Tuesday, 18 October 2022

"ವಸುಧಾತಲವಿಖ್ಯಾತ ಶ್ರೀವಸುಧೇಂದ್ರತೀರ್ಥರು"



    ಶ್ರೀಹಂಸನಾಮಕಪರಮಾತ್ಮನ, ಶ್ರೀಮಧ್ವ-ಪದ್ಮನಾಭ-ಶ್ರೀಜಯಾರ್ಯಾದಿ ಯತಿಗಳ ಸತ್ಪರಂಪರೆಯಲ್ಲಿ ಅವತರಿಸಿದ ಮಹಾತಪಸ್ವೀಗಳ ಸಾಲಿನಲ್ಲಿ ಅಗ್ರಗಣ್ಯರು ಶ್ರೀರಾಘವೇಂದ್ರಗುರುಸಾರ್ವಭೌಮರ ವಂಶೋದ್ಭವರಾದ ಶ್ರೀವಸುಧೇಂದ್ರತೀರ್ಥ ಶ್ರೀಪಾದಂಗಳವರು.  

    ಶ್ರೀರಾಘವೇಂದ್ರಗುರುಸಾರ್ವಭೌಮರ ಪೂರ್ವಾಶ್ರಮದ ಸದ್ವಂಶದಲ್ಲಿ, ಅವರ ಮರಿಮಕ್ಕಳಾಗಿ ಅವತರಿಸಿದವರೇ ಶ್ರೀವೇಣುಗೋಪಾಲಾಚಾರ್ಯರು. ಅವರು ಶ್ರೀವಾದೀಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರೂ ಹೌದು. ಶ್ರೀವೇಣುಗೋಪಲಾಚಾರ್ಯರ ಜ್ಯೇಷ್ಠ ಮಕ್ಕಳೇ ಶ್ರೀಪುರುಷೋತ್ತಮಾಚಾರ್ಯರು. 


    ಶ್ರೀಪುರುಷೋತ್ತಮಾಚಾರ್ಯರೇ ಶ್ರೀವಾದೀಂದ್ರತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ "ಶ್ರೀವಸುಧೇಂದ್ರತೀರ್ಥ"ರಾದರು. ಅವರ ಅಪಾರ ಮಹಿಮೆ, ಅಪ್ರತಿಮ ಪಾಂಡಿತ್ಯ, ಮಹಾಸಂಸ್ಥಾನದ ಅಭಿವೃದ್ಧಿ, ಮಹೋನ್ನತವಾದ ವಿದ್ಯಾಪರೆಂಪರೆ,  ಗ್ರಂಥಕರ್ತರೆನಿಸುವ ಶಿಷ್ಯರ ನಿರ್ಮಾಣ, ಅಪಾರ ತಪಃ ಪ್ರಭಾವ, ವೈಭವದ ಶ್ರೀಮೂಲರಾಮಾರ್ಚನೆ, ಹರಿದಾಸಸಾಹಿತ್ಯದ ಪೋಷಣೆ ಶ್ರೀವಿಜಯದಾಸ, ಶ್ರೀಗೋಪಾಲದಾಸರು ಹಾಗೂ ಶ್ರೀಜಗನ್ನಾಥದಾಸರಿಗೆ ಅವರು ಮಾಡಿದ ಪರಮಾನುಗ್ರಹ ಹೀಗೆ ಹಲವು ರೀತಿಯಲ್ಲಿ ಶ್ರೀವಸುಧೇಂದ್ರತೀರ್ಥರ ಹೆಸರು ಚಿರಸ್ಥಾಯಿಯಾಗಿದೆ.



ಮಹಾಸಂಸ್ಥಾನವನ್ನು ಭದ್ರಪಡಿಸಿದ  ಮಹಾನುಭಾವರು:


ಶ್ರೀಗುರುಸಾರ್ವಭೌಮರ ಕಾಲದಲ್ಲಿ ಶ್ರೀಮಠಕ್ಕೆ ಜಹಗೀರು ನೀಡಿದ ಮಂತ್ರಾಲಯಗ್ರಾಮವು ಎಲ್ಲಿಯವರೆಯೆ ಶ್ರೀಮಠದ ಸುಪರ್ದಿಗೆ ಒಳಪಟ್ಟಿದ್ದು ಎನ್ನುವುದು ಸ್ಪಷ್ಟವಿರಲಿಲ್ಲ. ಹಲವು ರಾಜಕೀಯವಿಪ್ಲವಗಳ ಮಧ್ಯೆ ಹಲವು ಕಾಲ ಮಂತ್ರಾಲಯದಲ್ಲೇ ಉಳಿದು ಪಾಠ ಪ್ರವಚನಗಳನ್ನು ನಡೆಸಿ ತಮ್ಮ ಕಾಲದಲ್ಲಿ ಅಂದಿನ ಆದೋನಿಯ ನವಾಬ ಸಬ್ದಲ್ ಜಂಗ್ ಬಹಾದೂರ್ ನಲ್ಲಿ ಮಂತ್ರಾಲಯ ಗ್ರಾಮದ ಬಗ್ಗೆ ಭವಿಷ್ಯದ ಬಗ್ಗೆ ಯೋಚಿಸಿ ಸೂಕ್ತ ಕಾಗದ ಪ್ರತ್ರಗಳನ್ನು ಮಾಡಿಸಿ,ಮಂತ್ರಾಲಯವನ್ನು ಭದ್ರ ಪಡಿಸಿದರು. 


