ಜಯತೀರ್ಥರು ಎಂದು ನಾಮಕರಣ ಮಾಡಿ  ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದರು. ನಾಯಕರು ಶ್ರೀ ಜಯತೀರ್ಥರಾದದ್ದನ್ನು ಕೇಳಿ ಅವರ ಪೂರ್ವಾಶ್ರಮದ ಮನೆಯವರು ಬಂದು ಶ್ರೀ ಅಕ್ಷೋಭ್ಯ ತೀರ್ಥರನ್ನು ನಿಂದಿಸಿ ಶ್ರೀ ಜಯತೀರ್ಥರನ್ನು ಮರಳಿ ಮನೆಗೆ ಕರೆದೊಯ್ದರು . ಅಲ್ಲಿ ಅವರ ಪೂರ್ವಾಶ್ರಮದ ಪತ್ನಿಯನ್ನು ಪತಿಸಂಗಮಕ್ಕಾಗಿ ಕಳುಹಿಸಿದಾಗ ಶ್ರೀ ಶೇಷನ ಆಕೃತಿಅಲ್ಲಿದ್ದ ಶ್ರೀ ಜಯತೀರ್ಥರ ದಿವ್ಯ ತೇಜಸ್ಸನ್ನು ಕಂಡು ಅವರನ್ನು ಕಣ್ಣಿನಿಂದ ನೋಡಲಾಗದೆ ಹೊರಗೆ ಓಡಿಹೋದಳು . ಮನೆಯವರಿಗೆಲ್ಲ ಶ್ರೀ ಜಯತೀರ್ಥರ ಶಕ್ತಿ ಅರಿವಾಗಿ ಎಲ್ಲರು ಕ್ಷಮಾದಾನ ಬೇಡಿದರು . ಶ್ರೀ ಹರಿಯ ಇಚ್ಚೆಯನ್ನು ಬದಲಿಸಲಾಗದು ಎಂದು ತಮ್ಮ ಅವತಾರ ಕಾರ್ಯ ಅರಿತ  ಶ್ರೀ ಜಯತೀರ್ಥರು ಅವರಿಗೆ ಬುದ್ಧಿ ಹೇಳಿ ಅಲ್ಲಿಂದ ಗುರುಗಳು ಇದ್ದಲ್ಲಿಗೆ ಬಂದರು . ಶ್ರೀ ಅಕ್ಷೋಭ್ಯ ತೀರ್ಥರಲ್ಲಿ ಸಮಗ್ರ ಆಚಾರ್ಯರ ಗ್ರಂಥಗಳ ಅಧ್ಯನವಾಯಿತು . ಶ್ರೀ ಜಯತೀರ್ಥರು ,ತಮ್ಮ ಗೀತಭಾಷ್ಯದ  ಕೊನೆಯಲ್ಲಿ " ಅಕ್ಷೋಭ್ಯತೀರ್ಥ ಗುರುಣಾ ಶುಕವತ್ ಶಿಕ್ಷಿತಸ್ಯ ಮೇ " (  ಶ್ರೀ ಅಕ್ಷೋಭ್ಯ ತೀರ್ಥರು ನನಗೆ ಗಿಳಿಗೆ ಪಾಠ ಹೇಳಿದಂತೆ ಪಾಠ ಹೇಳಿದರು ) ಎಂದು ತಮ್ಮ ಅಧ್ಯಯನದ ರೀತಿಯನ್ನು ಮೆಲುಕು ಹಾಕಿದ್ದಾರೆ  . ಶ್ರೀ ಅಕ್ಶೋಭ್ಯರ ಹತ್ತಿರ ಸಕಲ ಗ್ರಂಥಾಧ್ಯಯನವಾದ ನಂತರ ಶ್ರೀ ಜಯತೀರ್ಥರು ಆಚಾರ್ಯರ ಗ್ರಂಥಗಳಿಗೆ ಟಿಪ್ಪಣಿ ಬರೆಯಲು ಪ್ರಾರಂಭಿಸಿದರು . ಶ್ರೀ ಅಕ್ಷೋಭ್ಯ ತೀರ್ಥರವರೆಗೆ ಎಲ್ಲರೂ ಸಾಕ್ಷಾತ್ ಮಧ್ವರ ಕೈಯಲ್ಲಿ ಪಳಗಿದ್ದರಿಂದ ಮಧ್ವರ ಗ್ರಂಥಗಳಿಗೆ ಟಿಪ್ಪಣಿ ಅಷ್ಟೊಂದು ಅವಶ್ಯಕತೆ ಇರಲಿಲ್ಲ . ಆದರೆ ಆಚರ್ಯರನ್ನು ಬಿಟ್ಟು ಅವರ ಶಿಷ್ಯರ ಹತ್ತಿರ ಅಧ್ಯಯನ ಮಾಡಿದ ಶ್ರೀ ಜಯ ತೀರ್ಥರು ಮುಂದಿನ ದಿನಮಾನದಲ್ಲಿ ಮಾಧ್ವ ಗ್ರಂಥಗಳಿಗೆ ಟಿಪ್ಪಣಿಯ ಅವಶ್ಯಕತೆಗಳನ್ನು ಅರಿತು ಅದನ್ನು ರಚಿಸಲು ಮುಂದಾದರು . ಈ ಟಿಪ್ಪಣಿಗಳನ್ನು ರಚಿಸಲು ಜಯತೀರ್ಥರು ಒಂದು ಗುಹೆಗೆ ತೆರಳಿದರು. ಅಲ್ಲಿಯೇ ದೇವತಾರ್ಚನೆ ಮುಂತಾದ ಕಾರ್ಯಗಳನ್ನು ಯಾವುದೇ ಲೋಪವಿಲ್ಲದೆ ಮಾಡುತ್ತಿದ್ದರು. ಹೀಗೆ ಆ ಗುಹೆಗೆ ಶ್ರೀ ಶಂಕರ ಮಹಾ ಪೀಠವಾದ ,ಶೃಂಗೇರಿ ಶಾರದ ಪೀಠದ ಶ್ರೀ ವಿದ್ಯಾರಣ್ಯರು ಅಲ್ಲಿಗೆ ಬಂದರು ( ವಿದ್ಯಾರಣ್ಯರು ಈಗಾಗಲೇ ಜಯತೀರ್ಥರ ಗುರುಗಳಾದ ಅಕ್ಷೋಭ್ಯ ತೀರ್ಥರ ಹತ್ತಿರ "ತತ್ವಮಸಿ" ಎಂಬ ಪದದ ವಾಕ್ಯರ್ಥದಲ್ಲಿ ಸೋತಿದ್ದರು) . ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರು ತಾವು ವ್ಯಾಖ್ಯಾನ ಬರೆಯುತ್ತಿದ್ದ , ಮಧ್ವರ "ಪ್ರಮಾಣ ಲಕ್ಷಣಂ" ಎಂಬ ಗ್ರಂಥವನ್ನು ತೋರಿಸಿದರು. ಆಗ ವಿದ್ಯಾರಣ್ಯರಿಗೆ ಅದರ ತಲೆ ಬುಡ ಹತ್ತಲಿಲ್ಲ. ಅವರು " ಬಾಲಕನ ಮಾತುಗಳನ್ನು ಕಟ್ಟಿಕೊಂಡೆನು" ಎಂದು ಹಾಸ್ಯ ಮಾಡಿದರು. ಆಗ ಶ್ರೀ ಜಯತೀರ್ಥರು ತಾವು ಆ ಗ್ರಂಥದ ಮೇಲೆ ರಚಿಸಿದ ಟಿಪ್ಪಣಿಯನ್ನು ತೋರಿಸಿದರು ಅದನ್ನು ಓದಿದ ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರ ಸಾಮರ್ಥ್ಯ ತಿಳಿಯಿತು. ಆ ಗ್ರಂಥ ಅವರಿಗೆ ಈಗ ಅರ್ಥವಾಗಿತ್ತು. [ಅವರು ಮಧ್ವರ ಗ್ರಂಥಗಳ ಮೆರವಣಿಗೆ ಮಾಡಿಸಿದರು ಎಂಬ ಐತಿಹ್ಯವೂ ಉಂಟು ] . ಶ್ರೀ ಜಯತೀರ್ಥರ ವ್ಯಾಖ್ಯಾನಗಳು ಬಹಳ ಗಂಭೀರ , ಸುಂದರ . ಅತೀವ ಆನಂದವನ್ನು ಉಂಟು ಮಾಡುತ್ತವೆ.
                      ಶ್ರೀ ಜಯತೀರ್ಥರ ಹತ್ತಿರ ಪೇಜಾವರ ಮಠದ  ಶ್ರೀ ಮಹೇಂದ್ರ ತೀರ್ಥರು ತಾವು ಬರೆದ " ಭಾಗವತ ವ್ಯಾಖ್ಯಾನ" ಗ್ರಂಥವನ್ನು ತೋರಿಸಿ ಜಯಾರ್ಯರಿಂದ ಪ್ರಶಂಸೆ ಗಿಟ್ಟಿಸಿದರು. ಶ್ರೀ ಜಯತೀರ್ಥರ ಟಿಪ್ಪಣಿ ಗಳಿಲ್ಲದೆ ಶ್ರೀಮದಾಚಾರ್ಯರ ಯಾವ ಗ್ರಂಥಗಳು ಅರ್ಥವಾಗುವದಿಲ್ಲ. ಶ್ರೀ ಜಯತೀರ್ಥರು ಅನೇಕ  ಗ್ರಂಥಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ "ಶ್ರೀಮನ್ಯಾಯ ಸುಧಾ" ಇವರ ಮೇರು ಕೃತಿ  . ಇವರ  ಶ್ರೀಮನ್ಯಾಯಸುಧಾ ಗ್ರಂಥದ ಬಗ್ಗೆ ಒಂದು ಉಕ್ತಿ ಇದೆ " ಸುಧಾ ವಾ ಪಠನೀಯಾ ವಸುಧಾ ವಾ ಪಾಲನೀಯ"ಎಂದು. ಇವರ ಗ್ರಂಥಗಳು ಇಲ್ಲದಿದ್ದರೆ ಇಂದಿನ ಸಮಾಜದಲ್ಲಿ ಮಾಧ್ವರು ಆಚಾರ್ಯರನ್ನು ಅರ್ಥೈಸಿಕೊಳ್ಳುವದೇ ಸಾಧ್ಯವಿರಲಿಲ್ಲ . ಇವರ ಗ್ರಂಥಗಳು ಅಷ್ಟೊಂದು ಮಹತ್ವವನ್ನು ಪಡೆದುಕೊಂಡಿವೆ. ಇವರ ನ್ಯಾಯ ಸುಧೆ ಇಂದು ಪಂಡಿತರಿಗೆ ನೀಡುವ "ಡೀಗ್ರೀ ಸೇರ್ಟಿಫಿಕೆಟ್ " ಆಗಿದೆ . ಅಂದರೆ ಅದನ್ನು ಓದಿದರೆ ಮಾತ್ರ ಆಚಾರ್ಯರ ಗ್ರಂಥಗಳು ಅರ್ಥವಾಗುವವು ಎಂದು.
*ಶ್ರೀ ವ್ಯಾಸರಾಜ ತೀರ್ಥರು  ಟೀಕಾಚಾರ್ಯರನ್ನು ಕುರಿತು ಹೀಗೆ ಹೇಳಿದ್ದಾರೆ , 
                   ಆನಂದತೀರ್ಥ ಉಪದಿಷ್ಟೋ ನಿಧಿರ್ನಾರಾಯಣಾಹ್ವಯ : |
                   ಪ್ರದರ್ಶಿತೋ ಯೇನ ಸಮ್ಯಕ್  ಜಯತೀರ್ಥಂ ತಮಾಶ್ರಯೇ || 
                                                           - ತರ್ಕ ತಾಂಡವ  ಗ್ರಂಥದಿಂದ ಆರಿಸಿದ್ದು
             
*ಶತಾಧಿಕ ಗ್ರಂಥರತ್ನ ಪ್ರಣೆತ  ಶ್ರೀ ವಿಜಯೀಂದ್ರ ತೀರ್ಥರು ಟೀಕಾಚಾರ್ಯರನ್ನು ಕುರಿತು ,
                   ಮಧ್ವಶಾಸ್ತ್ರಮಹಾಚಾಪಮನುದ್ಧಾರ್ಯಮಪೀತರೈ: |
                   ಉಧ್ರುತ್ಯ ಕೀರ್ತಿಂ ಯೋ ಲೇಭೆ ತಮ್ ಜಯಾರ್ಯಂ ಸದಾ ಭಜೆ ||
                                                               - ಭೇದವಿದ್ಯಾ ವಿಲಾಸ ಎಂಬ ಗ್ರಂಥದಿಂದ ಆರಿಸಿದ್ದು 
                   ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
                  ಸೇವೇ ತಂ ಜಯ ಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||
                                                              - ಮಧ್ವಾದ್ವಕಂಟಕೊದ್ಧಾರ ಮಂಗಳಾಚರಣ ಶ್ಲೋಕ 

 ಈ ಮೇಲಿನ ' ಯಸ್ಯ ವಾಕ್ಕಾಮಧೇನುರ್ನ: ................ ಸದಾ ' ಶ್ಲೋಕವು ರಾಘವೇಂದ್ರ ಸ್ವಾಮಿಗಳವರ ಪೂರ್ವಿಕ ಗುರುಗಳು  ಶ್ರೀ ವಿಜಯೀಂದ್ರ ತೀರ್ಥ ಶ್ರೀಪಾದಂಗಳವರು ಬರೆದದ್ದು . ಇದು ಬಹಳ  ಮಹತ್ವವಾದ ಶ್ಲೋಕ . ಇದನ್ನು ಶ್ರೀ ವಿಜಯೀಂದ್ರ ತೀರ್ಥರೆ ಬರೆದದ್ದು ಎನ್ನಲು ಬಹಳ ದಾಖಲೆಗಳು ಲಭ್ಯ . ಇದರ ವಿಶೇಷತೆ ಏನು ಅಂದರೆ ' ಈ ಶ್ಲೋಕವನ್ನು ಪ್ರಸ್ತುತ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಗಳಾದ  ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗು ಶ್ರೀ ಉತ್ತರಾದಿ ಮಠದಲ್ಲಿನ ಗುರು ಪರಂಪರಾ ಚರಮ ಶ್ಲೋಕಗಳ ಸಾಲಿನಲ್ಲಿ ಶ್ರೀ ಜಯತೀರ್ಥರ ಚರಮ ಶ್ಲೋಕಕ್ಕೆ ಇದೇ  ಶ್ಲೋಕವನ್ನು ನೀಡಲಾಗಿದೆ .** ( ಕೊನೆಗೆ ನೀಡಲಾಗಿರುವ ಪರಿಶಿಷ್ಟ 1ನ್ನು ಓದಿ )
       
                    
                   ಶ್ರೀ ವಾದಿರಾಜ ತೀರ್ಥರು ಟೀಕಾಚಾರ್ಯರನ್ನು ಕುರಿತು ,
                   ಶ್ರೀ ಮನ್ಯಾಯಸುಧಾ ಏನ ನಿರ್ಮಿತಾ ಧೀಮತಾ ಮತಾ |
                   ತಮ್ ಜ್ಞ್ಯಾನಾದಿ ಗುಣೋಪೇತಂ ಜಯತೀರ್ಥ ಗುರುಂ ಭಜೆ || 
                                                              -  ನಯ ಸಿದ್ಧಾಂತ ಸಂಗ್ರಹ 
          
                   ಶ್ರೀ ರಾಘವೇಂದ್ರ ಗುರುಸಾರ್ವಭೌಮರು  ಟೀಕಾಚಾರ್ಯರನ್ನು ಕುರಿತು ,
                   ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಗರ್ಭಿತಾ |
                   ಪ್ರತಿಭಾತಿ ಸುಧಾSಥಾಪಿ ಗ್ರಂಥಾಲ್ಪತ್ವಾಯ ನೋಚ್ಯತೆ ||
                                                             - ನ್ಯಾಯಸುಧಾ ಪರಿಮಳ 
ಶ್ರೀಮನ್  ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ-ವಿದ್ಯಾಮಠ- ಮಂತ್ರಾಲಯ/ನಂಜನಗೂಡು ಇದರ ಪೀಠ ವಿರಾಜಮಾನ , ಪ್ರಾತ: ಸ್ಮರಣೀಯರಾದ ಶ್ರೀ 1008 ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ವರಕುಮಾರರಾದ ಅಧುನಾ ಪೀಠ ವಿರಾಜಮಾನರಾದ ಶ್ರೀ 1008 ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಬಗೆಗೆ ನುಡಿದ ಮಾತುಗಳು - 
     " ಮಧ್ವ ಸಿದ್ಧಾಂತಕ್ಕೆ ನಮ್ಮ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಕೊಡುಗೆ ಅಪಾರ . ಶ್ರೀ ಮನ್ಯಾಯ ಸುಧಾ ಗ್ರಂಥವನ್ನು ಸಾರಸ್ವತಲೋಕಕ್ಕೆ ಕೊಡುವ ಮೂಲಕ ಸಿದ್ಧಾಂತವನ್ನು ಶ್ರೀಮಂತಗೊಳಿಸಿದರು . ಶ್ರೀ ಜಯತೀರ್ಥರ ಗ್ರಂಥದ ಮೇಲೆ ನಾಣ್ಣುಡಿ ಒಂದು ರಚಿತ ವಾಗಿದೆ ಎಂದರೆ ಅವರ ಗ್ರಂಥ ರಚನಾ ಸಾಮರ್ಥ್ಯ , ರಚನಾ ಶಕ್ತಿ ಎಂತಹುದು ಎಂದು ತಿಳಿಯಬಹುದು . ಇಂದು ಮಧ್ವ ಸಿದ್ಧಾಂತದ ಮೇರು ಕೃತಿಯಾದ ಶ್ರೀ ನ್ಯಾಯ ಸುಧೆಗೆ  30 ಕ್ಕೂ ಹೆಚ್ಚು ಟಿಪ್ಪಣಿಗಳಿವೆ ಇದರಿಂದಲೇ ಸುಧಾ ಗ್ರಂಥದ ಅಗಾಧ ಪ್ರೌಢಿಮೆ ಯನ್ನು ನಾವು ಅರಿಯಬಹುದು. ಶ್ರೀ ಮಠವು ಶ್ರೀ ಜಯತೀರ್ಥರ ಸಮಗ್ರ ಗ್ರಂಥಗಳ ಅಧ್ಯಯನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನೂ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಮಾಡಿ ಮಠದ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಸೇವೆಯನ್ನು ನಿರಂತರ ಮಾಡುತ್ತಲಿದೆ "
                                                              - "ಶ್ರೀ ಸುಯತೀಂದ್ರ ಸೂಕ್ತಿ ಸುಧಾ " 
                                                                  " ಶ್ರೀ ಗುರುಸಾರ್ವಭೌಮ " ಕನ್ನಡ ಮಾಸಪತ್ರಿಕೆ 
                                                                   ಶ್ರೀ ಮಠದ ಅಧಿಕೃತ ಮಾಸ ಪತ್ರಿಕೆ , ಜುಲೈ - ಆಷಾಢ ಸಂಚಿಕೆ 2012 
 ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರ ಜಯತೀರ್ಥರ ಬಗೆಗಿನ ಮಾತುಗಳು 
   
  ಶ್ರೀಮಜ್ಜಯ ತೀರ್ಥರು ಶ್ರೀರಂಗ ಮುಂತಾದ ವೈಷ್ಣವ ಕ್ಷೇತ್ರಗಳಿಗೆ ಭೇಟಿ ನೀಡಿದ ದಾಖಲೆಗಳು ಇವೆ . ಟೀಕಾ ಕೃತ್ಪಾದರು ತಮ್ಮ ಕೊನೆಗಾಲದಲ್ಲಿ ದಕ್ಷಿಣದೇಶದಲ್ಲೆಲ್ಲ ಸಂಚರಿಸಿ ತಮ್ಮ ಗುರುಗಳು ವೃಂದಾವನಸ್ಥರಾಗಿದ್ದ ಮಲಖೇಡ ಕ್ಷೇತ್ರಕ್ಕೆ ಹೋಗಿ ದರ್ಶನ ಮಾಡಿಕೊಂಡು 1388 ರಲ್ಲಿ  ಆನೆಗೊಂದಿಯಲ್ಲಿ ( ನವವೃಂದಾವನ ಕ್ಷೇತ್ರ ) ವೃಂದಾವನ ಪ್ರವೇಶ ಮಾಡಿದರು. ** ( ಪರಿಶಿಷ್ಟ 2 ನೋಡಿ )
        ಪರಿಶಿಷ್ಟ1** ಶ್ರೀ ಜಯತೀರ್ಥರ ಪಟ್ಟದ ಶಿಷ್ಯ  ಶ್ರೀ ವಿದ್ಯಾಧಿರಾಜ ತೀರ್ಥರು ಬರೆದ ಚರ್ಮ ಶ್ಲೋಕ ಎಲ್ಲಿ ಹೋಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ . ಇದಕ್ಕೆ ಉತ್ತರ ಇನ್ನು ದೊರೆತಿಲ್ಲಾ . ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರ ಪೂರ್ವಾಶ್ರಮದ ಹೆಸರು ಕೃಷ್ಣಭಟ್ಟರು , ಇವರು 4 ವರ್ಷಗಳ ಕಾಲ ಅಧಿಪತಿಯಾಗಿದ್ದರು , ' ಮುಂದೆ ಯರಗೊಳದಲ್ಲಿ ವೃಂದಾವನಸ್ಥರಾದರು' ಎಂದು ಮಠಗಳಲ್ಲಿನ ಗುರು ಪೀಳಿಗೆಯಿಂದ ತಿಳಿದು ಬರುತ್ತದೆ.ಆದರೆ ಇತಿಹಾಸಕಾರರ ಕೆಲವು ಸಂಶೋಧನೆಗಳ ಪ್ರಕಾರ  ಇವರ ವೃಂದಾವನ ಕಳಿಂಗದ(ಒರಿಸ್ಸಾ)ದ  ಜಗನ್ನಾಥ ಪುರಿಯಲ್ಲಿ ಇತ್ತು  .ಆದರೆ ಇವರ ವೃಂದಾವನ ಲಭ್ಯವಿಲ್ಲ . ಇವರು ರಚಿಸಿದ ಶ್ರೀ ಜಯತೀರ್ಥರ ಚರಮ  ಶ್ಲೋಕವೂ ಲಭ್ಯವಿಲ್ಲ . ಇವರು ಜಯತೀರ್ಥರ ಶಿಷ್ಯರು ಎಂದಾದಮೇಲೆ ಇವರ ಪಾಂಡಿತ್ಯದ ಮಟ್ಟವನ್ನು ಊಹಿಸಬಹುದು . ಶ್ರೀ ವಿದ್ಯಾಧಿರಾಜರ ಬಗೆಗೆ ಕೇವಲ ಸ್ವಲ್ಪ ಮಾತ್ರವೇ ಮಾಹಿತಿ ಲಭ್ಯವಿದ್ದುದು , ಅವರು ರಚಿಸಿದ ಯಾವುದೇ ಗ್ರಂಥಗಳು ಸಿಗದಿದ್ದುದು , ಅವರ ರಚನಾ ಸಾಮರ್ಥ್ಯ ಇಂದಿನ ಜನರಿಗೆ ತಿಳಿಯದಿದ್ದುದು ಸಾಕಲ ಮಾಧ್ವ ಸಮಾಜಕ್ಕೆ ಒಂದು ದುರದೃಷ್ಟಕರ ಸಂಗತಿ .                            
     ಪರಿಶಿಷ್ಟ2**  "  ಶ್ರೀ ಮಜ್ಜಯ ತೀರ್ಥರು 1388 ರಲ್ಲಿ ಕೇವಲ ತಮ್ಮ ಗುರುಗಳ ವೃಂದಾವನ ದರ್ಶನ ಮಾಡಿಕೊಂಡರೆ ಹೊರತು ಅಲ್ಲಿ ಅವರ ವೃಂದಾವನ ಪ್ರವೇಶ ಮಾಡಲಿಲ್ಲ ಮುಂದೆ ಅವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಪದ್ಮನಾಭ ತೀರ್ಥರ ವೃಂದಾವನವಿದ್ದ ಗಜ ಗಹ್ವರ ( ಆನೆಗೊಂದಿ , ಈಗ ನವವೃಂದಾವನ) ದಲ್ಲಿ ವೃಂದವನ ಪ್ರವೇಶ ಮಾಡಿದರು." ಎಂಬುದು ಇತ್ತೀಚಿನ ಕೆಲವು ಸಂಶೋಧಕರ( ವಿದ್ವಾನ್ ಬಿ ಏನ್ ಕೆ ಶರ್ಮ ಹಾಗು ಇತ್ಯಾದಿ ) ಅಭಿಪ್ರಾಯವಾಗಿದೆ .   ಯಾದಕ್ಕೆ ಪುಷ್ಟಿ ನೀಡುವ ಲಬ್ಧ ಪ್ರಮಾಣ ಶ್ರೀ ವಾದಿರಾಜರು ರಚಿಸಿದ ತೀರ್ಥ ಪ್ರಬಂಧ . ಇದರಲ್ಲಿ ರಾಜರು ತಾವು ಭೇಟಿ ನೀಡಿರುವ ಕ್ಷೇತ್ರಗಳ ಮಹಿಮೆ ಅಲ್ಲಿರುವ ದೈವವನ್ನು ವರ್ಣಸಿರುತ್ತಾರೆ . ಅದೇ ರೀತಿ ರಾಜರು ಗಜ ಗಹ್ವರ ಕ್ಕೆ ಭೇಟಿ ನೀಡಿದಾಗ ಶ್ರೀ ಪದ್ಮನಾಭ ತೀರ್ಥಾದಿಯಾಗಿ ಯತಿಗಳನ್ನು ನಮಿಸುವಾಗ ಶ್ರೀ ಮಜ್ಜಯ ತೀರ್ಥ ರನ್ನು ನಮಿಸಿದ್ದಾರೆ . ಅದರಿಂದ ಮಳಖೇಡದಲ್ಲಿರುವದು ಕೇವಲ ಮೃತ್ತಿಕ ವೃಂದಾವನ ಗಜ ಗಹ್ವರದಲ್ಲಿರುವದೇ  ಮೂಲ ವೃಂದವನ ಎಂಬ ಅಭಿಪ್ರಾಯಕ್ಕೆ ಸಂಶೋಧಕರು ಬಂದಿದ್ದಾರೆ . ಆದರೆ ದಾಸರ ಪದಗಳಲ್ಲಿ ಜಯ ತೀರ್ಥರು " ಮಳಖೇಡ ವಾಸ " ಎಂದೇ ವರ್ಣಿತರಾಗಿದ್ದಾರೆ . ಆದ್ದರಿಂದ ಈ ವಿಷಯದಲ್ಲಿ ಇನ್ನು ಹೆಚ್ಚು ಸಂಶೋಧನೆ ಅಗತ್ಯವಿದೆ .   