ಹಿಂದೆ ಶ್ರೀರಾಘವೇಂದ್ರಗುರುಗಳ ಕಾಲದಲ್ಲಿ ಶ್ರೀಮಠಕ್ಕೆ ಜಗಗೀರಾಗಿ ಲಭ್ಯವಾಗಿದ್ದ ಕಿರಿಟಗಿರಿಗ್ರಾಮವು ಬದಲಾದ ರಾಜಕೀಯ ಸನ್ನಿವೇಶದಿಂದ ಮಹಾಸಂಸ್ಥಾನದ ಕೈತಪ್ಪಿ ಹೋಗಿತ್ತು. ತಮ್ಮ ವಿಶಿಷ್ಟ ತಪಃ ಪ್ರಭಾವ, ಚರ್ಯೆಯಿಂದ ಶ್ರೀಗಳವರು ಅದನ್ನು ಮರಳಿ ಸಂಸ್ಥಾನಕ್ಕೆ ಬರುವಂತೆ ಮಾಡಿದರು. ಇದಲ್ಲದೇ ಇನ್ನು ಹತ್ತು ಹಲವು ಗ್ರಾಮಗಳನ್ನು ಶ್ರೀಮೂಲರಾಮದೇವರ ಸೇವಾರ್ಥವಾಗಿ ಶ್ರೀಮಠಕ್ಕೆ  ಭದ್ರಪಡಿಸಿದ್ದಲ್ಲದೇ ಅನೇಕ ರಾಜರಿಂದ, ಪಾಳೆಯಗಾರರಿಂದ ಸಮ್ಮಾನಿತರಾಗಿ ಅನೇಕ ಗ್ರಾಮಗಳನ್ನು ದಾನಪಡೆದು ಸಂಸ್ಥಾನಕ್ಕೆ ಅರ್ಪಿಸುವ ವರ್ಚಸ್ಸು ಶ್ರೀಗಳವರಿಗೆ ಇದ್ದಿತ್ತು. 

Saturday, 19 March 2022

 ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ. 



ವೇದಾಂತೇತಿಹಾಸದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ಥಾನದ ಪರಿಚಯವನ್ನು ಪ್ರಯಾಸದಿಂದ ತಿಳಿಯುವ ಅಗತ್ಯ ಸರ್ವಥಾ ಇಲ್ಲ, ಕಾರಣ ಅದು ಸರ್ವಜನನಿತವಾದ ವಿಷಯ. ಶ್ರೀಪದ್ಮನಾಭತೀರ್ಥರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀವಿಬುಧೇಂದ್ರ-ಜಿತಾಮಿತ್ರರು, ಶ್ರೀಸುರೇಂದ್ರರು, ಶ್ರೀವಿಜಯೀಂದ್ರರು, ಶ್ರೀಸುಧೀಂದ್ರ-ಶ್ರೀರಾಘವೇಂದ್ರರು, ಶ್ರೀಸುಮತೀಂದ್ರ-ಶ್ರೀವಾದೀಂದ್ರರು, ಶ್ರೀವಸುಧೇಂದ್ರ-ಶ್ರೀವರದೇಂದ್ರ-ಶ್ರೀಧೀರೇಂದ್ರರು ಹೀಗೆ ಮಹೋನ್ನತ ಯತಿಪರಂಪರೆಯ ಆ ವಿದ್ಯಾಪ್ರಭಾವ, ಗ್ರಂಥನಿರ್ಮಾಣ, ವಾದಿ-ದಿಗ್ವಿಜಯಗಳು ಮಾತ್ರವಲ್ಲದೇ ಅವರು ಸಮಾಜದ ಕೊನೆಯ ವ್ಯಕ್ತಿಯ ಮೇಲೂ ಮಾಡಿದ ಪರಮಾನುಗ್ರಹ ಪ್ರತ್ಯಕ್ಷಸಿದ್ಧ. ಹೀಗೆ ಶ್ರೀಮನ್ಮಧ್ವಾಚಾರ್ಯರಿಂದ ಪ್ರವಹಿಸಿದ ವಿಶಿಷ್ಟವಾದ ಪರಂಪರೆಯಲ್ಲಿ ಉದಯಿಸಿದ ಒಬ್ಬೊಬ್ಬ ಯತಿಗಳೂ ಕೂಡ ಶ್ರೀಮೂಲರಾಮನಿಗರ್ಪಿಸಿದ ನಕ್ಷತ್ರಮಾಲೆಯ ಹೊಳೆಯುವ  ನಕ್ಷತ್ರಗಳು.


ಅಂತಹ ಶ್ರೇಷ್ಠ ಗುರುಪರಂಪರೆಯಲ್ಲಿ ಬಂದ ಪೂರ್ಣಚಂದ್ರಮರೇ ಶ್ರೀರಾಘವೇಂದ್ರಗುರುಸಾರ್ವಭೌಮರು. ಪ್ರಹ್ಲಾದನ ಅವತಾರಭೂತರಾದ ಶ್ರೀರಾಯರ  ಚರಿತ್ರೆಯನ್ನು ದಾಖಲಿಸುವ ಮಹತ್ವಪೂರ್ಣ ಕೃತಿ ಶ್ರೀರಾಘವೇಂದ್ರವಿಜಯ. ಐತಿಹಾಸಿಕವಾಗಿಯೂ ಪರಮಪ್ರಮಾಣವೆನಿಸಿದ, ಸ್ವತಃ ಶ್ರೀರಾಘವೇಂದ್ರಗುರುಸಾರ್ವಭೌಮರೇ ಪರಿಶೀಲಿಸಿದ ಐತಿಹಾಸಿಕ ದಾಖಲೆ ಇದಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಪ್ರಾಥಮಿಕವಾಗಿ  ಕಾವ್ಯ-ಸಾಹಿತ್ಯ-ವ್ಯಾಕರಣಾದಿ ಪ್ರಾಥಮಿಕ ಪಾಠವನ್ನು ರಾಯರಿಗೆ  ಹೇಳಿದ  ಗುರುಗಳಾದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಹಾಗೂ  ರಾಯರ ಪೂರ್ವಾಶ್ರಮ ಅಕ್ಕಂದಿರಾದ ವೇಂಕಟಾಂಬಾ ಅಮ್ಮನವರ ಸುಪುತ್ರರಾದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ಶ್ರೀನಾರಾಯಣಾಚಾರ್ಯರು ತಮ್ಮ ಸೋದರಮಾವಂದಿರಾದ  ಶ್ರೀರಾಘವೇಂದ್ರತೀರ್ಥರನ್ನು ತಮ್ಮ ಬಾಲ್ಯದಿಂದಲೇ ಹತ್ತಿರದಿಂದ ನೋಡಿಕೊಂಡು ಬೆಳೆದವರು. ಅವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ನೋಡಿ ಹಿರಿ ಹಿರಿ ಹಿಗ್ಗಿದವರು. ಪ್ರಾಯಃ ಶ್ರೀರಾಘವೇಂದ್ರಗುರುಗಳ ಜೀವನದಲ್ಲಿನ ಎಲ್ಲ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಾಗುರುವವರು.   

Sunday, 16 January 2022

ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ


ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ  ।। 
ಉಪಾಸ್ಯಾ ರಾಘವೇಂದ್ರಾರ್ಯೈಃ ಅಘನಾಶನಕೀರ್ತಿಭಿಃ ।।

ಸಂತಾನಕೃಷ್ಣಪ್ರತಿಮೆಯು ಸುವರ್ಣಮಯವಾದ ಪ್ರತಿಮೆಯಾಗಿದ್ದು, ಸರ್ವಸಿದ್ಧಿಯನ್ನು ಕೊಡುವಂತಹ ಪ್ರತಿಮೆ. 
ಶ್ರೀರಾಘವೇಂದ್ರಗುರುಸಾರ್ವಭೌಮರಿಂದ  ವಿಶೇಷವಾಗಿ ಉಪಾಸನೆಗೊಂಡ ಪ್ರತಿಮೆ. ಬಂದ ಪಾಪಗಳನ್ನು, ತತ್ಸಂಬಂಧಿ ಕಷ್ಟಗಳನ್ನು ನಾಶಮಾಡಬಲ್ಲ ಮಹಾಸನ್ನಿಧಾನೋಪೇತ ಪ್ರತಿಮೆ. 

ಶ್ರೀರಾಘವೇಂದ್ರಗುರುಸಾರ್ವಭೌಮರು ವಿಶೇಷವಾಗಿ ಉಡುಪಿಯಲ್ಲಿ ಶ್ರೀಕೃಷ್ಣನ ಉಪಾಸನೆಯನ್ನು ಮಾಡಿ, ಅಲ್ಲಿ ಚಂದ್ರಿಕಾಗ್ರಂಥಕ್ಕೆ ಪ್ರಕಾಶ ಎಂಬ ವ್ಹಯಾಖ್ಯಾನವನ್ನು ಮಾಡಿ, ಇನ್ನೂ ಕೆಲವು ಟಿಪ್ಪಣಿಗಳನ್ನು ರಚಿಸಿ, ಶ್ರೀಕೃಷ್ಣನ ಸನ್ನಿಧಾನದಲ್ಲಿ ತಾವೇ ಒಂದು ಸುರ್ವಣಮಾಯವಾದ ಪ್ರತಿಮೆಯನ್ನು ನಿರ್ಮಾಣ ಮಾಡಿ, ಶ್ರೀಕೃಷ್ಣನ ಸನ್ನಿಧಾನದಲ್ಲಿಟ್ಟು  ಪೂಜಿಸಿ ತೆಗೆದುಕೊಂಡು ಬಂದು ತಾವು ಉಪಾಸನೆಯನ್ನು ಮಾಡುತ್ತಿದ್ದರು. ಅದೇ ಕೃಷ್ಣನ ಉಪಾಸನಾಬಲದಿಂದ ಸನ್ನಿಧಾನದಲ್ಲಿ ಸಂತಾನಯಂತ್ರ, ಭೀತಿಯಂತ್ರ ಹಾಗೂ ಅಭಿಷ್ಟಯಂತ್ರದ ಸಿದ್ಧಿ ಇದ್ದು, ಇಂದಿಗೂ ಸಂಸ್ಥಾನದಲ್ಲಿ ಇದರ ಜಾಗೃತ ಫಲಗಳನ್ನು ಪ್ರತ್ಯಕ್ಷವಾಗಿ ನೋಡಬಹುದು. 

Wednesday, 3 June 2020

ಶ್ರೀಪಾದರಾಜರು

ಶ್ರೀಪಾದರಾಜರು ( ಶ್ರೀಲಕ್ಷ್ಮೀನಾರಾಯಣ ತೀರ್ಥರು) 

ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ ಧ್ಯಾಯಂತಾಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ॥

ಆಶ್ರಮನಾಮ: ಶ್ರೀಲಕ್ಷ್ಮೀನಾರಾಯಣ ತೀರ್ಥರು
ಆಶ್ರಮ ಗುರುಗಳು: ಶ್ರೀಸ್ವರ್ಣವರ್ಣತೀರ್ಥರು 
ವಿದ್ಯಾಗುರುಗಳು:  ಶ್ರೀ ವಿಬುಧೆಂದ್ರ ತೀರ್ಥರು (ಶ್ರೀಕವೀಂದ್ರ ತೀರ್ಥ ಪರಂಪರಾ ಭೂಷಾಮಣಿ) 
ಆಶ್ರಮ ಶಿಷ್ಯರು: ಶ್ರೀಹಯಗ್ರೀವತೀರ್ಥರು 
ಪರಂಪರೆ:
 ಶ್ರೀಪಾದರಾಜ ಮಠ : ಶ್ರೀಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಮಾಧ್ವಯತಿಕುಲ ತಿಲಕ ಶ್ರೀಪದ್ಮನಾಭ ತೀರ್ಥರಿಂದ ಪ್ರವರ್ತಿತವಾದ, ಶ್ರೀಲಕ್ಷ್ಮಿಧರ ತೀರ್ಥ ಶ್ರೀಪಾದರಿಂದ ಮುಂದುವರೆದ ಪರಂಪರೆ. 
ಪೂರ್ವಾಶ್ರಮ ನಾಮ: ಲಕ್ಷ್ಮೀನಾರಾಯಣ 
ವೃಂದಾವನ ಸ್ಥಳ: ಮುಳುಬಾಗಿಲು