                                           ಆದರೆ ಶ್ರೀ ಜಯತೀರ್ಥರು ಮಾತ್ರ ನಮ್ಮೊಂದಿಗೆ ಆನೆಗೊಂದಿ ಯಲ್ಲೇ ಆಗಲಿ ಮಲಖೆಡದಲ್ಲೇ ಇರಲಿ ಒಟ್ಟು ಇದ್ದಾರೆ .    
                                                                                                                           
ಸಶೇಷ .... 
To be continued 

Sunday 15 June 2014

ಏಕಾದಶೀ ವೃತಾಚರಣೆಯ ಮಹತ್ವ-  
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವಿದ್ಯಾಶಿಷ್ಯರಾದ ಶ್ರೀ ಕೃಷ್ಣಾಚಾರ್ಯರು ತಮ್ಮ " ಸ್ಮೃತಿ ಮುಕ್ತಾವಳಿ " ಎಂಬ ಗ್ರಂಥದಲ್ಲಿ ಏಕಾದಶಿ ವೃತದ ಮಹಿಮೆ ಯನ್ನು ಈ ರೀತಿ ತಿಳಿಸುತ್ತಾರೆ..  
ಕಂತು 1
ಹರಿಃ ಓಂ ಶ್ರೀ ಗುರುಭ್ಯೋ ನಮಃ . 

ಅಥ ಎತಾದೃಶೈಕಾದಶೀಮಹಿಮಾ - ಪಾದ್ಮೇ-

ಏಕಾದಶೀಸಮಮ್  ಕಿಂಚಿದ್ ವೃತಮ್ ನಾಸ್ತಿ ಶುಭ ಕ್ಷಣೇ ।
ಏಕಾದಶೀ ಪರಿತ್ಯಜ್ಯ ವ್ರುತಂ ಯೋsನ್ಯತ್ ಸಮಾಚರೇತ್ ।। 

ಸ್ವಕರಸ್ಥಂ ಮಹಾರಾಜ್ಯಂ ತ್ಯಕ್ತ್ವಾ ಭೈಕ್ಷ್ಯಂ ತು ಯಾಚಯೇತ್ ।
ಏಕಾದಶ್ಯಾಮ್ ತು ಪಾಪೀಯಾನ್ಸಮುಪೋಷ್ಯ ತು ಮಾನವಃ ।। 
ಸರ್ವಪಾಪವಿನಿರ್ಮುಕ್ತೋ ಯಾತಿ ವಿಷ್ಣೋ: ಪರಮ್ ಪದಮ್ ।। ಇತಿ ।। 

ಏಕಾದಶಿಯ ನಿರೂಪಣೆಯೂ ಪಾದ್ಮಪುರಾಣದಲ್ಲಿ ಹೀಗೆ ಹೇಳಿದೆ - ಎಲೈ ಮಂಗಳನೇತ್ರೆಯೇ ! ಏಕಾದಶಿಗೆ ಸಮಾನವಾದ ವ್ರುತವು ಮತ್ತವದೂ ಇಲ್ಲ . ಯಾವನು ಏಕಾದಶಿಯನ್ನು ಬಿಟ್ಟು ಬೇರೆ ವೃತವನ್ನು ಆಚರಿಸುತ್ತಾನೋ ಅವನು ತನ್ನ ಕೈಯಲ್ಲಿದ್ದ ಮಹಾರಜ್ಯವನ್ನು ಬಿಟ್ಟು ಭಿಕ್ಷೆ ಬೇಡುವನಂತೆ ಆಗುತ್ತಾನೆ. ಯಾವ ಮಹಾಪಾಪಿಯಾದ ಮಾನವನೇ ಆಗಲಿ ಏಕಾದಶಿ ದಿನ ಉಪವಾಸ ಮಾಡಿದರೆ ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದಿ ಶ್ರೇಷ್ಠವಾದ ವಿಷ್ಣುವಿನ ವೈಕುಂಠಸ್ಥಾನವನ್ನು ಪಡೆಯುತ್ತಾನೆ ಎಂದು. 




Thursday 12 June 2014

ಮಹಾಮೇಧಾವಿ, ಧ್ರುವಾಂಶ ಸಂಭೂತ,ಆಗಿನ ಕಾಲದ ವಿದ್ವತ್ತಿಮಿಂಗಲ , ಪಾಂಡಿತ್ಯಕ್ಕೆ ಪರ್ಯಾಯ ಹೆಸರಾಗಿದ್ದ ಶ್ರೀ ವಿಬುಧೇಂದ್ರ ತೀರ್ಥರ ಹತ್ತಿರ ಸಮಸ್ತ ದ್ವೈತ ವೇದಾಂತ ವ್ಯಾಸಾಂಗ ಮಾಡಿದ , ಶ್ರೀ ವ್ಯಾಸರಾಜ ಶ್ರೀಚರಣರಿಗೆ ಸಮಸ್ತ ದ್ವೈತವೇದಾಂತ ಅಧ್ಯಯನ ಮಾಡಿಸಿ ರಾಜಗುರುಗಳನ್ನಾಗಿ ಮಾಡಿ ಅನುಗ್ರಹಿಸಿದ, ದಿನವೂ ಶ್ರೀಹರಿಯ ಕರುನಾರಸದಲ್ಲಿ ಮಿಂದು ಪುನೀತರಾಗಿ ೬೦ ವಿಧ ಭಕ್ಷ್ಯಗಳನ್ನೂ ದೇವರಿಗೆ " ಸುಖಪ್ರಾರಬ್ಧ"ಬಲದಿಂದ ನಿವೆದಿಸುತ್ತಿದ್ದ , ೩೦ ಕ್ಕೂ ಅಧಿಕ ವ್ಯಾಖ್ಯಾನಗಳಿರುವ ಶ್ರೀಕರ ಗ್ರಂಥ ಶ್ರೀಮಜ್ಜಯತೀರ್ಥರ "ನ್ಯಾಯಸುಧೆಗೆ" ಮೊಟ್ಟ ಮೊದಲ ವ್ಯಾಖ್ಯಾನ ರಚಿಸಿದ ಕೀರ್ತಿಗೆ ಭಾಜನರಾದ, ಜಗದ್ಗುರು ಮಧ್ವಾಚಾರ್ಯರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಪರಂಪರೆಗೆ ಸೇರಿದವರಾದ , ಶ್ರೀ ಸ್ವರ್ಣವರ್ಣ ತೀರ್ಥ ಕರಕಮಲ ಸಂಜಾತರಾದ , ಶ್ರೀ ವಿಬುಧೇಂದ್ರ ತೀರ್ಥ ಕರುಣಾರಸ ಪೋಷಿತ ಶ್ರೀ ಶ್ರೀ ಶ್ರೀ  ಶ್ರೀಪಾದರಾಜರೆಂಬೋ ಅಭಿಧಾನದಿಂದ ನಮ್ಮೆಲ್ಲರನ್ನು ಸಲುಹಿ ಚಿರಪರಿಚಿತರಾಗಿರುವ , ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ಶ್ರೀ ಲಕ್ಷ್ಮಿನಾರಾಯಣ ತೀರ್ಥರ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಅವರನ್ನು ನೆನೆದು ಕೃತಾರ್ಥರಾಗೋಣ.

                       ಪದವಾಕ್ಯ ಪ್ರಮಾಣಾಬ್ದಿ ವಿಕ್ರೀಡನ ವಿಶಾರದಾನ್
                        ಲಕ್ಷ್ಮೀನಾರಾಯಣ ಮುನೀನ್ ವ೦ದೇ ಮಮ ವಿದ್ಯಾ ಗುರೂನ್ಸದಾ ||

                         ತಂ ವಂದೇ ನರಸಿಂಹ ತೀರ್ಥ ನಿಲಯಂ ಶ್ರೀ ವ್ಯಾಸರಾಜ ಪೂಜಿತಂ
                         ಧ್ಯಾಯಂಥಾಂ ಮನಸಾ ನೃಸಿಂಹ ಚರಣಂ ಶ್ರೀಪಾದರಾಜ ಗುರುಂ॥ .

Sunday 13 April 2014

ಶ್ರೀ ಮೂಲರಾಮೋ ವಿಜಯತೆ                                                                       ಶ್ರೀ ಗುರುರಾಜೋ ವಿಜಯತೆ
ಗುರುಗುಣಸ್ತವನಂ - ೩
Gurugunastavanam- 3
ಶ್ಲೋಕ-

ಶ್ರೀವಾದೀಂದ್ರ ತೀರ್ಥರ ,  ಮುಖ್ಯಪ್ರಾಣದೇವರ ಪ್ರಾರ್ಥನಾ ರೂಪದ ಮಂಗಳಾಚರಣೆ -


ಶ್ರೀಮದ್ರಾಮಾಭಿರಾಮಮಿತಮಹಿಮಪದ ಪ್ರೌಢಪಾಥೋರುಹಾಲಿ: 
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವೃಢಪಟಲೀಪಾಟನೈಕ ಪ್ರವೀಣಃ ।।
ವೇದವ್ಯಾಸೋಪದೇಶಾಧಿಕಸಮಧಿಗತಾನಂತ ವೇದಾಂತಭಾವೋ 
ಭೂಯಾತ್ಕೀಶಾವನೀಶ ವೃತಿತನುರನಿಲಃ ಶ್ರೇಯಸೇ ಭೂಯಸೇನಃ ।। 

ಅರ್ಥ-  "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.

ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. ಮಧ್ವ ವಿಜಯದ " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.  
ಗುರುರಾಯರ ಕರುಣೆಗೆ ಪಾತ್ರರಾಗಿ , ಅವರ ಪೂರ್ಣಾನುಗ್ರಹ ಪಡೆದಿದ್ದ ಶ್ರೀ ಅಪ್ಪಣ್ಣಾಚಾರ್ಯರು , ಸಾಕ್ಷಾತ್ ಶ್ರೀ ರಾಘವೇಂದ್ರ ವ್ರುತೀಂದ್ರರ ವಿದ್ಯಾಶಿಷ್ಯರು. ಅವರ ಹತ್ತಿರವೇ ಅಧ್ಯಯನ ಮಾಡಿದಂಥವರು. ಮಾಧ್ವರ  ಶ್ರೀ ರಾಘವೇಂದ್ರ ಸ್ತೋತ್ರದಂತಹ ವೇದತುಲ್ಯ ಸ್ತೋತ್ರವನ್ನು ಮಾಡಿದ ಕೀರ್ತಿ ಅಪ್ಪಣ್ಣಾಚಾರ್ಯರದ್ದು. ರಾಯರ ಅಗಮ್ಯ ಮಹಿಮೆಯನ್ನು ಸಾಕ್ಷಾತ್ ಕಂಡು , ವೇದಾಂತ ಸಾಮ್ರಾಜ್ಯದಲ್ಲಿ ಅವರು ವಿರಾಜಿಸಿದ ಪರಿ ನೋಡಿ , ವೈಭವವನ್ನು ದೃಷ್ಟಿಸಿ , ರಾಯರನ್ನು ತಮ್ಮ ವಿಶಿಷ್ಟ ಶೈಲಿಯಲ್ಲೇ ಸ್ತುತಿಸಿದವರು ಅಪ್ಪಣ್ಣಾಚಾರ್ಯರು. ಶ್ರೀಗುರುಸಾರ್ವಭೌಮರ ಅಂತರಂಗ ಭಕ್ತರು. ಶ್ರೀ ಅಪ್ಪಣ್ಣಾಚಾರ್ಯರ ಮತ್ತೊಂದು ರಾಯರ ಕುರಿತು ಇರುವ ಕೃತಿಯೇ ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ. ಅವರ ಪ್ರಮುಖ ಕೃತಿ ರಾಯರ ೧೦೮ ವಿಶೇಷಗಳಿಂದ ಸ್ತೋತ್ರಮಾಡುವ ಪುಣ್ಯಪ್ರದವಾದ ಕೃತಿ.

Thursday 20 March 2014


ಯಾಕೆ ಮೂಕನಾದ್ಯೋ ಗುರುವೇ ನೀ ??  ಸುದ್ದಿ ತಿಳಿದೊಡನೆಯೇ ದುಃಖದಲ್ಲಿ ಇದನ್ನು ಬರೆಯುತ್ತಿದ್ದೇನೆ. ಹೇಳಿಕೊಳ್ಳ ಬೇಕು ಎನಿಸಿದ್ದನ್ನ ಹೇಳಿಕೊಳ್ಳುತ್ತಿದ್ದೇನೆ.   ಶ್ರೀರಾಘವೇಂದ್ರ ತೀರ್ಥ ಕರುಣಾಪಾತ್ರರೆ ಶ್ರೀ ಧೀರೇಂದ್ರ ತೀರ್ಥ ಸಂಪ್ರದಾಯ ರಕ್ಷಕರೇ ಶ್ರೀ ಸುಶೀಲೆಂದ್ರ ತೀರ್ಥ ಕೃಪಾ ಪಾತ್ರರೆ.. ಶ್ರೀ ಸುಯಮೀಂದ್ರ ತೀರ್ಥ ಕೃಪಾಪೋಷಿತರೆ.. ಶ್ರೀ ಸುಶಮೀಂದ್ರ ತೀರ್ಥ ಕರಕಮಲ ಸಂಜಾತರೇ , ನವಮಂತ್ರಾಲಯದ ಶಿಲ್ಪಿಗಳೇ .. ಶ್ರೀ ಸುಬುಧೇಂದ್ರ ತೀರ್ಥ ಸ್ವರೂಪೋದ್ಧಾರಕರೇ .. ಸ್ವಾಮಿ ನಿಮ್ಮಲ್ಲಿ ಅದೆಷ್ಟು ಸದ್ಗುಣಗಳು ರಾರಾಜಿಸುವವು !! ಶ್ರೀ ಸುಶಮೀಂದ್ರ ತೀರ್ಥರಿಂದ ಆಶ್ರಮ ಪಡೆದು ಗುರುಗಳ ಸೇವೆಯನ್ನು ನಿರಂತರ ಮಾಡಿದಿರಿ .. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಚಾಚೂ ತಪ್ಪದೆ ನಡೆದಿರೀ. ಸುಶಮೀಂದ್ರ ಗುರುಗಳು ಕಾಲವಾದ ಕಠಿಣ ಪರಿಸ್ಥಿತಿಯಾ ಬೆನ್ನಲ್ಲೇ ಮಂತ್ರಾಲಯ ಪ್ರವಾಹಕ್ಕೆ ಸಿಲುಕಿಕೊಂಡಿತ್ತು.. ಆದರೆ ಪ್ರವಾಹ ನಿಂತ ಕ್ಷಣದಿಂದಲೇ ಮಂತ್ರಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ರಾಯರೆದುರು ಸಂಕಲ್ಪ ಮಾಡಿ ಧುಮುಕಿದಿರಿ.. ಯಾವುದೇ ಕ್ಷಣದಲ್ಲೂ ಎದೆ ಗುಂದಲೇ ಇಲ್ಲ . ನಿಮ್ಮ ಪೂರ್ವಾಶ್ರಮ ಪುತ್ರರಾದ ಶ್ರೀ ಸುಯಮೀಂದ್ರ ಆಚಾರ್ಯರಲ್ಲಿ ನಿಂತು ಎಲ್ಲ ಕಾರ್ಯವನ್ನು ಮಾಡಿಸಿದಿರಿ.. ಸಮಸ್ತ ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಕೊರೆದೊಯ್ದಿರಿ.. ಇಂದು ಅನೇಕ ಪೀಠಾಧಿಪತಿಗಳು , ಅನೇಕ ಸಜ್ಜನ ಭಕ್ತರು ರಾಯರ ಸನ್ನಿಧಿಯನ್ನು ಇಂದ್ರನ ಅಮರಾವತಿಗೆ ಹೊಲಿಸುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ತಾವಲ್ಲದೆ ಇನ್ನಾರು ಸ್ವಾಮಿ ? ಸುಶಮೀಂದ್ರ ತೀರ್ಥರ ಪ್ರಥಮ ಮಹಾಸಾಮಾರಧನೆ ಬರುವಷ್ಟರಲ್ಲೇ ಅನೇಕ ಯೋಜನೆಗಳು ಸಿದ್ಧಗೊಂದಿದ್ದವು. ಶ್ರೀಮಠವನ್ನ ನಂಬಲೂ ಅಸಾಧ್ಯ ಎಂಬ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಮೂಲರಾಮನ ಕೃಪೆ , ರಾಯರ ಕೃಪೆ ನಿಮ್ಮ ಮೇಲೆ ಎಷ್ಟಿತ್ತು ಅನ್ನೋದನ್ನ ತೋರಿಸುತ್ತದೆ.. ಸ್ವಾಮಿ ಈ ಸಾಧನೆ ಮಾಡಲು , ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಒಯ್ಯಲು ತಾವು ನೆಚ್ಚಿಕೊಂಡಿದ್ದ ತಪಸ್ಸು ಅಸಾಧಾರಣವೇ !! ದಿನಕ್ಕೆ ಹತ್ತಾರು ಘಂಟೆ ಕೇವಲ ಜಪ-ತಪದಲ್ಲೇ ಇದ್ದು ಯಾವಾಗಲೂ ರಾಯರನ್ನೇ ನೆನೆದ ನಿಮ್ಮ ಕರೆಗೆ ಓ ಕೊಟ್ಟೇ ರಾಯರು ಅಷ್ಟು ಭರದಲ್ಲಿ , ಸುಸಜ್ಜಿತವಾಗಿ ತಮ್ಮ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡಿಸಿಕೊಂಡಿದ್ದಾರೆ.
                         ಶ್ರೀ ಧೀರಸಿಂಹರ ಸನ್ನಿಧಿಯಲ್ಲಿ ದೇವೇಂದ್ರನನ್ನೇ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮೆರೆಸಿದಿರಿ. ನಿಮ್ಮ ಆ  ಸುಧಾಮಂಗಳವನ್ನು ಪೇಜಾವರ ಶ್ರೀಗಳು ಸಹ ಬಹಳವಾಗಿ ಮೆಚ್ಚಿಕೊಂಡಿದ್ದರು. ಅದಲ್ಲದೆ ತಾವು ಮಂತ್ರಾಲಯ ಕ್ಷೇತ್ರದಲ್ಲಿ ನಡೆಸಿದ ಮತ್ತೊಂದು ಸುಧಾಮಂಗಲವೂ ಅದ್ಭುತ ರೀತಿಯಲ್ಲಿ ನಡೆದದ್ದು ಇತಿಹಾಸ. ಶ್ರೀ ರಾಯರ ಸೇವೆ ಮಾಡ ರಾಯರ ಪೀಠ ಏರಿದ ನಿಮ್ಮ ಜೀವನ ಸಾರ್ಥಕ ಪ್ರಭು..
                         ಇನ್ನು ಸುಂಕಾಪುರದಲ್ಲಿ ಶ್ರೀಮಠದ ಅಂಗಸಂಸ್ಥೆಯಾದ ಪ್ರಹ್ಲಾದ ಯುವಕ ಮಂಡಳದ ನೇತೃತ್ವದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮ ಸಂದರ್ಭದಲ್ಲಿ ತೊಂದರೆ ತಂದೊಡ್ಡಲು ತಯಾರಾಗಿ ನಿಂತಿದ್ದ ಮಳೆರಾಯನನ್ನು ಕೇವಲ ತಮ್ಮ ಮಂತ್ರ ಬಲದಿಂದ ನಿಲ್ಲಿಸಿದ್ದು.. ಕೇವಲ ಸುಂಕಾಪುರ ಗ್ರಾಮ ಬಿಟ್ಟು ಉಳಿದ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಜೋರಾಗಿ ಮಳೆಯಾಗಿ ಅಲ್ಲಿ ಮಾತ್ರ ಆಗದೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದಿರಿ.. ಹೀಗೆ ಬೇಕೆಂದಾಗ ಮಳೆಯನ್ನೂ ಬರೆಸಿ , ಬೇಡವಾದಾಗ ಮಳೆಯನ್ನು ನಿಲ್ಲಿಸಿ  ಪವಾಡಗಳನ್ನೂ ತೋರಿಸಿದಿರಿ..
                           ಬಳ್ಳಾರಿಯ  ದಿಗ್ವಿಜಯ ಸಂದರ್ಭದಲ್ಲಿ ಅಲ್ಲಿನ ಭಕ್ತರು ಬರಗಾಲದ ಬಗ್ಗೆ ನಿವೆದಿಸಿದಾಗ ನೀವು  ಶ್ರೀ ರಾಯರಲ್ಲಿ ನಿವೆದಿಸುತ್ತೇವೆ ಎಂದಾಗ ಯಾರಿಗೂ ಏನೂ ತಿಳಿಯದಾಯಿತು. ಆಮೇಲೆ ನೀವು ರಾಯರನ್ನು  ಸಂಪರ್ಕಿಸಿ " ರಾಯರು ಅಭಯ ನೀಡಿದ್ದಾರೆ " ಎಂದು ಘಂಟಾಘೋಷವಾಗಿ ಹೇಳಿ , ಅದರಂತೆ ಆಗಿ ಎಲ್ಲರನ್ನು ಸಂತೋಷ ಗೊಳಿಸಿ.. ನಿಮ್ಮ ವಿನಂತಿಯ ಪ್ರಕಾರ ರಾಯರು ತೋರಿದ ಅದ್ಭುತ ಪವಾಡ.
                        ನೀವು ಪೀಠಾಧಿಪತ್ಯ ವಹಿಸಿಕೊಂಡ ನಂತರದಲ್ಲೇ ನಡೆದ ಜ್ಞಾನಕಾರ್ಯ ನಿಮ್ಮ ಗುರುಗಳನ್ನು ನೆನೆಸುತ್ತವೆ. ವರ್ಷಕ್ಕೆ ಎರೆಡು  ಬಾರೆ ಸಮೀರ ಸಮಯ ಸಂವರ್ಧಿನಿ ಸಭೆಯನ್ನು ತಪ್ಪದೆ ನಡೆಸಿದಿರಿ.. ವಿದ್ವಜ್ಜನರ ಪೋಷಣೆಯಲ್ಲಿ ಸದಾ ರಾಯರ ಮಠ ಸನ್ನದ್ಧ ಎಂದು ತೋರಿಸಿದಿರಿ. ಶ್ರೀರಂಗಂ , ಉಡುಪಿ ಹೀಗೆ ಅನೇಕ ಕಡೆ ನಡೆಸಿದಿರಿ. ಶ್ರೀ ರಾಯರ ಮಠಕ್ಕೆ ಇದ್ದ ವಿದ್ಯಾ ಮಠ ಎಂಬ ಬಿರುದನ್ನು ಸಾರ್ಥಕ ಗೊಳಿಸಿದಿರಿ.. 
                        ಇನ್ನು ನಿಮ್ಮ ಕಾಲದಲ್ಲೇ ಆದ ಸೋದೆ ಮಠದ ಶ್ರೀಗಳಾದ ಪರಮಪುಜ್ಯ ಶ್ರೀ ವಿಶ್ವವಲ್ಲಭ ತೀರ್ಥರ ಸಹಯೋಗದೊಂದಿಗೆ ತಾವೇ ಆಚಾರ್ಯ ಮಧ್ವರ ಕಾರ್ಯಕ್ಷೇತ್ರ ಉಡುಪಿಯಲ್ಲಿ ಏರ್ಪಡಿಸಿದ ಸಮೀರ ಸಮಯ ಸಂವರ್ಧಿನಿ ಸಭೆಯಂತೂ ಎಲ್ಲರ ಮನೆಮಾತಾಗಿದೆ. ನೀವು ನಡೆಸಿದ ಈ ಸಭೆ ಪದ್ಮನಾಭ ತೀರ್ಥರು ಹಾಗು ವಿಷ್ಣು ತೀರ್ಥರ ಕಾಲದಿಂದಲೂ ಇದ್ದ ಉಭಯ ಮಠಗಳ ಸ್ನೇಹಯಾತ್ರೆಯನ್ನು ಮುಂದುವರೆಸಿ ಇನ್ನು ಹೆಚ್ಚಾಗುವಂತೆ ಮಾಡಿ ಶ್ರೀ ವಾದಿರಾಜ-ವಿಜಯೀಂದ್ರ-ರಾಘವೇಂದ್ರ ರಾಯರ ಸೇವೆಯನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ.
                        ಇದರ ಜೊತೆ ಜೊತೆಗೇನೆ ಅನಾರೋಗ್ಯ ವಿದ್ದರೂ ಅನೇಕ ಕಡೆ ಸಂಚರಿಸಿ , ಸಂಪರ್ಕಿಸಲು ಆಗದೇ ಇದ್ದ ಕ್ಷೇತ್ರಗಳ ಶಿಷ್ಯರು ಶ್ರೀಮಠಕ್ಕೆ ಬಂದಾಗ ಅತೀ ಪ್ರೀತಿ ಇಂದ ಅನುಗ್ರಹಿಸಿ ಸನ್ಮಾರ್ಗ ಪ್ರೇರಕರಾಗಿದ್ದಿರಿ..

ಯಾಕೋ ಮೂಕನಾದ್ಯೋ ಗುರುವೇ ನೀ ?? ಸುಯತೀಂದ್ರ ತೀರ್ಥ ಎಂಬ ಯತಿಗಳಲ್ಲಿ ಒಳ್ಳೆಯವರಾದ " ಸುಯತಿ" ಎಂಬ "ಅನರ್ಘ್ಯ ರತ್ನ " ಒಂದು ನಮ್ಮನ್ನಗಿದೆ.. ಶ್ರೀ ಸುಶಮೀಂದ್ರರು ದಯಪಾಲಿಸಿದ ಕಣ್ಣು ನಮಗೆ ಕಾಣದಾಗಿದೆ. ಶ್ರೀ ಸುಭುಧೇಂದ್ರ ತೀರ್ಥರಲ್ಲಿ ಸದಾ ಇದ್ದು ಅವರಿಗ್ಗೋ ಪ್ರೆರಕರಾಗಿ ಶ್ರೀ ಮಠದ ಭವ್ಯ ಪರಂಪರೆಯನ್ನು ಮುಂದೇ " ಪೀಠಾಧಿಪತಿಗಳಾಗಿ" ಬೆಳಗುವಂತೆ ಆಶೀರ್ವದಿಸಿ , ನಮ್ಮನ್ನು ಉದ್ಧರಿಸಬೇಕು ಪ್ರಭು ಅಂತ ಪ್ರಾರ್ಥಿಸುವೆ..                       


Thursday 13 March 2014

ಶ್ರೀ ಧೀರೇಂದ್ರ ತೀರ್ಥರ ಸಂಕ್ಷಿಪ್ತ ಚರಿತ್ರೆ - ಸಂಗ್ರಹ- ಶ್ರೀಪಾದಸೇವಕ ಸಮೀರ ಜೋಷಿ



ಶ್ರೀಮನ್ಮೂಲರಾಮೋ ವಿಜಯತೆ                                                                  ಶ್ರೀಗುರುರಾಜೋ ವಿಜಯತೆ


ಪೂರ್ವಾಶ್ರಮ-
                 ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್ ಶ್ರೀಮದಾಚಾರ್ಯರ  ಪೀಠವನ್ನು  ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ  ವಿದ್ಯಾಭ್ಯಾಸ ಮಾಡುವ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ " 'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' , ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ    ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ  ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀ ರಾಯರ ಮೂಲಬೃಂದಾವನವು ರಾಯರ ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಈ ಘಟನೆ ತಿಳಿದು ಶ್ರೀ ಜಯರಾಮಚಾರ್ಯರು ಉತ್ಸುಕರಾಗಿ ಅದನ್ನು ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) .  ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅಂತ ಅಂದುಕೊಂಡು ಆಚರ್ಯರಿಗೆ ಸೂಕ್ಷ್ಮವಾಗಿ "  ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.



              ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ ಮತ್ತೆ ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಈ ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯ ವೃದ್ದಿಗೆ ಇದು ಕಾರಣವಾಯಿತು .
              ಶ್ರೀ ವಾದೀಂದ್ರ ತೀರ್ಥರ ಹೃದ್ಗತ ವಿಷಯವನ್ನು ಅರಿತಿದ್ದ ಶ್ರೀ ವಸುಧೇಂದ್ರ ತೀರ್ಥರು , ಶ್ರೀ ಜಯರಾಮಚಾರ್ಯರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದರು . ಶ್ರೀಹರಿಯ ಸಂಕಲ್ಪ ಬೇರೆಯೇ ಇತ್ತು . ಶ್ರೀ ವಸುಧೇಂದ್ರ ತೀರ್ಥರು ಕೆಂಚನಗುಡ್ಡ ದ ಪ್ರದೇಶದಲ್ಲಿ ಸಂಚಾರದಲ್ಲಿ ಇದ್ದಾಗ ದೇಹಾಲಸ್ಯವಾಗಿ ಶ್ರೀ ವರದೇಂದ್ರ ತೀರ್ಥರಿಗೆ ತುರ್ತಾಗಿ ಆಶ್ರಮ ಪ್ರದಾನ ಮಾಡಿಸಿ ಅಲ್ಲಿಯೇ ವೃಂದಾವನಸ್ಥರಾದರು. ಮಹಾ ತಪಸ್ವಿಗಳಾಗಿದ್ದ ಶ್ರೀಗಳು ಇಂದಿಗೂ ಅಲ್ಲಿಯೇ ಸನ್ನಿಹಿತರಾಗಿ ಭಕ್ತರ ಅಭೀಷ್ಟ ಪೂರೈಸುತ್ತಿದ್ದಾರೆ. ಅಲ್ಲಿ ಯಾರಾದರೋ ದೇಹ ಶುದ್ಧಿ ಇಲ್ಲದೆ ಹೋದಲ್ಲಿ ಶಿಕ್ಷೆ ಮಾತ್ರ ಖಂಡಿತ . ಅಷ್ಟು ಜಾಗ್ರತ ಶ್ರೀ ವಸುಧೇಂದ್ರರ ಪುಣ್ಯ ಕ್ಷೇತ್ರ.
              ಇತ್ತ ಶ್ರೀ ವಸುಧೇಂದ್ರ ತೀರ್ಥರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಶ್ರೀ ವರದೇಂದ್ರ ತೀರ್ಥರು ಮಹಾ ತಪಸ್ವಿಗಳು , ದಾಸಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರಿಗೆ ವಿದ್ಯೆ ಕೊಟ್ಟು ಸಲುಹಿದ ಮಹಾ ಗುರುಗಳು. ಶ್ರೀ ಜಯರಾಮಾಚಾರ್ಯರು ನೂತನ ಯತಿಗಳನ್ನು ಸಂಧಿಸಲು ಆಗಮಿಸಿದರು . ಒಮ್ಮೆ ಪುಣ್ಯನಗರಿ ( ಈಗಿನ ಪುಣೆಯಲ್ಲಿ) ಯಲ್ಲಿ ಪೇಶ್ವೆಗಳ ಪ್ರಧಾನ ನ್ಯಾಯಾಧೀಶನಾಗಿದ್ದ ಅದ್ವೈತಿ ಪಂಡಿತನೊಬ್ಬ ಶ್ರೀ ವರದೇಂದ್ರ ತೀರ್ಥರಿಗೆ ಬಹಿರಂಗವಾಗಿ ವಾದಿ ದಿಗ್ವಿಜಯಕ್ಕೆ ಆಹ್ವಾನ ನೀಡಿದ . ವಾದಕ್ಕೆ ವೇದಿಕೆ ಸಜ್ಜಾಯಿತು. ಶ್ರೀಯವರು ಗಾಂಭೀರ್ಯದಿಂದ ವಿರಾಜಮಾನರಾಗಿ ಪೇಶ್ವೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಿದ್ದ ಮರ್ಯಾದೆಗಳನ್ನೆಲ್ಲ ಸ್ವೀಕರಿಸಿದರು. ಆಮೇಲೆ ಪಣ ನಿರ್ಧಾರದ ಸಮಯ. ಆಗ ಪೆಶ್ವೆಯಾ ನ್ಯಾಯಾಧೀಶ ಗೆದ್ದೇ ಗೆಲ್ಲುವೆ ಎಂಬ ಅಹಂಕಾರದಿಂದ " ಶ್ರೀಗಳವರ ಬಣ ವಾದದಲ್ಲಿ ಸೋತರೆ ಸಂಸ್ಥಾನವನ್ನು ಬಿಟ್ಟು ಬಿಡಿ ಸನ್ಯಾಸಿಗಳಂತೆ ಅಡ್ದಾಡಬೇಕು" ಎಂದು ಹೇಳಿದ. ಅದಕ್ಕೆ ಶ್ರೀಯವರು ಮಂದಹಾಸ ಬೀರಿ " ಆಗಲಿ , ನೀವೇನಾದರೂ ಸೋತರೆ ಈ ಭವ್ಯವಾದ ಮನೆಯನ್ನು ನಮಗೆ ಬಿಟ್ಟುಕೊಟ್ಟು, ಗಡಿಪಾರು ಹೊಂದಬೇಕು " ಎಂದು ಹೇಳಿದರು . ಆಗ ಇಬ್ಬರ ಬಣಗಳೂ ಇದನ್ನೋಪ್ಪಿ ವಾದ ಪ್ರಾರಂಭಕ್ಕೆ ಚಾಲನೆ ದೊರಕಿತು. ಬಹು ಕ್ಲಿಷ್ಟಕರ ವಾದ ವಿಷಯ ಎತ್ತಿಕೊಂಡು ಮಹಾ ಮೇಧಾವಿಯಾದ ಪಂಡಿತನು ತನ್ನ ವಾದ ಹೂಡಿದನು. ಆಗ ಅದಕ್ಕೆ ಶ್ರೀಯವರ ಬಣದಿಂದ ಶ್ರೀ ಜಯರಾಮಾಚಾರ್ಯರು ಎದ್ದು ನಿಂತು " ಇದಕ್ಕೆ ಶ್ರೀಗಳವರ  ಅವಶ್ಯಕತೆ ಇಲ್ಲವೇ ಇಲ್ಲ " ಎಂದು ಹೇಳಿ ತಾವೇ ಎಲ್ಲ ಪೂರ್ವಪಕ್ಷಗಳನ್ನು ಧ್ವಂಸ ಮಾಡಿ ಪರವಾದಿಗಳಿಗೆ ಸಿಂಹಸ್ವಪ್ನರಾದರು. ಆಗ ಶಾಸ್ತ್ರಿಗೆ ತನ್ನ ಸೋಲು ಸನಿಹ ಬರುತ್ತಿದೆ ಎಂದು ತಿಳಿದು , ಶ್ರೀ ಜಯರಮಾಚಾರ್ಯರ ಮಾತನ್ನು ಎದುರಿಸಲಾಗದೆ " ಶ್ರೀಗಳವರೊಂದಿಗೆ ಮಾತ್ರ ನಾನು ವಾದ ಮಾಡುವೆ ಇತರರೊಡನೆ ಮಾಡುವದಿಲ್ಲ" ಎಂದು ನುಡಿದ. ಆಗ ಶ್ರೀಗಳವರು ನುಸು ನಕ್ಕು ತಮ್ಮದೇ ಶೈಲಿಯಲ್ಲಿ ವಾದಿಯನ್ನು ಮಣಿಸಿದರು. ಇದು ಐತಿಹ್ಯ. ಈ ಘಟನೆಯನ್ನು ಶ್ರೀ ವರದೇಶ ವಿಠಲದಾಸರು ಬಹು ಸುಂದರವಾಗಿ ವರ್ಣಿಸಿದ್ದಾರೆ. ಇಲ್ಲಿ ಆಚಾರ್ಯರ ಪಾತ್ರ ಬಹು ಮುಖ್ಯವಾಗಿತ್ತು. ಆಗ ಶ್ರೀಗಳವರು ಜಯರಾಮಚಾರ್ಯರನ್ನು ಬಹುವಾಗಿ ಪ್ರಶಂಸಿಸಿ , ಸನ್ಮಾನಾದರಾದಿಗಳನ್ನೂ ಮಾಡಿಸಿ ಆಶೀರ್ವದಿಸಿ ಕಳುಹಿಸಿದರು.


ಸನ್ಯಾಸ-
       
ಒಮ್ಮೆ ಶ್ರೀ ಜಯರಾಮಚಾರ್ಯರು ಶ್ರೀ ವಿಜಯೀಂದ್ರ ತೀರ್ಥ ಗುರುಸಾರ್ವಭೌಮರ ಸನ್ನಿಧಾನವಾದ ಕುಂಭಕೋಣ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಆಗ ವೃಂದಾವನದ ಎದುರಿಗೆ ಸಂಜೆ ಕುಳಿತಿದ್ದರು. ಆಗ ಶ್ರೀ ವಿಜಯೀಂದ್ರ ತೀರ್ಥರ ವೃಂದಾವನವನ್ನು ಅನುಸಂಧಾನ ಪೂರ್ವಕವಾಗಿ ನಮಸ್ಕರಿಸಿ ಅಲ್ಲಿಯೇ ಕುಳಿತಾಗ ಶ್ರೀ ಮಠದ ಗುರು ಪರಂಪರೆಯನ್ನು ಸ್ಮರಿಸುವಾಗ ತಮ್ಮ ಪೂರ್ವಾಶ್ರಮದ ಜನ್ಮದಾತರು ,  ವಿದ್ಯಾಗುರುಗಳೂ ಆದ ಶ್ರೀ ವಾದೀಂದ್ರ ಗುರುಗಳ ಸ್ಮರಣೆ ಬಂದಾಗ ಆಚರ್ಯರಿಗೆ ಮತ್ತೆ ಏನೋ ಭಾಸವಗುತ್ತಲಿತ್ತು. ಅವರು ಹೇಳಿದ ' ಇಷ್ಟಾದರೆ ಸಾಲದು ಜಯರಾಮ ! ನಿಜವಾದ ವೈರಾಗ್ಯ ಬೇಕು " ಅನ್ನೋ ಮಾತು ನಿರಂತರ ಕಿವಿಯಲ್ಲಿ ಹರಿದಾಡುತ್ತಿತ್ತು. ಸಂಜೆ ಕಳೆದು ರಾತ್ರಿಯಾಯಿತು ಆಚಾರ್ಯರು ಮಾತ್ರ ಅಲ್ಲೇ ಕುಳಿತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದರು , ಬೆಳಗಿನ ಜಾವ ಸ್ವಲ್ಪ ಜ್ಹೊಂಪು ಹತ್ತಿದಾಗ ಆಚರ್ಯರಿಗೆ ಸಾಕ್ಷಾತ್ ಶ್ರೀ ವಿಜಯೀಂದ್ರ  ತೀರ್ಥ ಗುರುಸರ್ವಭೌಮರೆ ಬಂದು ನಿಂತು ಸನ್ಯಾಸ ದೀಕ್ಷೆಗೆ ಆದೇಶ ಮಾಡಿ , ದೀಕ್ಷೆ ನೀಡಿದರು . ಮರುದಿನವೇ ಶ್ರೀ ಆಚಾರ್ಯರು ವೃಂದಾವನದ ಸಾಕ್ಷಿಯಾಗಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವರದೇಂದ್ರ ತೀರ್ಥರ ಸನ್ನಿಧಾನಕ್ಕೆ ಹೊರಟರು. ಆಗ ಅಲ್ಲಿ ಶ್ರೀ ವರದೇಂದ್ರ ತೀರ್ಥರು ದೇಹಾಲಸ್ಯವಾಗಿದ್ದರಿಂದ ಜಯರಾಮಚಾರ್ಯರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಆಚಾರ್ಯರು ಅಲ್ಲಿ ಇರದ ಕಾರಣ , ಯಾವುದೇ ಕಾರಣಕ್ಕೂ ಸಂಸ್ಥಾನದ ಉಪಾಸ್ಯಮೂರ್ತಿ ಬ್ರಹ್ಮಕರಾರ್ಚಿತ ಮೂಲರಾಮದೇವರ ಪೂಜೆಗೆ ವ್ಯತ್ಯಯ  ಬರಬಾರದೆಂದು ನಿರ್ಧರಿಸಿ ಶ್ರೀ ಜಯರಾಮಚಾರ್ಯರ ಶಿಷ್ಯರೇ ಆದ  ಶ್ರೀ ಭುವನೇಂದ್ರ ತೀರ್ಥರಿಗೆ ಸನ್ಯಾಸ ದೀಕ್ಷೆನೀಡಿ ಮೂಲರಾಮ ಪೂಜಾ ಕೈಂಕರ್ಯ ನೆರವೇರಿಸಲು ಆದೇಶಿಸಿದರು. ಶ್ರೀ ವರದೇಂದ್ರ ತೀರ್ಥರು "ಜಯರಾಮಚರ್ಯರಿಗೆ ಸಂಸ್ಥಾನ ಒಪ್ಪಿಸತಕ್ಕದ್ದು" ಎಂದು ಹೇಳಿ  ಕಾಲವಾದ ಮೇಲೆ ಶ್ರೀ ಭುವನೆಂದ್ರ ತೀರ್ಥರು ಶ್ರೀ ಧೀರೇಂದ್ರ ತೀರ್ಥರಿಗೆ ಮಹಾ ಸಂಸ್ಥಾನವನ್ನು ಒಪ್ಪಿಸಿ , ಶ್ರೀ ಮೂಲರಾಮದೇವರ ಪೆಟ್ಟಿಗೆಯನ್ನು ಒಪ್ಪಿಸಿ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಶ್ರೀ ಧೀರೇಂದ್ರ ತೀರ್ಥರು ಅನೇಕ ವರ್ಷಗಳ ಶ್ರೀ ಮೂಲರಾಮಚಂದ್ರದೇವರ ಪೂಜೆಯನ್ನು ಮಾಡಿ ಸಂಸ್ಥಾನದ ಸಕಲ ರೀತಿಯ ಜವಾಬ್ದಾರಿಯನ್ನು ಶ್ರೀ ಭುವನೇಂದ್ರ ತೀರ್ಥ ಶ್ರೀಪಾದರಿಗೆ ವಹಿಸಿಕೊಟ್ಟು , ತಾವು ಜಪ-ತಪಗಳನ್ನಾಚರಿಸಲು ಹೊಸರಿತ್ತಿ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಶ್ರೀ  ವರದೇಂದ್ರ
ತೀರ್ಥರ ಶಿಷ್ಯರಾದ ಜಗನ್ನಾಥದಾಸರು ಬಂದು "ಶ್ರೀ ಹರಿಕಥಾಮೃತ ಸರಾವನ್ನು" ಶ್ರೀ ಧೀರೇಂದ್ರ ತೀರ್ಥರ ಸನ್ನಿಧಾನದಲ್ಲೇ ಬರೆದು ಅವರಿಗೆ ಸಮರ್ಪಿಸಿದರು.