ಪೂರ್ವಾಶ್ರಮ - ಸಂನ್ಯಾಸ: 

ಬಾಲಕನಾಗಿದ್ದಾಗಲೇ ಅಪ್ರತಿಮ ಮಾತಿನ ವೈಖರಿಯಿಂದ ಶ್ರೀಸ್ವರ್ಣವರ್ಣತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ಅವರಿಂದಲೇ  ಸಂನ್ಯಸ್ತರಾಗಿ ಬಾಲಯತಿಗಳಾಗಿ ಕಂಗೊಳಿಸಿದವರು ಶ್ರೀಲಕ್ಷ್ಮೀನಾರಾಯಣತೀರ್ಥರು..

ವಿದ್ಯಾಗುರುಗಳು- ವಿದ್ಯಾಭ್ಯಾಸ: 

ಸಂನ್ಯಸ್ತರಾದ, ಚತುರರಾದ ನೂತನ ಬಾಲಯತಿಗಳನ್ನು ಅಪ್ರತಿಮ ವಿದ್ವಾಂಸರನ್ನಾಗಿ ಮಾಡಬೇಕು ಎಂದು ಅಪೇಕ್ಷೇಯುಳ್ಳ ಶ್ರೀಸ್ವರ್ಣವರ್ಣತೀರ್ಥರು ಬಾಲಯತಿಗಳನ್ನು ಶ್ರೀವಿಬುಧೇಂದ್ರತೀರ್ಥರ ಹತ್ತಿರ ಕಳುಹಿಸುತ್ತಾರೆ.

ಶ್ರೀಮನ್ಮಧ್ವಾಚಾರ್ಯರ- ಶ್ರೀಪದ್ಮನಾಭತೀರ್ಥರ- ಶ್ರೀ ಜಯತೀರ್ಥರ ದಿವ್ಯ ಪರಂಪರೆಯನ್ನು ಬೆಳಗಿದ , ಶ್ರೀಮಧ್ವಾಚಾರ್ಯರ ಸಿದ್ಧಾಂತವನ್ನೇ ತಮ್ಮ ಸಾರಸರ್ವಸ್ವವನ್ನಾಗಿಸಿಕೊಂಡಿದ್ದವರು ಶ್ರೀವಿಬುಧೇಂದ್ರತೀರ್ಥರು. ಕೇರಲದಿಂದ ಹಿಮಾಲಯಪರ್ಯಂತ ದುರ್ವಾದಿಗಳನ್ನು ನಿರಾಕರಿಸಿದವರು, ದುರ್ವಾದಿವೀಘಟನ ದೀಕ್ಷಾಬದ್ಧರಾದ ಮಾಡುವ ಮಾಧ್ವಯತೀಶ್ವರರ ಸೇನಾನಾಯಕನಂತೆ ಕಂಗೊಳಿಸಿದವರು. ಆಗಿನ ಕಾಲದಲ್ಲಿ ವಿದ್ಯೆಗೆ ತವರಾದ ಮಹಾನ್ ಮೇಧಾವಿಗಳು.

ಶ್ರೀವಾದೀಂದ್ರತೀರ್ಥರು, ಶ್ರೀಪಾದರಾಜರ ವಿದ್ಯಾಗುರುಗಳಾದ ಶ್ರೀವಿಬುಧೇಂದ್ರತೀರ್ಥರನ್ನು ಸ್ತುತಿಸುವಾಗ,

"ಅಮೀಲಕ್ಷ್ಮೀನಾರಾಯಣಮುನಿಮುಖಾಶೇಷಯತಯಃ
ಯತೋ ವಿದ್ಯಾಮೃದ್ಧಾಮಧಿಜಗುರುಧಿಷ್ಠಾನಪತಯಃ |
ಮುಹುರ್ಮೋಹೋದಂಚತ್ಪರಮತಪರೀಭಾವಚತುರಃ
ಸ ಮೇ ಭೂಯಃ ಶ್ರೇಯೋ ದಿಶತು ವಿಬುಧೇಂದ್ರವ್ರತಿಪತಿಃ ||

ಎಂದು ಶ್ರೀಪಾದರಾಜರು ಶ್ರೀವಿಬುಧೇಂದ್ರರ ವಿದ್ಯಾಶಿಷ್ಯರು ಎಂದು ವಿಶೇಷವಾಗಿ ಸ್ಮರಿಸಿದ್ದಾರೆ.

ಶ್ರೀವಿಬುಧೆಂದ್ರತೀರ್ಥರಲ್ಲಿ ಸಮಸ್ತ ದ್ವೈತವೇದಾಂತವನ್ನು ಅಭ್ಯಸಿಸಿ, ಗುರುಗಳಂತೆಯೇ ಅಖಂಡ ವಿದ್ಯಾಪಾರಂಗತರಾಗಿ ವಿದ್ಯಾವ್ಯಾಸಂಗ ಮುಗಿಸಿ ಅವರ ಎತ್ತರದ ವ್ಯಕ್ತಿತ್ವದ ದ್ಯೋತಕವಾಗಿ "ಶ್ರೀಪಾದರಾಜರು" ಎಂಬ ಪ್ರಶಸ್ತಿಯನ್ನು ಪಡೆದವರಾಗಿ ಶ್ರೀಸ್ವರ್ಣವರ್ಣತೀರ್ಥರ ಹತ್ತಿರ ಬರುತ್ತಾರೆ.