Friday 7 March 2014

"ವರ್ಧಂತಿ ಉತ್ಸವ"

                           ದುರ್ವಾದಿಧ್ವಾಂತರವಯೇ ವೈಷ್ಣವೇಂದೀ ವರೇಂದವೇ ।
                           ಶ್ರೀ ರಾಘವೇಂದ್ರ ಗುರವೇ ನಮೋsಅತ್ಯಂತ ದಯಾಲವೇ ।। 

                            ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ।
                             ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।

                            ಮೂಕೋsಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ 
                             ರಾಜ ರಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ।। 

                             ಶ್ರೀ ಸುಧೀಂದ್ರಾಬ್ಧಿ ಸಂಭೂತಾನ್ ರಾಘವೇಂದ್ರ ಕಲಾನಿಧೀನ್ ।
                             ಸೇವೇ ಸುಜ್ಞಾನ ಸೌಖ್ಯಾರ್ಥಂ ಸಂತಾಪತ್ರಯ ಶಾಂತಯೇ ।। 



            ಕಲಿಯುಗ ಕಲ್ಪವೃಕ್ಷ , ಕಾಮಧೇನು ಎಂದೇ ಜಗದ್ವಿಖ್ಯಾತರಾದವರು ಶ್ರೀ ರಾಘವೇಂದ್ರ ತೀರ್ಥರು. ಇಂತಹ ರಾಘವೇಂದ್ರ ತೀರ್ಥರ ಅಗಮ್ಯ ಮಹಿಮೆಯನ್ನು ಅನೇಕ ಮಹಾನುಭವರು , ಜ್ಞಾನಿ ವರೇಣ್ಯರು ನಿರಂತರ ತಿಳಿಸುತ್ತಾ ಬಂದಿದ್ದಾರೆ. ಶ್ರೀ ರಾಯರ ಬಗ್ಗೆ ಮಾತನಾಡಲು ನನಗಾವ ಯೋಗ್ಯತೆಯೂ ಇಲ್ಲ.. ಆದರೂ ರಾಯರಂತಹ 'ದಯಾಳು"ಗಳು ನನ್ನಂತಹವನಿಂದಲೂ ಮಾಡಲ್ಪಟ್ಟ ಅಲ್ಪ ಸೇವೆಯನ್ನು ಸ್ವೀಕಾರ ಮಾಡುತ್ತಾರೆ. ನನಗೂ ಸಜ್ಞಾನಾದಿ ಸಂಪತ್ತು ಕೊಟ್ಟು , ಮಧ್ವರಾಯರ ಕೃಪೆಗೆ ಪಾತ್ರನನ್ನಾಗಿ ಮಾಡಿಸಲಿ ಎಂದು ಪ್ರರ್ಥಿಸುತ್ತೇನೆ. 

           ಇಂದಿನ ದಿನ ಸುದಿನ, ಇಂದು ಪರಮ ಮಂಗಳಕರ ದಿನ , ಶ್ರೀ ರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ . ರಾಘವೇಂದ್ರ ಗುರುಗಳ ಪೂರ್ವಾಶ್ರಮ ಹಾಗು ಯತ್ಯಶ್ರಮ ಹಾಗು ಅವರ ವತಾರಗಳ ಬಗ್ಗೆ ಸಕ್ಷಿಪ್ತವಾಗಿ ನನ್ನ ಯೋಗ್ಯತೆಗೆ ಅನುಗುಣವಾಗಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ನನ್ನ ತಪ್ಪನ್ನು ಹಿರಿಯರಾದವರು ಮನ್ನಿಸಿ ಅದು ನನ್ನದೇ ಅದ್ದರಿಂದ ಸಂಕಷ್ಟ ದಿಂದ ಪಾರು ಮಾಡಬೇಕು ಅಂತ ಪ್ರಾರ್ಥಿಸುವೆ , ಸರಿ ಇದ್ದದ್ದು ಏನಾದರೂ ಬರೆದಿದ್ದರೆ ಅದಕ್ಕೆ ನನ್ನಲ್ಲಿ ನಿಂತು ಪ್ರೇರಣೆ ನೀಡಿ ನಿರಂತರ ಅನುಗ್ರಹಿಸಿ ಕರುಣೆ ತೋರಿಸಿದ ರಾಯಾರೇ ಕಾರಣ ಎಂದು ಹೇಳುತ್ತಾ ನನ್ನ ಅಂತರಂಗ ಶುದ್ಧಿಗೋಸ್ಕರ ಹಂಚಿಕೊಳ್ಳುತ್ತೇನೆ .

 "ಗೌತಮ ಗೋತ್ರದ" , "ಅರವತ್ತೊಕ್ಕಲಿನ"  " ಷಾಷ್ಟೀಕ ವಂಶದ" , "ಬೀಗ ಮುದ್ರೆ" ಎಂಬ ಜ್ಯೇಷ್ಥ ಮನೆತನದವರು ಮೂಲತಃ ಕನ್ನಡಿಗರು.  ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ , ಪಾಂಡಿತ್ಯಾದಿ ಗುಣಗಳಿಂದ ಜಗದ್ವಿಖ್ಯಾತವಾದ ಮನೆತನ. ಈ ಮಹಾ ವಂಶದಲ್ಲಿ ಅನೇಕ ಬಹುಮುಖ ಪ್ರತಿಭೆಗಳನ್ನೂ ಕಾಣಬಹುದು. ಎಲ್ಲರೂ ಅನೇಕ ಶಾಸ್ತ್ರಗಳಲ್ಲಿ ವಿಧ್ವಾಂಸರು.  "ಗೌತಮ ಗೋತ್ರ" ಅರ್ಥಾತ್ ಗೌತಮ ಮಹರ್ಷಿಗಳೇ  ಪ್ರವರ್ತಕರಾಗಿದ್ದ ವಂಶ ಗೌತಮ ಗೊತ್ರೋದ್ಭವರದ್ದು. ಈ ವಂಶದಲ್ಲಿ ಅನೇಕರು ಮುಕ್ತಿ ಎಂಬ ಅತ್ಯುತ್ತಮ ಫಲ ಹೊಂದಿದವರು ಇದ್ದಾರೆ , ಇನ್ನು ಕೆಲವರು ಮುಕ್ತಿಗೆ ಯೋಗ್ಯರಾದವರಿದ್ದರೆ , ಇನ್ನು ಹಲವರು ಮುಕ್ತಿಗೆ ಯೋಗ್ಯರಾದರು ಅಲ್ಲಿ ಹೋಗದೆ ನಮ್ಮನ್ನುದ್ಧರಿಸಲು ಬಂದವರಿದ್ದಾರೆ. ಮುನಿ ಗೌತಮರು ಹೇಗೆ ಶ್ರೀ ವೇದವ್ಯಾಸರ ಶಾಸ್ತ್ರ ರಚನೆಗೆ ಕಾರಣರಾದರು , ಶ್ರೀಹರಿಯ ಸಂಕಲ್ಪ ಏನಿತ್ತು ? ಎಲ್ಲರಿಗೂ ತಿಳಿದ ವಿಷಯ. ಅಂತಹ ಗೌತಮ ಗೋತ್ರದಲ್ಲಿ ಜನಿಸಿದವರೇ ಶ್ರೀ ಕೃಷ್ಣಾಚಾರ್ಯರು. 
ಉದ್ಧಾಮ ಪಂಡಿತರು , ವೀಣೆಯಲ್ಲಿ ನುರಿತವರಾದ ಕಾರಣ ವೀಣಾಕೃಷ್ಣಾಚಾರ್ಯರೆಂದೇ ಖ್ಯಾತಿಯನ್ನು ಪಡೆದವರು. ಶ್ರೀಮದಾಚಾರ್ಯರ ಶಾಸ್ತ್ರದಲ್ಲಿ ಪ್ರಾವೀಣ್ಯ ಹೊಂದಿದವರು , ಶ್ರೀನ್ಯಾಯಸುಧಾದಿ ಗ್ರಂಥಗಳಲ್ಲಿ ಜೀವ ಇಟ್ಟವರು .  ಕನ್ನಡ ರಾಜ್ಯ ರಾಮಾ ರಮಣ ಶ್ರೀ ಕೃಷ್ಣದೇವರಾಯನಿಗೆ ವೀಣಾ ಪಾಠ ಹೇಳಿ ಕೊಟ್ಟವರು. ಆಸ್ಥಾನ ವಿದ್ವಾಂಸರು. ಅಂತಹ ಮಹಾ ಪಂಡಿತಶೋರೋಮಣಿಯಾ ಪುತ್ರ ರತ್ನರೇ "ಕನಕಾಚಲಭಟ್ಟರು" . ಹೆಸರಿಗೆ ತಕ್ಕಂತೆ ಅವರದೂ ಬಂಗಾರದ ಬೆಟ್ಟದಂತಹ ವ್ಯಕ್ತಿತ್ವ. ತಂದೆಯಂತೆಯೇ ವಂಶ ಗೌರವ ಉಳಿಸಿಕೊಂಡು ಬೆಳೆಸಿಕೊಂಡು ಹೋದವರು. ವಂಶ ವಿದ್ಯೆಯಾದ ವೀಣೆ ಕಲಿತು ವೀಣಾಕನಕಾಚಲ ಭಟ್ಟರು ಎಂದೇ ಖ್ಯಾತರಾದರು. ಇವರ ಪುತ್ರರೆ  ತಿಮ್ಮಣ್ಣಾಚಾರ್ಯರು . ಇವರೂ ಪೂರ್ವಿಕರಂತೆ ಆಚಾರ್ಯರ ಶಾಸ್ತ್ರದಲ್ಲಿ ಹಾಗು ಕುಲವಿದ್ಯೇ ಯಾದ ವೀಣೆಯಲ್ಲಿ ಪ್ರಾವೀಣ್ಯ ಗಳಿಸಿದರು . ಇವರ ಪುತ್ರರೇ "ಶ್ರೀ ವೆಂಕಟನಥಾಚಾರ್ಯರು" . ಇನ್ನು ಮುಂದಿನದನ್ನು ವಿಶೇಷವಾಗಿ ಏನೂ ಹೇಳಬೇಕಿಲ್ಲ ಕಾರಣ ಇವರೇ ನಮ್ಮ ಶ್ರೀ ಗುರುರಾಯರಾದವರು. ಗುರುಗಳೆಂದರೆ ಮಂಚಾಲೆ ರಾಘಪ್ಪ ಅಂತಲೇ ಖ್ಯಾತಿ ಗಳಿಸಿದ ಕೀರ್ತಿಶಾಲಿಗಳು , ಪ್ರಹ್ಲಾದರಜರು.. ಇವರ ಬಗ್ಗೆಕೆಲ್ದ ಮಾಧ್ವನೇ ಇಲ್ಲ.. ಇವರ ಋಣದಲ್ಲೇ ನಾವೆಲ್ಲ ಬದುಕುತ್ತಿದ್ದೇವೆ.  
            ರಾಯರ ಮೂಲ ರೂಪ ಶಂಕುಕರ್ಣ ಎಂಬ ಕರ್ಮಜ ದೇವತೆ. ಈತನೇ ಪ್ರಹ್ಲಾದರಾಜರಾಗಿ ದೈತ್ಯ ಕುಲದಲ್ಲಿ ಅವತರಿಸಿ ದೈತ್ಯರ ತೀರ್ಥಿಕರಣಕಾಗಿಯೇ ಅವತರಿಸಿದ ಧೀರರು ಅಂತ ನಾವೆಲ್ಲತಿಳಿದಿದ್ದೇವೆ .. ಭಾಗವತ ಮಹಾ ಪುರಾಣ ರಾಯರ ಬಗ್ಗೆ ತಿಲಿಸಲಿಕ್ಕೊಸ್ಕರವೇ ಒಂದು ಸ್ಕಂದ ಮೀಸಲಿಟ್ಟಿದೆ ಅಂದರೆ ರಾಯರು ಎಂತಹ ಅಗಮ್ಯ ಮಹಿಮಾನ್ವಿತರು ?? ನಿತ್ಯ ವಾಯ್ವಾವೇಶ ಯುಕ್ತರು .. ಇವರ ಮೇಲೆ ಶ್ರೀಮದಾಚಾರ್ಯರ , ಟೀಕಾರಾಯರ ಅನುಗ್ರಹಕ್ಕೆ ಮಿತಿ ಉಂಟೇನು  ? 