ಇದನ್ನೇ ಶ್ರೀವಾದೀಂದ್ರ ಶ್ರೀಮಚ್ಚರಣರು ತಮ್ಮ 'ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮ'ದಲ್ಲಿ, ಶ್ರೀಮದ್ವಿಬುಧೇಂದ್ರತೀರ್ಥರ ಬಗ್ಗೆ ಹೇಳುವಾಗ,

ಲಕ್ಷ್ಮೀನಾರಯಣಮುನಿಃ ವ್ಯಾಸದೇಶಿಕದೇಶಿಕಃ |
ಯಸ್ಮಾತ್ ಶ್ರೀಪಾದರಾಜಾಖ್ಯೋ ಹೃದ್ಯಗೀಷ್ಟಾಖಿಲಾಗಮಾನ್ ||
                                                                               - ಅ.ಗ.ಕ್ರ - 5

ಎಂದು ಗುರುಶಿಷ್ಯರ ವಿದ್ಯಾಸಂಬಂಧವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಸಂಸ್ಥಾನಾಧಿಪತ್ಯ ಹಾಗೂ ವಿಶ್ವವಿದ್ಯಾನಿಲಯ ಸ್ಥಾಪನೆ : 

Tuesday, 13 December 2016

 "ವಿದ್ಯಾಮಠದಲ್ಲಿ ಶ್ರೀಮನ್ಯಾಯಸುಧಾಮಂಗಳ ಮಹೋತ್ಸವ" 