 ಅಂತಹ ರಾಘವೇಂದ್ರ ಗುರುಗಳು ಹುಟ್ಟಿದ ಪರಮಮಂಗಳಕರ ದಿನವನ್ನು ಇಂದು ನಾವು "ವರ್ಧಂತಿ ಉತ್ಸವ" ಎಂದು ಮಾಡುತ್ತಲಿದ್ದೇವೆ. ನಮ್ಮಂತಹ ಪಾಮರರಿಗೆ ಏನೂ ಗೊತ್ತಿಲ್ಲ , ಆಚಾರ್ಯರ ಶಾಸ್ತ್ರ ತಿಳಿಯಲು ನಮಗೆ ಶಕ್ತಿ ಇಲ್ಲ , ಪರಮಾತ್ಮನ ಸಾಮೀಪ್ಯ ಗಳಿಸುವ ವಿಧಾನ ಗೊತ್ತಿಲ್ಲ . ಚಿಂತೆ ಬೇಡ " ನಾವಿದ್ದೇವೆ" ಅನ್ನುತ್ತಾರೆ ರಾಯರು. ಸನ್ಮಾರ್ಗ ತೋರಿಸುತ್ತೇವೆ ಅನ್ನುತ್ತಾರೆ ರಾಯರು. ಅದಕ್ಕಾಗಿಯೇ ಬಂದಿದ್ದೇವೆ ಅನ್ನುತ್ತಾರೆ ರಾಯರು. ಮಗುವಿನಂತೆ ಮೊದಲು ಹತ್ತಿರ  ಕರೆದು ಬೇಡಿದ್ದನ್ನೆಲ್ಲ ಕೊಟ್ಟು ಆಮೇಲೆ ಶಾಸ್ತ್ರದ ಬೋಧನೆ ಮಾಡುತ್ತಾರೆ ರಾಯರು. ವಾದೀಂದ್ರ ತೀರ್ಥರು ರಾಯರನ್ನು ಕುರಿತು  " ಕಿಮ್ ವಾ ದುಸ್ಸಾಧ್ಯಮಸ್ತಿ ತ್ರಿಜಗತಿ ಮಹಾತಾಮಾತ್ಮನ ಪಾಣಿಪದ್ಮೆ"  , " ಉಕ್ತಂ ನೋ ವಕ್ತಿ ಭೂಯಃ ಕ್ವಚಿದಪಿ ಲಿಖಿತಂ ನೈವ ನಿಮ್ರ್ಮಾರ್ಷ್ಟಿ ತಸ್ಮಾತ್ " " ಅದ್ಯ ಶ್ರೀ ರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವ ಸಿದ್ಧಾಂತ ಶಾಖೀ" ಇತ್ಯಾದಿಯಾಗಿ ವರ್ಣನೆ ಮಾಡುವ ಮೂಲಕ ಅವರ ಮಹಿಮೆ ತಿಳಿಸಿದ್ದಾರೆ.. ಹೀಗೆ ರಾಯರ ಪಟ್ಟಾಭಿಷೇಕ , ವರ್ಧಂತಿ , ಆರಧನಾದಿಗಳನ್ನೂ ಮಾಡಿಯಾದರೂ ನಮಗೆ ಈ ಬ್ರಹ್ಮ ವಿದ್ಯೆಯ ಮಹತ್ವ ಅರಿಯಲು ಸಹಕಾರವಾಗಿ ನಾವು ಆಕಡೆ ಹೋಗಿ ಸಾಧನಾ ಮಾರ್ಗದತ್ತ ನಡೆಯಬೇಕು , ಶಾಸ್ತ್ರಗಳ ಮಹತ್ವ ತಿಳಿಯಬೇಕು ಅನ್ನುವುದೇ ರಾಯರ ಪರಮೊದ್ದೇಶವೇ ಹೊರತು ಎಲ್ಲ ವೈಭವಾದಿಗಳನ್ನು ಸ್ವೀಕಾರ ಮಾಡಿ ಮೆರೆಯುವ ಉದ್ದೇಶ ರಾಯರದ್ದಲ್ಲ ಅನ್ನುವದು ನನ್ನ ಭಾವನೆ.. ರಾಯರಿಗೆ ಸಮರ್ಪಿಸುವ ವೈಭವ ಎಲ್ಲವನ್ನೂ ರಾಯರು ಕ್ಷಣಮಾತ್ರದಲ್ಲಿ ಭಗವಂತನಿಗೆ ಅರ್ಪಿಸಿ ಬಿಡುತ್ತಾರೆ.. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯ ಧನ್ಯ.. ಅವರನ್ನು ಬೆಂಬತ್ತಿ ನಾವೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಸದ್ಗತಿ ಹೊಂದೋಣ. ಕೃಷ್ಣಾರ್ಪಣಮಸ್ತು.    

                            

Monday 3 March 2014

"ವಾಕ್ಸಿದ್ಧಿ" - ರಾಯರ ಪಟ್ಟಾಭಿಷೇಕ ದಿನದ ಲೇಖನ

              ಇಂದು ರಾಘವೇಂದ್ರ ತೀರ್ಥ ಗುರುಸರ್ವಭೌಮರು ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿಗಳಾದ ಸುದಿನ.. ಆಚಾರ್ಯರ , ಟೀಕಾರಾಯರ , ವಿಜಯೀಂದ್ರತೀರ್ಥರ, ತಮ್ಮ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸೇವೆಯನ್ನು ಮಾಡಲು , ನಮ್ಮಂತಹ ಅನೇಕ ಪಾಮರರನ್ನೂ ಉದ್ಧಾರ ಮಾಡಲು ನರಸಿಂಹದೇವರ ಆಶೀರ್ವಾದಗಳೊಂದಿಗೆ ಅವತರಿಸಿದ್ದ ಶ್ರೀ ಪ್ರಹ್ಲಾದರಾಜರು ಶ್ರೀ ರಾಘವೇಂದ್ರ ತೀರ್ಥರಾಗಿ ಅಭಿಶಿಕ್ತರಾದ ಮಂಗಳಕರ ದಿವಸ.. ಒಂದು ವೇಳೆ ರಾಘವೇಂದ್ರ ಗುರುಗಳು ಸನ್ಯಾಸ ತೆಗೆದುಕೊಳ್ಳದೆ ಇದ್ದರೇ ?? ಅಯ್ಯಯ್ಯೋ ಒಂದೆರೆಡು ಕ್ಷಣ ಮನಸ್ಸು ಅಲ್ಲೋಲ ಕಲ್ಲೋಲ ಆಗುತ್ತದೆ.. ಹೃದಯ ಒಡೆದು ಹೋದಂತೆ ಭಾಸವಾಗುತ್ತದೆ .. ಅನಾಥ ಪ್ರಜ್ಞೆ ಮೂಡುತ್ತದೆ.. ಸಧ್ಯ ರಾಯರು ನಮ್ಮೊಂದಿಗಿದ್ದಾರೆ...ಯಾವಾಗಲು ಇರುತ್ತಾರೆ. 

              ಆಹಾ ಶ್ರೀ ರಾಘವೇಂದ್ರ ತೀರ್ಥ .. ಎಷ್ಟೊಂದು ಮಂಗಳಕರ ನಾಮ ? ಯೋಗಿಗಳ , ಮಹಾನುಭಾವರ , ದೈವಾಂಶ ಸಂಭೂತರ ಪ್ರತಿ ಒಂದು ನಡೆಯೂ ಹಾಗೆ.. ಎಲ್ಲವೂ " ಹೈಲಿ ಕ್ಯಾಲ್ಕ್ಯುಲೇಟೆಡ್ !!" .. ಹೌದು ನಮ್ಮ ಆಧುನಿಕ ಯುಗದ ಯಾವ ಉಪಕರಣಗಳು ನಮ್ಮ ಪ್ರಾಚೀನ ಆಚಾರ್ಯರ , ಹಾಗು ಅವರ ಅನುಯಾಯಿಗಳಾಗಿ, ಆಚಾರ್ಯರ ಮಾತಿನಂತೆ " ಹರಿ ಸರ್ವೋತ್ತಮತ್ವಮ್ ವಹ ಸರ್ವದ ಪ್ರತಿಪಾದಯ" ಎಂಬ ಮಾತನ್ನು ಶಿರಸಾವಹಿಸಿ ಜಗತ್ತಿನ ಮೂಲೆ ಮೂಲೆಗಳಲ್ಲಿ ದ್ವೈತವೇದಾಂತದ ಅಪರಿಮಿತ ಸೇವೆ ಮಾಡುತ್ತಾ ವಿರಾಜಿಸುತ್ತಿರುವ ಯತಿವರೆಣ್ಯರ ತಪಃ ಶಕ್ತಿ , ವಿಚಾರಧಾರೆ , ದೂರಾಲೋಚನೆ ಯಾವುದಕ್ಕೂ ಸರಿ ಸಾಟಿ ಇಲ್ಲವೇ ಇಲ್ಲ.. ಶ್ರೀ ಸುಧೀಂದ್ರ ತೀರ್ಥರು ಶ್ರೀ ರಾಘವೇಂದ್ರ ತೀರ್ಥರಿಗೆ ಮಾಡಿದ ಮಹಾಶಿರ್ವಾದವೇ ಇದಕ್ಕೆ ಸಾಕ್ಷಿ .. ಶ್ರೀ ಸುಧೀಂದ್ರರು ತಮ್ಮ ವಿದ್ಯಾ ಶಿಷ್ಯ , ಕರುಣೆಯ ಕಂದ ಶ್ರೀ ವೆಂಕಟನಾಥಾಚರ್ಯರನ್ನ ಉಪಸ್ಯ ಮೂರ್ತಿ ಶ್ರೀ ಮೂಲರಾಮದೇವರ , ಶ್ರೀ ಆಚಾರ್ಯರ ಆದೇಶದಂತೆ ವೇದಾಂತ ಸಾಮ್ರಾಜ್ಯದಲ್ಲಿ , ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ , ವಿದ್ಯಾ ಮಠ ವೆಂದೆ ಖ್ಯತಿವೆತ್ತಿದ್ದ ಮಹಾ ಪೀಠದಲ್ಲಿ ಮಂಡಿಸುವಾಗ ಮಾಡಿದ ಆಶೀರ್ವಾದಗಳು ಇಂದಿಗೆ ಸೂರ್ಯ ಪ್ರಕಾಶದಷ್ಟು ಸ್ಪುಟವಾಗಿ ನಮ್ಮೆದುರೇ ಪ್ರತ್ಯಕ್ಷ ಫಲವಾಗಿವೆ .. 

              ಶ್ರೀ ರಾಯರು ಆಶ್ರಮ ತೆಗೆದುಕೊಳ್ಳುವ ಸಂದರ್ಭದಲ್ಲಿ ಶ್ರೀ ಸುಧೀಂದ್ರರು 
      
     ಶ್ರೀ ಸುರೇಂದ್ರವದಯಂ ತಪಸ್ಯಯಾ ಶ್ರೀ ಜಯೀಂದ್ರ ಇವ ಕೀರ್ತಿಸಂಪದಾ । 
     ವಿಶ್ರುತೋsಹಮಿವ ವಾದ ಸಂಗರೇ ರಾಘವೇಂದ್ರ ಯತಿರಾಟ್ ಸಮೇಧತಾಂ।। 

 ಎಂದು ಶೀರ್ವದಿಸಿದರು ಎಂದು ರಾಘವೇಂದ್ರ ವಿಜಯಕಾರರು ಹೇಳಿದ್ದಾರೆ.. 
     " ಸಮಸ್ತ ಭರತಖಂಡವನ್ನು ಉಪವಾಸ ವ್ರುತದಿಂದ ಮೂರು ಬಾರಿ ಸಂಚರಿಸಿದ , ಕಠಿಣವ್ರುತಾನುಷ್ಥಾನತತ್ಪರರಾದ , ಮಾನಸಪೂಜಾ ಧುರಂಧರರಾದ ಶ್ರೀ ಸುರೇಂದ್ರ ತೀರ್ಥರಂತಹ ಮಾಹಾನುಭಾವರಂತೆ ತಪಶ್ಶಕ್ತಿ ನಿಮ್ಮಲ್ಲಿ ಬರಲಿ , ಚತುಶ್ಶಷ್ಟಿ ಕಲಾ ವಿಷೆಶರಾದ , ಶತಾಧಿಕ ಗ್ರಂಥರತ್ನ ಪ್ರಣೀತರಾಗಿ ಸಮಸ್ತ ದಕ್ಷಿಣ ಭಾರತದ ಅಧಿಪತ್ಯ ಹೊಂದಿದ್ದ ಶ್ರೀ ವಿಜಯೀಂದ್ರ ತೀರ್ಥರಂತೆ ಕೀರ್ತಿವಂತರಾಗಿ ವಿರಾಜಿಸುವಂತಾಗಲಿ.. ಶ್ರೀಮಠದ ವಿದ್ಯಾ ಮಠ ಎಂಬ ಹೆಸರನ್ನು ಸಾರ್ಥಕ ಮಾಡಿದ , "ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರ" ಎಂಬ ಬಿರುದ ಪಡೆದ ಏಕೈಕ ಯತಿ ಸಾರ್ವಭೌಮ , "ಜಗದ್ಗುರು" ಎಂದು ಪರಮತೀಯರಿಂದಲೂ ಮಾನ್ಯರಾದ , ಪರಮತೀಯರು ಸೇರಿದಂತೆ ಎಲ್ಲರೂ " ಅಲಂಕಾರ ಶಾಸ್ತ್ರನಿಪುಣಃ " ಎಂದೇ ಖ್ಯಾತರಾದ , ಪರಮತೀಯ ಕಾವ್ಯಗಳಲ್ಲಿ ಹೊಗಳಿಸಿಕೊಂಡ  , ಮಹಾನ್ ಮೇಧಾವಿ ಮೂರ್ಧನ್ಯರಾದ, ವಿಶ್ವವಿಖ್ಯತರಾದ , ಭಾಗವತದ ಎರೆಡು ಸ್ಕಂದಗಳಿಗೆ ಗಹನ,ಗಂಭೀರವಾದ,ವ್ಯಾಖ್ಯಾನವನ್ನು ರಚಿಸಿದ , ವಾದವಿದ್ಯಾ , ವೇದವಿದ್ಯಾಕುಶಲರಾದ ಶ್ರೀ ಸುಧೀಂದ್ರರು , ರಾಘವೇಂದ್ರ ತೀರ್ಥರಿಗೆ "ನಮ್ಮಂತೆ" ಸಮಸ್ತ ಮಾನವ ಜನಾಂಗದ ಹಿತಕ್ಕಾಗಿ ಸರ್ವರನ್ನೂ ಅನುಗ್ರಹಿಸುತ್ತ ಕಾಪಾಡುತ್ತಾ ಜಯಶೀಲರಾಗಿ ಅಭಿವೃದ್ಧಿ ಹೊಂದಿರಿ ಎಂದು ಹೇಳಿ ಆಶೀರ್ವದಿಸಿದರು.. ಇದಲ್ಲದೆ ಕುಬೇರನಂತೆ ಅಕ್ಷಯವಾದ ಸಂಪತ್ತಿನಿಂದಲೂ , ಜಗನ್ಮಂಗಳ ಮೂರ್ತಿ ರಾಮಚಂದ್ರ ದೇವರಂತೆ ಕೀರ್ತಿವಂತರಾಗಿರುವಂತೆಯೂ ಆಶೀರ್ವಾದ ಮಾಡಿದ್ದಾರೆ.. 
    ಹೀಗೆ ಸಿದ್ಧಪುರುಷರ ತುಂಬು ಹೃದಯದ ಆಶೀರ್ವಾದ ಬಲದೊಂದಿಗೆ ಎಲ್ಲಕ್ಕಿಂತ ಮಿಗಿಲಾಗಿ ತಮ್ಮನ್ನು ಉದ್ಧರಿಸಿದ ಶ್ರೀ ನರಸಿಮ್ಹದೆವರಿಂದ ವಿಶೇಷ ಅನುಗ್ರಹ ಪಡೆದು , ಅವರೇ ಹಿಂದೆ  " ಬ್ರಹ್ಮ ಸಂಬಂಧಿಯಾದ ನನ್ನನ್ನು ನೀನು ಮುಂದೆ ಕಲಿಯುಗದಲ್ಲಿ ಅರ್ಚಿಸುತ್ತೀ " ಎಂದು ಹೇಳಿದಂತೆ ಸಾಕ್ಷಾತ್ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲ ರಾಮ ಮೂರ್ತಿಯನ್ನು ಸದಾ ಅರ್ಚಿಸುತ್ತ ರಾಮ ಕೃಷ್ಣ ವೇದವ್ಯಾಸ ನರಹರಿ ರೂಪಗಳನ್ನು ಸದಾ ಧ್ಯಾನಿಸುತ್ತ , ಹಯಗ್ರೀವದೇವರನ್ನು ಮನಸ್ಸಿನಲ್ಲಿ ಪ್ರತಿಷ್ಟಾಪಿಸಿಕೊಂಡು ಸದಾ ನಮ್ಮೆಲ್ಲರನ್ನೂ ಇಂದಿಗೂ ಸಲಹುತ್ತಿದ್ದಾರೆ ನಮ್ಮ "ರಾಘವೇಂದ್ರ ಗುರುಗಳು" ಇವರ ಕೃಪೆ , ದಯೆ , ಕಾರುಣ್ಯಕ್ಕೆ ಮಿತಿ ಉಂಟೆ ?? ಅದಕ್ಕೆ ಇವರ ಪಟ್ಟದ ಶಿಷ್ಯರಾದ ಯೋಗೀಂದ್ರ ತೀರ್ಥ ಶ್ರೀಪಾದಂಗಳವರು ಇವರನ್ನು " ದಯಾಲವೇ " " ಕಾರುಣ್ಯಸಿಂಧವೇ" ಎಂದು ಮನತುಂಬಿ ಕೊಂಡಾಡಿದ್ದಾರೆ. ಯೋಗೀಂದ್ರ ತೀರ್ಥರು ರಾಯರನ್ನು ಕುರಿತು " ಸ್ವಾಮಿ ತಮ್ಮ ಮಹೋನ್ನತ ಸಾಧನೆ ಇಂದ ಈ ಮೂಲ ಮಹಾ ಸಂಸ್ಥಾನವನ್ನು ನಡೆಸಿಕೊಂಡು ಹೋಗುತ್ತಿದ್ದೀರಿ , ತಮ್ಮನ್ನೇ ಸರ್ವವಿಧದಿಂದಲೂ ಆಶ್ರಯಿಸಿರುವ ನಾವು , ನೀವಿಲ್ಲದೇ ( ಪ್ರತ್ಯಕ್ಷವಾಗಿ ) ಸಂಸ್ಥಾನವನ್ನು ಹೇಗೆ ಮುಂದುವರೆಸಿಕೊಂಡು ಹೋಗುವದು ?? " ಎಂದು ಭಾವುಕರಾಗಿ ಕೇಳಿದಾಗ , ಹೇಗೆ ಭರತ ಶ್ರೀರಾಮದೇವರು ವನವಾಸಕ್ಕೆ ಹೋದಾಗ ತಮ್ಮ ಪಾದುಕೆಗಳನ್ನೇ ಭರತನ ಕೈಗಿತ್ತರೋ ಹಾಗೆ ,ಶ್ರೀ ರಾಘವೇಂದ್ರ ಗುರುಗಳು ತಾವು ಧರಿಸಿದ್ಧ ಪಾದುಕಾದ್ವಾಯಗಳನ್ನೂ ಯೋಗೀಂದ್ರ ತೀರ್ಥರ ಕೈಗಿತ್ತು ,  "ಈ ಪಾದುಕೆಗಳು ಎಲ್ಲಿ ಇರುತ್ತವೆಯೋ ಅಲ್ಲಿ ನಮ್ಮ ಸಂಪೂರ್ಣ ಸನ್ನಿಧಾನವಿರುತ್ತಾದೇ , ಈ ರೂಪದಲ್ಲಿ ಸ್ವತಃ ನವೆ ಇದ್ದು ಸಂಸ್ಥಾನಕ್ಕೆ ಯಾವುದೇ ಕುಂದು ಕೊರತೆ ಬರದಂತೆ  ನೋಡಿಕೊಳ್ಳುತ್ತೇವೆ , ಈ ಪಾದುಕಾ ಬಲದಿಂದ ಎಲ್ಲ ಇಷ್ಟಾರ್ಥಗಳು ನೆರವೆರುವವು " ಎಂದು ಅಭಯವಿತ್ತಿದ್ದಾರೆ ಮಹಾನುಭಾವರು.. ಈ ಪಾದುಕೆಗಳನ್ನೂ ಇಂದಿಗೂ ನಾವು ಶ್ರೀ ರಾಯರ ಸಂಸ್ಥಾನದಲ್ಲಿ ಕಾಣಬಹುದು.. ಪರಮಪೂಜ್ಯರಾದ ರಾಯರ ಮಠದ ಪೀಠಾಧಿಪತಿಗಳು ಅದನ್ನು ಶ್ರೀ ಮೂಲರಾಮ ಪೂಜಾ ನಂತರ ಸಕಲ ಭಕ್ತರಿಗೂ ತೋರಿಸಿ ಎಲ್ಲರನ್ನು ಉದ್ಧಾರ ಮಾಡುತ್ತಾರೆ.. 
    ಈ ರೀತಿಯಾಗಿ ರಾಯರ ಮೇಲೆ ಸುಧೀಂದ್ರರು ಏನೆಲ್ಲಾ ಆಶೀರ್ವಾದ ಮಾಡಿದ್ದಾರೆಯೋ , ರಾಘವೇಂದ್ರ ಪ್ರಭುಗಳು ಏನೆಲ್ಲಾ ಅಶೀರ್ವದ ಮಾಡಿದ್ದಾರೆಯೋ ? ಅದೆಲ್ಲ ಇಂದಿಗ್ಗೂ ಸೂರ್ಯಪ್ರಕಾಶದಷ್ಟು ಸತ್ಯ ಎಂಬುದನ್ನು ಎಲ್ಲ ಸಜ್ಜನರೂ ಮನಗಾಣಬಹುದು.. ಇದೆ ದೊಡ್ಡವರ , ಮಹಾನುಭಾವರ , ದೈವಾಂಶಸಂಭೂತರ ಮಾತಿನ ಮಹಿಮೆ.. "ಗುರುರಾಜರೇ ತಮ್ಮ ಜೀವನದ ಪ್ರತಿಯೊಂದು ಘಟನೆಯೂ , ತಮ್ಮ ಪ್ರತಿಯೊಂದು ಮಾತು , ತಮ್ಮ ಪ್ರತಿಯೊಂದೂ ಕಾರ್ಯ , ತಾವು ನೀ ಮಾಡಿದರೂ ಅದರಿಂದ ವೇದಗಳ ಸಾರ , ಶಾಸ್ತ್ರವಿಚಾರವನ್ನೇ ಬೋಧಿಸುತ್ತೀರಿ.. ಇಂಥಾ ಪ್ರಭುವ ಕಾಣೆನೋ ಈ ಜಗದೊಳು , ಹಿಂತಾ ಪ್ರಭುವ ಕಾಣೆನೋ ... ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿ ಮಾಮ್ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ .. ನಿಮ್ಮ ಮಹಿಮೆ ವರ್ಣಿಸಲಸಾಧ್ಯ ಎಂದು ವಾದೀಂದ್ರ ತೀರ್ಥ ಗುರುಸಾರ್ವಭೌಮರೆ ಉದ್ಗಾರ ತೆಗೆದಿರುವಾಗ ಇನ್ನು ನನ್ನಂತಹ ಕ್ರಿಮಿ ಇಂದೇನು ಸಾಧ್ಯ ಸ್ವಾಮೀ ?? ನೀವೇ ನಿಂತು ಬರೆಸಿದ್ದೀರಿ .. ಅದು ನಿಮಗೆ ಸಮರ್ಪಿತ .. ಏನೂ ಬೇಡ ಸ್ವಾಮೇ ನಿಮ್ಮ ದಯೆ ಒಂದಿದ್ದರೆ ಸಾಕು ದೊರೆಯೇ .. ಮೂಲರಾಮನ ಪೂಜಿಪ ಯತಿಯೇ.!! 
                                         
ಅಸ್ಮದ್ ಗುರ್ವಂತರ್ಗತ ರಾಘವೇಂದ್ರ  ಗುರ್ವಂತರ್ಗತ ಭಾರತೀರಾಮನ ಮುಖ್ಯಪ್ರಾಣಾಂತರ್ಗತ ಮಧ್ವವಲ್ಲಭ ಸೀತಾಪತೆ ಶ್ರೀಮನ್ಮೂಲರಾಮ ಅಭಿನ್ನ ಶ್ರೀ ಕೃಷ್ಣಾರ್ಪಣಮಸ್ತು..
                          ಭೂ ಇಷ್ಟಾಂ ತೆ ನಮ ಉಕ್ತಿಂ ವಿಧೇಮ      

Friday 24 January 2014

ಶ್ರೀ ರಾಘವೇಂದ್ರ ಗುರುಗಳ ವಿದ್ಯಾ ಮಠದಲ್ಲಿ ನಿತ್ಯವೂ ವೈಭವದಿಂದ ಪೂಜೆಗೊಳ್ಳುವ ಶ್ರೀ ನರಹರಿ ತೀರ್ಥರು ತಾವೇ ತಂದು ಶ್ರೀಮದಾಚಾರ್ಯರಿಗೆ ತಂದೊಪ್ಪಿಸಿದ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲ ರಾಮಚಂದ್ರ ದೇವರ ಬಗ್ಗೆ  ಶ್ರೀ  ರಾಘವೇಂದ್ರ ಗುರುಗಳ ದಿವ್ಯ ಚರಿತ್ರೆಯಾದ , ರಾಯರಿಂದಲೇ ಅಂಕಿತ ಹಾಕಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾದ "ರಾಘವೇಂದ್ರ ವಿಜಯ" ದಲ್ಲಿನ ಮಾತುಗಳು.

ಗುರೊರ್ನಿಯೊಗಾದಧಿಗಮ್ಯ ರಾಜ್ಯಂ ಶಿಷ್ಯಸ್ತದೀಯೋ ನೃಹರಿವ್ರುತೀಂದ್ರ: ।
ಗಜೇಶ ಕೋಶಸ್ಥಿತ ರಾಮಮೂರ್ತಿಮ್ ಪೂರ್ಣಪ್ರಬೊಧಾಯ ಸಮಾರ್ಪಯತ್ತಾಂ।। 

ಸಾ ಯತ್ರ ರಾಮಪ್ರತಿಮಾಸ್ತಿ ತತ್ರ ಚತು: ಪುಮರ್ಥೀ ಸತತಂ ಚಕಾಸ್ತಿ । 
ಆದಿತ್ಯ ಚೈವಂ ಗುರುಣೇವ ದತ್ತಾ ಮಾನರ್ಚಯತ್ತಾ ಮನಿಶಂ ಯಮೀಂದ್ರಃ ।।

ಅಂತೇ ವಸಂಸ್ತಸ್ಯ ಗುರೋರನೇನಾಸಭಾಜಯತ್ತಾಂ ಪ್ರತಿಮಾಂ ವಿತೀರ್ಣಾಂ ।
ಸಂವರ್ಧಯನ್ನಾದಿಮ ಸಂಪ್ರದಾಯಮನ್ಯೋಭವನ್ಮಾಧವ ಸಂಯಮೀಂದ್ರಃ ।। 
..................................................  
.................................................. 

ಸಾ ರಾಮಚಂದ್ರ ಪ್ರತಿಮಾ ಜಯೀಂದ್ರಾತ್ ಸುಧೀಂದ್ರಯೋಗೀಂದ್ರಮಗಾತ್ಕ್ರಮೇಣ ।
ವಿಸ್ತೀರ್ಣ ಕೀರ್ತಿರ್ವಿಬಭಾವವನ್ಯಾಮ್ ವಿಖ್ಯಾತವಿದ್ವಜ್ಜನವಂದ್ಯಪಾದ: ।। 



"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...