                        ತತ್ವಜ್ಞಾನಕ್ಕೋಸ್ಕರ ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿಸಲ್ಪಟ್ಟ ಸರ್ವೋತ್ತಮನಾದ ಶ್ರೀಮನ್ನಾರಾಯಣನು ಶ್ರೀವೇದವ್ಯಾಸರಾಗಿ ಅವತರಿಸಿ ನಾಶವನ್ನು ಹೊಂದುತ್ತಿರುವ ಅಸ್ತ್ವವ್ಯಸ್ತವಾದ ವೇದರಾಶಿಯನ್ನು ವಿಭಾಗಿಸಿ ತದರ್ಥನಿರ್ಣಯಕ್ಕೋಸ್ಕರ ಸೂತ್ರಸಮೂಹಾತ್ಮಕವಾದ ಬ್ರಹ್ಮಮೀಮಾಂಸಾಶಾಸ್ತ್ರವನ್ನು ರಚಿಸಿದರು. ಸಮನ್ವಯ-ಅವಿರೋಧ-ಸಾಧನ-ಫಲಪ್ರತಿಪಾದಕ ಚತುರಾಧ್ಯಾಯರೂಪವಾದ ಬ್ರಹ್ಮಮೀಮಾಂಸಾಶಾಸ್ತ್ರದಲ್ಲಿ ೫೬೪ ಸೂತ್ರಗಳಿಂದ ನಾರಾಯಣರೂಪಿಯಾದ ಪರಬ್ರಹ್ಮನನ್ನು ಚೆನ್ನಾಗಿ ಪ್ರತಿಪಾದಿಸಿದರು. ಅವೇ ಬ್ರಹ್ಮಸೂತ್ರಗಳು ಎಂದು ಪ್ರಸಿದ್ಧಿ ಪಡೆದಿವೆ.
                 ಶ್ರೀವೇದವ್ಯಾಸರಿಂದ ರಚಿತವಾದ ಅಪರಿಮಿತವಾದ ಬ್ರಹ್ಮಮೀಮಾಂಸಾದಿಶಾಸ್ತ್ರಗಳಿಂದ ಚೆನ್ನಾಗಿ ನಿರ್ಣಯಿಸಲ್ಪಟ್ಟಿರುವ ಸಕಲ ಜ್ಞಾನಿಗಳಿಗೆ ಸಮ್ಮತವಾದ ದೋಷರಹಿತವಾದ ಭಾವವನ್ನು ತಮ್ಮ ಗ್ರಂಥಗಳ ಮೂಲಕವಾಗಿ  ಪ್ರತಿಪಾದಿಸಿದವರು ಅಶೇಷ ಸಜ್ಜನರಿಗೆಲ್ಲ ಜ್ಞಾನದೀಪದಂತಿರುವ, ಶ್ರೀಮುಖ್ಯಪ್ರಾಣ ದೇವರ ಅವತಾರರಾದ ತ್ರೈಲೋಕ್ಯಗುರುಗಳಾದ ಶ್ರೀಮನ್ಮಧ್ವಾಚಾರ್ಯರು. ಜಗತ್ತಿಗೆ ಜಗದ್ಗುರುಗಳಿಂದ ಪ್ರಣೀತವಾದ  ಆ ಅಮೂಲ್ಯ ಸಂಪತ್ತುಗಳೇ  ಸರ್ವಮೂಲ ಗ್ರಂಥಗಳು. ಶ್ರೀವೇದವ್ಯಾಸದೇವರು ಮಾಡಿದ ಆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನರೂಪವಾಗಿ ಒಂದಲ್ಲ ಎರೆಡಲ್ಲ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ, ನ್ಯಾಯವಿವರಣ ಹಾಗು ಅಣುಭಾಷ್ಯ ಎಂಬ ನಾಲ್ಕು (೪) ಗ್ರಂಥರತ್ನಗಳನ್ನು ಬರೆದು ಅನುಗ್ರಹ ಮಾಡಿದ್ದಾರೆ.
                  ಈ ಬ್ರಹ್ಮಸೂತ್ರಗಳಿಗೆ ಭಾಷ್ಯರೂಪವಾಗಿ  ೨೧ ಪರಮತೀಯ  ಆಚಾರ್ಯರು ಬರೆದ ಭಾಷ್ಯಗಳ ವಿಮರ್ಶಾತ್ಮಕ ರೂಪವಾಗಿ ಹೊರಟ ಗ್ರಂಥವೇ ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ. ಶ್ರೀಕೃಷ್ಣಪರಮಾತ್ಮ ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದಂತೆ ಸಮಗ್ರ ಬ್ರಹ್ಮಮೀಮಾಂಸಾ ಶಾಸ್ತ್ರಗಳ ಅರ್ಥಸಾರವನ್ನು ಅಣುಭಾಷ್ಯದಲ್ಲಿ ಹಿಡಿದಿಟ್ಟಿದ್ದಾರೆ ನಮ್ಮ ಜಗದ್ಗುರುಗಳು.ಬ್ರಹ್ಮಸೂತ್ರಗಳ ಮಹತ್ವ ತಿಳಿಸಿ , ಶಾಸ್ತ್ರಪ್ರಮೇಯಗಳನ್ನು ವಿಮರ್ಶಾತ್ಮಕವಾಗಿ ಶಿಷ್ಯರ ಪ್ರಾರ್ಥನೆಯ ಮೇರೆಗೆ ಶ್ರೀಮದಾಚಾರ್ಯರು ನಿರೂಪಿಸಿದ ಗ್ರಂಥವೇ ಶ್ರೀಮದಾನುವ್ಯಾಖ್ಯಾನ.
 ಮೇಲಿನ ಮೂರೂ ಗ್ರಂಥಗಳನ್ನು ಬರೆದಾದಮೇಲೆ ರಚಿಸಿದ ಗ್ರಂಥವೇ ನ್ಯಾಯವಿವರಣ. ಮೇಲಿನ ಮೂರೂಗ್ರಂಥಗಳಲ್ಲಿ ಅಡಕವಾದ ನ್ಯಾಯಗಳ ವಿವರಣೆಗಾಗಿ ಈ ಗ್ರಂಥ ಹೊರಟಿದೆ ಎಂದು ಶ್ರೀಮದಾಚಾರ್ಯರು ತಾವೇ ಹೇಳಿದ್ದಾರೆ .
                ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಅವರ ಸಾಕ್ಷಾತ್ ಶಿಷ್ಯರಾದ, ಶ್ರೀಮಠದ ಪೂರ್ವಿಕ ಗುರುಗಳಾದ, ಶ್ರೀಜಯತೀರ್ಥರು, ಶ್ರೀವಿಬುಧೇಂದ್ರ ತೀರ್ಥರು , ಶ್ರೀವಿಜಯೀ೦ದ್ರ ತೀರ್ಥರು, ಶ್ರೀ ಸುಧೀ೦ದ್ರ ತೀರ್ಥರು, ಶ್ರೀರಾಘವೇಂದ್ರ ತೀರ್ಥರಿಗೇ ಮೊದಲಾದ ಎಲ್ಲ ಜ್ಞಾನಿಗಳಿಗೂ ಪರಮಮಾನ್ಯರಾದ, ಆದಿಟೀಕಾಚಾರ್ಯರಾದ ಶ್ರೀ ಪದ್ಮನಾಭ ತೀರ್ಥರು 'ಸನ್ನ್ಯಾಯರತ್ನಾವಲೀ' ಎಂಬ ಗ್ರಂಥವನ್ನು ಬರೆದಿದ್ದಾರೆ.
                ಸೂತ್ರಪ್ರಸ್ಥಾನದಲ್ಲಿ ಶ್ರೀಮದಾಚಾರ್ಯರ ನಾಲ್ಕು ಗ್ರಂಥಗಳಲ್ಲಿ ಮೂರು ಗ್ರಂಥಗಳಿಗೆ ಮಹತ್ವಪೂರ್ಣವಾದ ಟೀಕೆ ಬರೆದವರು ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರು   (ಶ್ರೀಮಟ್ಟೀಕಾಕೃತ್ಪಾದರು). ಶ್ರೀಮಜ್ಜಯತೀರ್ಥರು ಬರೆದ ಟೀಕಾಗ್ರಂಥಗಳಲ್ಲಿ ಶ್ರೀಮನ್ಯಾಯಸುಧಾ ಅವರ ಮೇರುಕೃತಿ. ಈ ಶ್ರೀಮನ್ಯಾಯಸುಧೆಯು ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಟೀಕಾ ರೂಪದಲ್ಲಿ ಬರೆಯಲ್ಪಟ್ಟಿರುವ ಗ್ರಂಥ. ಮಾಧ್ವವಾಂಗ್ಮಯದಲ್ಲೇ ಎತ್ತರಸ್ಥಾನದಲ್ಲಿ ಪೂಜೆಗೊಳ್ಳುವ  ಗ್ರಂಥ. ಆಚಾರ್ಯರ ನಿಜವಾದ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಗ್ರಂಥ. ಜ್ಞಾನಿಗಳು ಅಧ್ಯಯನ-ಅಧ್ಯಾಪನ ನಡೆಸುವದಕ್ಕಾಗಿ ಜೀವನವನ್ನೇ ತೇಯ್ದಗ್ರಂಥ ಶ್ರೀಮನ್ಯಾಯಸುಧಾ.
ಪ್ರಸಕ್ತ ಮಾಧ್ವವಾಂಗ್ಮಯದಲ್ಲಿ ಶ್ರೀಮನ್ಯಾಯಸುಧೆಗೆ  ಹೆಚ್ಚು ಟಿಪ್ಪಣಿಗಳು ಬರೆಯಲ್ಪಟ್ಟಿವೆ. ಇಂತಹ ಅಪೂರ್ವಕೃತಿಗೆ ಇಷ್ಟೊಂದು ಮಹತ್ವವಿದ್ದುದರಿಂದಲೇ ಶ್ರೀಮನ್ಯಾಯಸುಧಾ ಪಾಠ-ಪ್ರವಚನ-ಅನುವಾದ- ಮಂಗಳ ಎಲ್ಲವೂ ಸಜ್ಜನರಿಗೆ ಮಹಾ ಉತ್ಸವವೇ.
              ಮಧ್ವವಾಂಗ್ಮಯದ  ವಿಶಿಷ್ಟಕೃತಿಯಾದ ಶ್ರೀಮನ್ಯಾಯಸುಧೆಯ ಪಾಠ ಪ್ರವಚನವನ್ನು ಶ್ರೀಮಜ್ಜಯತೀರ್ಥರ ನಂತರ ಅವರ ಶಿಷ್ಯರಾದ ಶ್ರೀವಿದ್ಯಾಧಿರಾಜತೀರ್ಥರು ಹಾಗು ಅವರ ಪರಂಪರೆಯೆಯಲ್ಲಿ ಬಂದ ಶ್ರೀವಾಗೀಶತೀರ್ಥರು, ಶ್ರೀಕವೀಂದ್ರ ತೀರ್ಥರು, ಶ್ರೀರಾಮಚಂದ್ರ ತೀರ್ಥರು, ಶ್ರೀವಿಬುಧೇ೦ದ್ರ ತೀರ್ಥರು ವಿಶೇಷವಾಗಿ ನಡೆಸಿಕೊಂಡು ಬಂದು ಶ್ರೀಹರಿವಾಯು ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
               ನಂತರ ಮಾಧ್ವವಾಂಗ್ಮಯದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದ ಕೀರ್ತಿ ಶ್ರೀರಾಮಚಂದ್ರ ತೀರ್ಥರ ಕರಕಮಲ ಸಂಜಾತರಾದ ಶ್ರೀವಿಬುಧೇ೦ದ್ರ ತೀರ್ಥರಿಗೆ ಸಲ್ಲುತ್ತದೆ. ಅವರ ಚರಮ ಶ್ಲೋಕವೇ ಹೇಳುವಂತೆ ಕೆರಳದಿಂದ ಹಿಮಾಲಯದಪರ್ಯಂತ ಅದ್ವೈತ-ಶೈವವಾದಿಗಳನ್ನು ಗುರುಗಳ ಅನುಗ್ರಹದಿಂದ ನಿರಾಕರಿಸಿ, ಅನೇಕ ಜಯಪತ್ರಿಕೆಗಳನ್ನು ಪಡೆದು, ಅವೆಲ್ಲವನ್ನು ತಿರುಪತಿಯ ಸನ್ನಿಧಾನದಲ್ಲಿ ಭಗವಂತನಿಗೆ ಸಮರ್ಪಿಸಿದ ಕೀರ್ತಿ ಅವರದ್ದು. ಇವರ ಶ್ರೀಮನ್ಯಾಯಸುಧಾಗ್ರಂಥದಲ್ಲಿನ ನೈಪುಣ್ಯಕ್ಕೆಇವರ ಹತ್ತಿರ ಅಧ್ಯಯನ ಮಾಡಿದ ಮಹಾನುಭಾವರಾದ ದೃವಾಂಶಸಂಭೂತರಾದ ಶ್ರೀಪಾದರಾಜರೇ ಸಾಕ್ಷಿ. ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಪ್ರಪ್ರಥಮ ಟಿಪ್ಪಣಿ 'ಬರೆದು ಮಹದುಪಕಾರ ಮಾಡಿದ ಕೀರ್ತಿ ಶ್ರೀವಿಬುಧೇ೦ದ್ರರ ವಿದ್ಯಾಶಿಷ್ಯರಾದ ಶ್ರೀಪಾದರಾಜರಿಗೆ ಸಲ್ಲುತ್ತದೆ. ಇದು ಶ್ರೀವಿಭುಧೇ೦ದ್ರ ತೀರ್ಥರ ವಿದ್ಯಾಪರಂಪರೆಯ ಕೊಡುಗೆ. ಶ್ರೀಪಾದರಾಜರ ಮಹದುಪಕಾರ.
                 ಕೇರಳದಿಂದ ಹಿಮಾಚಲಪರ್ಯಂತ ಸತ್ಸಿದ್ಧಾಂತವನ್ನು ಪ್ರತಿಷ್ಠಾಪಿಸಿ ವೇದಾಂತಸಾಮ್ರಾಜ್ಯವನ್ನು ಅನೇಕ ವರ್ಷಗಳ ಕಾಲ ಆಳಿದ ಮಾಹಾನುಭಾವರಾದ ಶ್ರೀವಿಬುಧೆಂದ್ರ ತೀರ್ಥರ ನಂತರ ಅವರ ಕರಕಮಲ ಸಂಜಾತರಾದ ಶ್ರೀಜಿತಾಮಿತ್ರ ತೀರ್ಥರು ವಿಶೇಷ ತಪಸ್ಸನ್ನಾಚಿರಿಸುತ್ತ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಪ್ರಚಾರಮಾಡಿ ವಿಶೇಷವಾದ ಸೇವೆಯನ್ನು ಮಾಡಿದರು. ಶ್ರೀವಿಬುಧೇಂದ್ರ ತೀರ್ಥರ ವಿದ್ಯಾಶಿಷ್ಯರಾದ ಶ್ರೀಪಾದರಾಜರು, ಶ್ರೀಜಿತಾಮಿತ್ರತೀರ್ಥರ ಮೇಲಿನ ಕೀರ್ತನೆಯಲ್ಲಿ ಶ್ರೀಜಿತಾಮಿತ್ರ ತೀರ್ಥರನ್ನು "ಸೂತ್ರಪಾಠ ಪಠಿಸುವ ಸುಗುಣ ಜಿತಾಮಿತ್ರ" " ಅಗಣಿತ ಮಹಿಮ"  ಇತ್ಯಾದಿಯಾಗಿ ಸ್ತುತಿಸಿದ್ದಾರೆ. ಇದಲ್ಲದೆ ಇವರ ಗ್ರಂಥರಚನಾ-ಪಾಠಡಾ ಬಗ್ಗೆ ಹೇಳುವಾಗ "ಮಧ್ವಶಾಸ್ತ್ರದ ಗ್ರಂಥಸಾರದ ಪದ್ಧತಿ ತಿಳಿದಂಥ, ಅದ್ವೈತ ಪಂಥ ಮುರಿದು ಮತ ಉದ್ಧರಿಸಿದಂಥ" ಎಂದು ಶ್ರೀಜಿತಾಮಿತ್ರ ತೀರ್ಥರು ಮಾಡಿದ ಸ್ವಮತಸ್ಥಾಪನಾ ಕಾರ್ಯವನ್ನು ವರ್ಣಿಸಿದ್ದಾರೆ. ಇವರ ಗ್ರಂಥರಚನಾ-ಪಾಠನಾ ಸಾಮರ್ಥ್ಯ ಶ್ರೀಪಾದರಾಯರು ವರ್ಣಿಸುವಾಗ ಅದರ  ಮಹತ್ವ ನಮಗೆ ತಿಳಿದು ಬರುತ್ತದೆ.
               ಇವರ ಶಿಷ್ಯರಾದ ಶ್ರೀರಘುನಂದನ ತೀರ್ಥರು ಮಧ್ವಸಿದ್ಧಾಂತ ಸ್ಥಾಪನೆ ಮಾಡಿದ ವಿಚಾರ ಕೆಲ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಶ್ರೀ ರಘುನಂದನ ತೀರ್ಥರ ಕಾರಕಮಲಸಂಜಾತರಾದ ಶ್ರೀ ಸುರೇಂದ್ರ ತೀರ್ಥರು ಅನಶನವೃತದಿಂದ ಭಾರತವನ್ನು ಮೂರುಬಾರಿ ಸಂಚಾರ ಮಾಡಿದ ಮಹಾನುಭಾವರು. ಇವರು ಟಿಪ್ಪಣಿಗಳನ್ನು ರಚಿಸಿ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದ ತಪಸ್ವಿಗಳು. ಇವರೂ  ಶ್ರೀಮನ್ಯಾಯಸುಧೆಗೆ ಟಿಪ್ಪಣಿಗಳನ್ನು ಬರೆದು ಸುಧಾಗ್ರಂಥದ ಪ್ರಚಾರ ಮಾಡಿದ್ದಾರೆ.
               ಚತುಷ್ಷಷ್ಟಿ ವಿದ್ಯಾಪ್ರವೀಣರಾದ, ಚತುರಧಿಕ ಶತ ಗ್ರಂಥರತ್ನಪ್ರಣಿತರಾದ ಶ್ರೀಸುರೇಂದ್ರವೃತಿವರತನಯರಾದ, ಶ್ರೀವ್ಯಾಸರಾಯರ ವಿದ್ಯಾಶಿಷ್ಯರಾದ ಶ್ರೀವಿಜಯೀ೦ದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥಕ್ಕೆ ಶ್ರೀಮನ್ಯಾಯಸುಧಾಬಿಂದು ಎಂಬ  ಟಿಪ್ಪಣಿ ಬರೆದು ತಮ್ಮದೇ ಆದ ಕೊಡುಗೆಯನ್ನ ಟಿಪ್ಪಣಿಗಳ ಪ್ರಪಂಚಕ್ಕೆ ನೀಡಿದ್ದಾರೆ.
                ಇವರ ಶಿಷ್ಯರಾದ ಮಹಾತಪಸ್ವಿಗಳಾದ ಶ್ರೀಸುಧೀಂದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥದ ಪಾಠ ಪ್ರವಚನಗಳಲ್ಲಿ ವಿಶೇಷ ಆಸಕ್ತಿ ಇರಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾದವರು. ಇವರ ಮಹಿಮೆಯನ್ನು,  ವಾಗ್ದೇವಿಯು "ಶ್ರೀಸುಧೀಂದ್ರ ತೀರ್ಥರಲ್ಲಿ ನಾನು ನೆಲೆಸಿದ್ದೇನೆ" ಎಂದು ರಾಯರಿಗೆ ಆಶ್ರಮ ತೆಗೆದುಕೊಳ್ಳುವಂತೆ ಮನವೊಲೈಕೆಗೆ ಬಂದಾಗ ಹೇಳಿದ್ದನ್ನು ನೋಡಿ ತಿಳಿದುಕೊಳ್ಳಬಹುದು. ಶ್ರೀರಾಘವೇಂದ್ರ ತೀರ್ಥರಂತಹ ವಿದ್ವನ್ಮೂರ್ಧನ್ಯರನ್ನು ತಯಾರು ಮಾಡಿ, ಜಗದ್ಗುರು ಶ್ರೀಮದಾಚಾರ್ಯರ ಪೀಠದ ಮೇಲೆ ಕುಳ್ಳರಿಸಿದ ಮಹಾನ್ ಕೀರ್ತಿ ಶ್ರೀಸುಧೀಂದ್ರರದ್ದು. ಅಂತಹ ಮಹದುಪಕಾರಕ್ಕೆ ಇಡೀ ಮಾಧ್ವ ಸಮಾಜ ಎಂದೆಂದಿಗೂ  ಅವರ ಋಣ ತೀರಿಸಲು ಸಾಧ್ಯವಿಲ್ಲಾ. ಇವರು ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಟಿಪ್ಪಣಿ ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...